ಬೆಂಗಳೂರಿಗೆ ಮತ್ತೆ ಕಸಬಿಸಿ! ನಗರದಲ್ಲಿ ಪ್ರತಿದಿನ 6,000 ಟನ್‌ ಕಸ ಉತ್ಪತ್ತಿ!

Kannadaprabha News   | Kannada Prabha
Published : Feb 19, 2026, 07:54 AM IST
Garbage

ಸಾರಾಂಶ

ಬೆಂಗಳೂರಿನ ಹೊರವಲಯದ ಬೆಳ್ಳಹಳ್ಳಿ ಮತ್ತು ಮಿಟ್ಟಗಾನಹಳ್ಳಿ ಡಂಪಿಂಗ್ ಯಾರ್ಡ್‌ಗಳಲ್ಲಿ ಗ್ರಾಮಸ್ಥರು 150ಕ್ಕೂ ಹೆಚ್ಚು ಕಸದ ಲಾರಿಗಳನ್ನು ತಡೆದಿದ್ದಾರೆ. ಅಸಮರ್ಪಕ ನಿರ್ವಹಣೆ, ಅಭಿವೃದ್ಧಿ ಶುಲ್ಕ ಪಾವತಿಸದಿರುವುದು ಮತ್ತು ಇತ್ತೀಚಿನ ಅಪಘಾತಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಡಂಪಿಂಗ್ ಯಾರ್ಡ್‌ಗಳ ಅಸಮರ್ಪಕ ನಿರ್ವಹಣೆ, ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಶುಲ್ಕ ಪಾವತಿಸದ ಹಿನ್ನೆಲೆಯಲ್ಲಿ ನಗರ ಹೊರ ವಲಯದ ಬೆಳ್ಳಹಳ್ಳಿ ಮತ್ತು ಮಿಟ್ಟಗಾನಹಳ್ಳಿ ಡಂಪಿಂಗ್ ಯಾರ್ಡ್‌ಗಳಲ್ಲಿ ಕಸ ಡಂಪ್ ಮಾಡಲು ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ 150ಕ್ಕೂ ಹೆಚ್ಚು ಲಾರಿಗಳನ್ನು ತಡೆ ಹಿಡಿದಿದ್ದಾರೆ.

ಇದರಿಂದಾಗಿ ನಗರದಲ್ಲಿ ಕಸದ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ದಟ್ಟವಾಗಿದೆ. ಮನೆಗಳು, ವಾಣಿಜ್ಯ ಮಳಿಗೆಗಳು, ಸಾರ್ವಜನಿಕ ಸ್ಥಳಗಳಿಂದ ಕಸ ಸಂಗ್ರಹಣೆಯು ನಿಂತು ಹೋಗಿ ಕಸದ ಸಮಸ್ಯೆ ತೀವ್ರ ಸ್ವರೂಪ ಪಡೆಯುವ ಭೀತಿ ಎದುರಾಗಿದೆ.

ಬೆಂಗಳೂರು ಉತ್ತರ ಪಾಲಿಕೆ ವ್ಯಾಪ್ತಿಯ ಬೆಳ್ಳಹಳ್ಳಿ ಡಂಪಿಂಗ್ ಯಾರ್ಡ್‌ನಲ್ಲಿ ನೂರಕ್ಕೂ ಹೆಚ್ಚು ಕಸದ ಲಾರಿಗಳನ್ನು ಮಂಗಳವಾರ ರಾತ್ರಿಯಿಂದಲೇ ತಡೆ ಹಿಡಿಯಲಾಗಿದೆ. ಮತ್ತೊಂದೆಡೆ ಮಹದೇವಪುರ ವ್ಯಾಪ್ತಿಯ ಮಿಟ್ಟಗಾನಹಳ್ಳಿಯಲ್ಲಿ ಕಸದ ಲಾರಿಯಿಂದ ಸಂಭವಿಸಿದ ಅಪಘಾತದಲ್ಲಿ ಮಹಿಳೆ ಮೃತಪಟ್ಟಿರುವ ಕಾರಣ, ಸುರಕ್ಷತಾ ಕ್ರಮಕ್ಕೆ ಆಗ್ರಹಿಸಿ ಸ್ಥಳೀಯರು ಕಸದ ಲಾರಿಗಳಿಗೆ ತಡೆಯೊಡ್ಡಿದ್ದಾರೆ. ಮಿಟ್ಟಗಾನಹಳ್ಳಿಗೆ ಸಾಗಿಸಬೇಕಿದ್ದ ಕಸದ ವಾಹನಗಳನ್ನು ಕೂಡ ಬೆಳ್ಳಹಳ್ಳಿ ಕಡೆ ರವಾನಿಸಲಾಗಿದೆ. ಇದು ಸಮಸ್ಯೆ ಗಂಭೀರ ಸ್ವರೂಪ ಪಡೆಯಲು ಕಾರಣವಾಗಿದೆ. ಬೆಳ್ಳಹಳ್ಳಿ ಡಂಪಿಂಗ್ ಯಾರ್ಡ್ ಬೆಂಗಳೂರು ಪೂರ್ವ ಮತ್ತು ಉತ್ತರ ಭಾಗದ ಕಸವನ್ನು ನಿರ್ವಹಿಸುತ್ತಿದೆ.

ಅಭಿವೃದ್ಧಿ ನಿಧಿ ಬಿಡುಗಡೆಯಾಗಿಲ್ಲ:

ಬೆಳ್ಳಹಳ್ಳಿಯಲ್ಲಿ ಕಸವನ್ನು ವಿಲೇವಾರಿ ಮಾಡುವ ಕಾರಣ ನಿಯಮಾನುಸಾರ ಕಸ ವಿಲೇವಾರಿಯಾಗುವ ವ್ಯಾಪ್ತಿಯ ಸುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ನಿಧಿಯನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಬೇಕು. ಆದರೆ, ಕಳೆದ 2 ವರ್ಷಗಳಿಂದ ಕೋಟ್ಯಂತರ ರು. ನಿಧಿ ಬಿಡುಗಡೆಯಾಗದೆ ಬಾಕಿ ಉಳಿದಿದೆ.

ಅಲ್ಲದೇ ಡಂಪಿಂಗ್ ಯಾರ್ಡ್‌ನಲ್ಲಿ ನಿಗದಿಗಿಂತ ಹೆಚ್ಚು ಕಸ ವಿಲೇವಾರಿ, ಬೃಹತ್ ಗಾತ್ರದ ಲಾರಿಗಳ ಸಂಚಾರದಿಂದ ಸ್ಥಳೀಯರಿಗೆ ಸಮಸ್ಯೆಯಾಗುತ್ತಿದೆ. ಕಸವನ್ನು ಸರಿಯಾಗಿ ವಿಲೇವಾರಿ ಮಾಡುತ್ತಿಲ್ಲ. ಇದರಿಂದ ಸುತ್ತಲಿನ ಪರಿಸರ ಹಾಳಾಗುತ್ತಿದೆ. ಪಶುಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಥಳೀಯರ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಸ್ಥಳೀಯ ಶಾಸಕ ಧೀರಜ್ ಮುನಿರಾಜು, ಕಸ ವಿಲೇವಾರಿ ವಿಚಾರದಲ್ಲಿ ಅನೇಕ ಸಮಸ್ಯೆಗಳಿವೆ. ಹೀಗಾಗಿ, ಈ ಭಾಗದಲ್ಲಿ ಕಸ ಸುರಿಯುವುದು ಬೇಡವೇ ಬೇಡ ಎಂಬುದು ನಮ್ಮ ಆಗ್ರಹವಾಗಿದೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ನಿತ್ಯ 6,000 ಟನ್ ಕಸ ಉತ್ಪತ್ತಿಯಾಗುತ್ತದೆ. ಅದನ್ನು ಮಿಟ್ಟಗಾನಹಳ್ಳಿ, ಕಣ್ಣೂರು, ಚಿಕ್ಕನಾಗಮಂಗಲ, ಕನ್ನಹಳ್ಳಿ, ದೊಡ್ಡಬಿದರಕಲ್ಲು ಮತ್ತು ಬೆಳ್ಳಹಳ್ಳಿಗಳಲ್ಲಿನ ಡಂಪಿಂಗ್ ಯಾರ್ಡ್‌ಗಳಲ್ಲಿ ವಿಲೇವಾರಿ ಮಾಡಲಾಗುತ್ತದೆ.

ಏನಿದು ಸಮಸ್ಯೆ?

- ಬೆಂಗಳೂರಿನಲ್ಲಿ ಪ್ರತಿದಿನ 6000 ಟನ್‌ ಕಸ ಉತ್ಪತ್ತಿಯಾಗುತ್ತದೆ. ಅದನ್ನು 6 ಕಡೆ ವಿಲೇವಾರಿ ಮಾಡಲಾಗುತ್ತದೆ

- ನಿಯಮ ರೀತಿ ಕಸ ವಿಲೇವಾರಿ ಮಾಡುತ್ತಿಲ್ಲ, ಪಂಚಾಯಿತಿಗಳಿಗೆ 2 ವರ್ಷಗಳಿ ನಿಧಿ ಬಿಡುಗಡೆ ಮಾಡಿಲ್ಲ ಎಂದು ಸಿಟ್ಟು

- ಬೆಳ್ಳಹಳ್ಳಿ ಕಸ ಘಟಕದಲ್ಲಿ ಕಸದ ಲಾರಿಗಳಿಗೆ ಗ್ರಾಮಸ್ಥರ ತಡೆ. 150 ಲಾರಿಗಳನ್ನು ತಡೆಹಿಡಿದಿರುವ ಜನರು

- ಮಿಟ್ಟಗಾನಹಳ್ಳಿಯಲ್ಲಿ ಕಸದ ಲಾರಿಗೆ ಸಿಲುಕಿ ಮಹಿಳೆ ಸಾವು. ಸುರಕ್ಷತಾ ಕ್ರಮಕ್ಕೆ ಆಗ್ರಹಿಸಿ ಕಸದ ಲಾರಿಗೆ ಜನರ ತಡೆ

- ಹೀಗಾಗಿ ನಿಂತಲ್ಲೇ ನಿಂತ ನೂರಾರು ಕಸದ ಲಾರಿಗಳು. ಜಿಬಿಎ ಅಧಿಕಾರಿಗಳಿಂದ ಜನರ ಮನವೊಲಿಕೆಗೆ ಕಸರತ್ತು

- ಇದರಿಂದಾಗಿ ರಾಜಧಾನಿಯಲ್ಲಿ ಕಸದ ಸಮಸ್ಯೆ ಉಲ್ಬಣ. ಮನೆ, ಕಚೇರಿಗಳಿಂದ ಕಸ ಸಂಗ್ರಹಣೆಗೆ ಹೊಡೆತ ಸಾಧ್ಯತೆ

ಸಮಸ್ಯೆ ಪರಿಹರಿಸಲು ಪ್ರಯತ್ನ- ಮಹೇಶ್ವರ ರಾವ್

ಕಸದ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲು ನಮ್ಮ ಅಧಿಕಾರಿಗಳು ಸ್ಥಳೀಯರು ಹಾಗೂ ಶಾಸಕರ ಜೊತೆ ಮಾತನಾಡುತ್ತಿದ್ದಾರೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಸ್ಯೆ ಪರಿಹಾರಕ್ಕೆ ಶಾಸಕರ ಸಹಕಾರ ಕೋರುತ್ತೇವೆ. ಡಂಪಿಂಗ್ ಯಾರ್ಡ್ ಸುತ್ತಲಿನ ಪ್ರದೇಶ ಅಭಿವೃದ್ಧಿಗೆ ನಿಗದಿಯಾಗಿರುವ ನಿಧಿಯನ್ನು 2 ವರ್ಷಗಳಿಂದ ಬಿಡುಗಡೆ ಮಾಡಿಲ್ಲ ಎಂದು ಜನರು ದೂರಿದ್ದಾರೆ. ಮೊತ್ತವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಆಯುಕ್ತರು ಹೇಳಿದ್ದಾರೆ.

ಬಹುತೇಕ ಡಂಪಿಂಗ್ ಯಾರ್ಡ್‌ಗಳ ಬಳಿ ಕಾಂಪೋಸ್ಟ್ ಕೇಂದ್ರಗಳಿವೆ. ಆದರೆ, ಬೆಳ್ಳಹಳ್ಳಿಗೆ ಮಿಶ್ರ ಕಸ ಸಾಗಣೆಯಾಗುತ್ತಿದೆ. ಇದನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಬೇಕು. ಅದಕ್ಕಾಗಿ ನಾಗರಿಕರು ಕಸವನ್ನು ಮನೆಯಲ್ಲೇ ಪ್ರತ್ಯೇಕಿಸಿ ನೀಡಬೇಕು. ಅಲ್ಲದೇ ಭವಿಷ್ಯದಲ್ಲಿ ವ್ಯವಸ್ಥಿತವಾಗಿ, ವೈಜ್ಞಾನಿಕವಾಗಿ ಕಸವನ್ನು ಕಾಂಪೋಸ್ಟ್ ಮಾಡುವ ಮೂಲಕ ವಿಲೇವಾರಿ ಮಾಡುವ ಯೋಜನೆ ಇದೆ ಎಂದು ಆಯುಕ್ತ ಮಹೇಶ್ವರ ರಾವ್ ಹೇಳಿದ್ದಾರೆ.

ಅಶೋಕ್‌, ಬಿವೈವಿ ಮನೆ ಬಳಿ ಕಸ ಸುರೀಬೇಕಾ?

ಕಸ ಹಾಕಬಾರದು ಎಂದು ಮಾಜಿ ಶಾಸಕ ಅರವಿಂದ ಲಿಂಬಾವಳಿ ಬಳಿಕ ಈಗ ದೊಡ್ಡಬಳ್ಳಾಪುರ ಶಾಸಕರು ಬ್ಲಾಕ್‌ಮೇಲ್‌ ಮಾಡಿದ್ದಾರೆ. ಹೀಗೆ ಮಾಡಿದರೆ ಕಸ ಎಲ್ಲಿ ಹೋಗಬೇಕು? ಆರ್‌. ಅಶೋಕ್‌, ವಿಜಯೇಂದ್ರ ಮನೆ ಅಥವಾ ಬಿಜೆಪಿ ಕಚೇರಿ ಎದುರು ಕಸ ಸುರಿಯಬೇಕಾಗುತ್ತದೆ.

- ಡಿ.ಕೆ. ಶಿವಕುಮಾರ್‌, ಡಿಸಿಎಂ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ರಣಜಿ ಟ್ರೋಫಿ - 67 ವರ್ಷಗಳಲ್ಲೇ ಮೊದಲ ಸಲ ಜಮ್ಮು-ಕಾಶ್ಮೀರ ಫೈನಲ್‌ಗೆ ಲಗ್ಗೆ! ಹುಬ್ಬಳ್ಳಿಯಲ್ಲಿ ಫೈನಲ್ ಮ್ಯಾಚ್!
ಎಐ ಜಾಗತಿಕ ಶೃಂಗದಲ್ಲಿ ಗಿನ್ನೆಸ್ ದಾಖಲೆ! ಜವಾಬ್ದಾರಿಯುತ AI ಬಳಸುವುದಾಗಿ 2.50 ಲಕ್ಷ ವಿದ್ಯಾರ್ಥಿಗಳ ಶಪಥ