
ನವದೆಹಲಿ(ಮಾ.15): ಬಾಟ್ಲಾ ಹೌಸ್ ಎನ್ಕೌಂಟರ್ ಪ್ರಕರಣದಲ್ಲಿ ದೆಹಲಿ ಪೊಲೀಸ್ ಇನ್ಸ್ಪೆಕ್ಟರ್ ಮೋಹನ್ ಚಂದ್ ಶರ್ಮಾ ಹತ್ಯೆ ಹಿಂದಿನ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸಹಚರ ಆರಿಝ್ ಖಾನ್ಗೆ ದೆಹಲಿ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
ಬಾಟ್ಲಾ ಹೌಸ್ ಎನ್ಕೌಂಟರ್: ಏನಿದು ಪ್ರಕರಣ!
ಮಾರ್ಚ್ 7, 2021ರಂದು ದೆಹಲಿ ನ್ಯಾಯಾಲಯ ಬಾಟ್ಲಾ ಹೌಸ್ ಪ್ರಕರಣದಲ್ಲಿ ಆರಿಜ್ ಖಾನ್ ದೋಷಿ ಎಂದು ತೀರ್ಪು ಪ್ರಕಟಿಸಿತ್ತು. ಇಷ್ಟೇ ಅಲ್ಲ ಮಾರ್ಚ್ 15 ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ಹೇಳಿತ್ತು. ಇದೀಗ ಇದು ವಿಶೇಷ ಪ್ರಕರಣ ಎಂದು ಪರಿಗಣಿಸಿರುವ ಕೋರ್ಟ್ ಅಪರಾಧಿ ಆರಿಝ್ ಖಾನ್ಗೆ ಗಲ್ಲು ಶಿಕ್ಷೆ ಪ್ರಕಟಿಸಿದೆ. ಇಷ್ಟೇ ಅಲ್ಲ, ಇದರ ಜೊತೆಗೆ 11 ಲಕ್ಷ ರೂಪಾಯಿ ದಂಡವಾಗಿ ಪಾವತಿಸಲು ಸೂಚಿಸಿದೆ.
ಗಲ್ಲು ಶಿಕ್ಷೆಗೆ ಒಳಗಾಗಿರುವ ಆರಿಝ್ ಖಾನ್ ದಂಡವಾಗಿ ಪಾವತಿಸುವ 11 ಲಕ್ಷ ರೂಪಾಯಿ ಹಣದಲ್ಲಿ 10 ಲಕ್ಷ ರೂಪಾಯಿ ಮೊತ್ತವನ್ನು ಹತ್ಯೆಯಾದ ಪೊಲೀಸ್ ಇನ್ಸ್ಪೆಕ್ಟರ್ ಮೊಹನ್ ಚಂದ್ ಶರ್ಮಾ ಕುಟಂಬಸ್ಥರಿಗೆ ನೀಡಲು ಕೋರ್ಟ್ ಆದೇಶಿಸಿದೆ.
2008ರಲ್ಲಿ ದೆಹಲಿಯ ಕರೋಲ್ಬಾಗ್ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಆರೋಪಿಗಳು ಜಾಮಿಯಾನಗರದ ಬಾಟ್ಲಾ ಹೌಸ್ನಲ್ಲಿ ಅಡಿಗಿದ್ದಾರೆ ಅನ್ನೋ ಮಾಹಿತಿ ದೆಹಲಿ ಪೊಲೀಸರಿಗೆ ಸಿಕ್ಕಿತ್ತು. ಹೀಗಾಗಿ ಬಾಟ್ಲಾ ಹೌಸ್ಗೆ ಮುತ್ತಿಗೆ ಹಾಕಿದ ಪೊಲೀಸರ ಮೇಲೆ ಅಡಗಿ ಕುಳಿತಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಇನ್ಸ್ಪೆಕ್ಟರ್ ಮೋಹನ್ ಚಂದ್ ಶರ್ಮಾ ಹತ್ಯೆಯಾಗಿದ್ದರು.
ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ ಆರೋಪಿಗಳ ಪೈಕಿ ಕೆಲವರು ತಪ್ಪಿಸಿಕೊಂಡಿದ್ದರೆ ಆರಿಝ್ ಖಾನ್ಗೆ ಪೊಲೀಸರ ಬಲೆಗೆ ಬಿದ್ದಿದ್ದ. ಇದೀಗ ದೆಹಲಿ ನ್ಯಾಯಾಲಾಯ ಈ ಪ್ರಕರಣದಲ್ಲಿ ಆರಿಜ್ ಖಾನ್ಗೆ ಶಿಕ್ಷೆ ವಿಧಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ