
ಬೆಂಗಳೂರು(ಜ.27): ಪ್ರತಿಷ್ಠಿತ, ಏಷ್ಯಾದ ಅತೀ ದೊಡ್ಡ ಏರ್ ಶೋಗೆ ಬೆಂಗಳೂರು ಸಜ್ಜಾಗಿದೆ. ಫೆಬ್ರವರಿ 13 ರಿಂದ 17ರ ವರೆಗೆ ಬೆಂಗಳೂರಿನ ಯಲಹಂಕಾ ವಾಯುನೆಲೆಯಲ್ಲಿ ಏರೋ ಇಂಡಿಯಾ ಶೋ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಭರ್ಜರಿ ತಯಾರಿ ನಡೆಯುತ್ತಿದೆ. ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹತ್ವದ ನಿರ್ಧಾರ ಕೈಗೊಂಡಿದೆ. ಏರ್ ಶೋ ಕಾರಣ ಯಲಹಂಕ ವಾಯುನೆಲೆಯ ಸುತ್ತ ಮುತ್ತ 10 ಕಿಲೋಮೀಟರ್ ಪ್ರದೇಶದಲ್ಲಿ ಯಾವುದೇ ಮಾಂಸ ಮಾರಾಟ, ಮಾಂಸಾಹಾರಿ ತಿನಿಸುಗಳ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಏರ್ ಶೋ ವೈಮಾನಿಕ ಪ್ರದರ್ಶನದ ಸುರಕ್ಷತೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅತೀ ದೊಡ್ಡ ವೈಮಾನಿಕ ಪ್ರದರ್ಶನಕ್ಕಾಗಿ ಸಕಲ ತಯಾರಿ ನಡೆಯುತ್ತಿದೆ. ಇದರ ಅಂಗವಾಗಿ ಬಿಬಿಎಂಪಿ ಅಧಿಕಾರಿಗಳು ಯಲಹಂಕ ವಾಯುನೆಲೆ ಸುತ್ತಮುತ್ತಲಿನ ಮಾಂಸಾಹಾರಿ ಅಂಗಡಿಗಳು, ಹೊಟೆಲ್, ಬೀದಿ ಬದಿ ವ್ಯಾಪಾರಿಗಳ ಬಳಿಗೆ ತೆರಳಿ ನೋಟಿಸ್ ನೀಡಿದ್ದಾರೆ. ಇಂಡಿಯನ್ ಏರ್ಕ್ರಾಫ್ಟ್ ನಿಯಮ 1937 ಹಾಗೂ ಬಿಬಿಎಂಪಿ ನಿಯಮ 2020ರ ಅನ್ವಯ ಏರ್ ಶೋ ನಡೆಯುವ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಮಾಂಸಾಹಾರ ತಿನಿಸುಗಳು, ಮಾಂಸ ಮಾರಾಟಕ್ಕೆ ಅವಕಾಶವಿಲ್ಲ. ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.
Aero India 2023, ಬೆಂಗಳೂರಲ್ಲಿ ಫೆ.13ರಿಂದ ವೈಮಾನಿಕ ಪ್ರದರ್ಶನ, ಟಿಕೆಟ್ ಬೆಲೆ ಪ್ರಕಟ!
ಮಾಂಸಾಹಾರದಿಂದ ಪಕ್ಷಿಗಳು ಪ್ರದೇಶದಲ್ಲಿ ತಿರುಗಾಡುವ ಹಾಗೂ ಮಾಂಸಕ್ಕಾಗಿ ಹುಡುಕಾಡುವ ಸಾಧ್ಯತೆ ಇದೆ. ಇದು ವೈಮಾನಿಕ ಪ್ರದರ್ಶನಕ್ಕೆ ಅಡ್ಡಿಯಾಗಲಿದೆ. ಇಷ್ಟೇ ಅಲ್ಲ ಹಾರಾಟದ ವೇಳೆ ಪಕ್ಷಿಗಳು ಅಡ್ಡಿಯಾದರೆ ಅತೀ ದೊಡ್ಡ ಅನಾಹುತಕ್ಕೆ ಕಾರಣವಾಗಲಿದೆ. ಹೀಗಾಗಿ ಯಲಹಂಕಾ ವಾಯುನೆಲೆ ಸುತ್ತ ಯಾವುದೇ ಪಕ್ಷಿ ಹಾರಾಟಕ್ಕೂ ಅವಕಾಶವಿಲ್ಲ. ಇದಕ್ಕಾಗಿ ಬಿಬಿಎಂಪಿ ಈ ಕ್ರಮ ಕೈಗೊಂಡಿದೆ.
ಏರೋ ಇಂಡಿಯಾ ಶೋ ಫೆಬ್ರವರಿ 13 ರಿಂದ ಆರಂಭಗೊಳ್ಳುತ್ತಿದೆ. ಆದರೆ ಮಾಂಸ ಮಾರಾಟ ಜನವರಿ 30 ರಿಂದ ಜಾರಿಯಾಗಲಿದ್ದು, ಫೆಬ್ರವರಿ 20ರ ವರೆಗೆ ಇರಲಿದೆ. ಯಲಹಂಕಾ ವಾಯುನೆಲೆ ಸುತ್ತಮುತ್ತಲಿನ ಪ್ರದೇಶದಲ್ಲಿರುವ ನಿವಾಸಿಗಳು ಸಹಕರಿಸಬೇಕಾಗಿ ಬಿಬಿಎಂಪಿ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಪ್ರತಿ ಎರಡು ವರ್ಷಗಳಿಗೊಮ್ಮೆ ಏರ್ ಶೋ ಆಯೋಜಿಸಲಾಗುತ್ತದೆ. ಕಳೆದೆರಡು ವರ್ಷ ಕೋವಿಡ್ ಕಾರಣದಿಂದ ಸರಳವಾಗಿ ಆಚರಿಸಲಾಗಿದೆ. ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಏರೋ ಇಂಡಿಯಾ ಶೋ ಮೊಟ್ಟಮೊದಲ ಬಾರಿ 1996ರಲ್ಲಿ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆದಿತ್ತು. ಅಂದಿನಿಂದ ಈವರೆಗೂ ಪ್ರತಿ 2 ವರ್ಷಕ್ಕೊಮ್ಮೆ ಏರೋ ಇಂಡಿಯಾ ಶೋ ಇಲ್ಲಿಯೇ ನಡೆಸಲಾಗುತ್ತಿದೆ.
ಫೆ.13ರಿಂದ 17ರ ವರೆಗೆ ಏರೋ ಇಂಡಿಯಾ ಶೋ, ಪ್ರಧಾನಿ ಮೋದಿ ಉದ್ಘಾಟನೆ: ಸಿಎಂ ಬೊಮ್ಮಾಯಿ
2019ರಲ್ಲಿ ನಡೆದ ಏರೋ ಇಂಡಿಯಾ ಶೋನಲ್ಲಿ 600ಕ್ಕೂ ಹೆಚ್ಚು ಭಾರತೀಯ ಹಾಗೂ 200 ವಿದೇಶಿ ಕಂಪನಿಗಳು ಭಾಗವಹಿಸಿದ್ದರು. ಏರ್ಶೋ ಹಿಂದಿನ ದಿನ 2 ಸೂರ್ಯ ಕಿರಣ್ ವಿಮಾನಗಳ ಡಿಕ್ಕಿಯಿಂದಾಗಿ ಪೈಲಟ್ ಮೃತಪಟ್ಟಘಟನೆ ನಡೆದಿತ್ತು. ಅಲ್ಲದೇ ಏರ್ಶೋ 3ನೇ ದಿನ ಪಾರ್ಕಿಂಗ್ನಲ್ಲಿ ಅಗ್ನಿ ದುರಂತದಿಂದ 300 ಕಾರುಗಳು ಸುಟ್ಟು ಹೋಗಿದ್ದವು. 2021ರಲ್ಲಿ ಕೋವಿಡ್ ಕಾರಣದಿಂದಾಗಿ ಕೇವಲ 43 ದೇಶಗಳ 530 ಕಂಪನಿಗಳು ಭಾಗವಹಿಸಿದ್ದವು. ಈ ವೇಳೆ ರಕ್ಷಣಾ ಸಚಿವಾಲಯ ಹಾಗೂ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಡುವೆ ಬಹುನಿರೀಕ್ಷಿತ 83 ಎಚ್ಎಲ್ ತೇಜಸ್ ಎಂಕೆ 1 ಒಪ್ಪಂದ ನಡೆದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ