
ಬಾರಾಮತಿ (ಜ.28): ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ಭೀಕರ ವಿಮಾನ ಅಪಘಾತದ ರೋಚಕ ಸಿಸಿಟಿವಿ ದೃಶ್ಯಾವಳಿಗಳು ಈಗ ಹೊರಬಿದ್ದಿವೆ. ಗೋಜುಬಾವಿ ಗ್ರಾಮ ಪಂಚಾಯತ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ದೃಶ್ಯಗಳು, ವಿಮಾನವು ಕೆಲವೇ ಸೆಕೆಂಡುಗಳಲ್ಲಿ ಹೇಗೆ ಅಗ್ನಿ ಉಂಡೆಯಾಗಿ ಮಾರ್ಪಟ್ಟಿತು ಎಂಬುದನ್ನು ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಆಕಾಶದಲ್ಲಿ ಅಸ್ಥಿರವಾಗಿ ತೂಗಾಡುತ್ತಿದ್ದ ವಿಮಾನ, ಕ್ಷಣಾರ್ಧದಲ್ಲಿ ನೆಲಕ್ಕೆ ಅಪ್ಪಳಿಸಿ ಸ್ಫೋಟಗೊಳ್ಳುವ ದೃಶ್ಯ ಕಾಳಜದ ನಡುಕ ಹುಟ್ಟಿಸುವಂತಿದೆ.
ಬುಧವಾರ ಬೆಳಿಗ್ಗೆ 8:50ರ ಸುಮಾರಿಗೆ ಸಂಭವಿಸಿದ ಈ ದುರಂತದ ವೇಳೆ ಅಜಿತ್ ಪವಾರ್ (66) ಸೇರಿದಂತೆ ಐವರು ವಿಮಾನದಲ್ಲಿದ್ದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ರನ್ವೇಯಿಂದ ಕೇವಲ 100 ಅಡಿ ಎತ್ತರದಲ್ಲಿದ್ದಾಗ ವಿಮಾನ ನಿಯಂತ್ರಣ ಕಳೆದುಕೊಂಡಿತು. ನೆಲಕ್ಕೆ ಬಡಿದ ತಕ್ಷಣ ಇಡೀ ವಿಮಾನ ಬೆಂಕಿಗೆ ಆಹುತಿಯಾಯಿತು. ಅಷ್ಟಕ್ಕೇ ನಿಲ್ಲದೆ, ಬೆಂಕಿಯ ಜ್ವಾಲೆಗಳ ನಡುವೆಯೇ ಸತತವಾಗಿ 4 ರಿಂದ 5 ಬಾರಿ ಸ್ಫೋಟಗಳು ಸಂಭವಿಸಿದವು. ಇದರಿಂದಾಗಿ ಸಹಾಯ ಮಾಡಲು ಧಾವಿಸಿದ ಸ್ಥಳೀಯರು ವಿಮಾನದ ಹತ್ತಿರ ಹೋಗಲೂ ಸಾಧ್ಯವಾಗದಷ್ಟು ಭೀಕರ ಪರಿಸ್ಥಿತಿ ನಿರ್ಮಾಣವಾಗಿತ್ತು.
ವಿಮಾನ ಗಾಳಿಯಲ್ಲಿ ವಿಚಿತ್ರವಾಗಿ ಸುತ್ತುತ್ತಿರುವುದನ್ನು ಕಂಡು ನಮಗೆ ಅನುಮಾನ ಬಂದಿತ್ತು. ಅದು ರನ್ವೇ ಕಡೆಗೆ ಹೋಗುತ್ತಿದ್ದಂತೆಯೇ ದೊಡ್ಡ ಶಬ್ದದೊಂದಿಗೆ ನೆಲಕ್ಕೆ ಅಪ್ಪಳಿಸಿತು. ಆ ಸ್ಫೋಟದ ತೀವ್ರತೆಗೆ ನಮ್ಮ ಮನೆಯ ಗೋಡೆಗಳೇ ನಡುಗಿದವು ಎಂದು ಸ್ಥಳೀಯ ಮಹಿಳೆಯೊಬ್ಬರು ಘಟನೆಯ ಭೀಕರತೆಯನ್ನು ವಿವರಿಸಿದ್ದಾರೆ. ಬೆಂಕಿ ಅಷ್ಟೊಂದು ವೇಗವಾಗಿ ಹರಡಿತ್ತೆಂದರೆ, ವಿಮಾನದಲ್ಲಿದ್ದವರನ್ನು ರಕ್ಷಿಸಲು ಸಮಯವೇ ಸಿಗಲಿಲ್ಲ.
ಬೂದಿಯಾದ ವಿಮಾನ, ಗುರುತು ಸಿಗದ ಶವಗಳು
ಅಪಘಾತದ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಲಿಲ್ಲ. ವಿಮಾನದಲ್ಲಿದ್ದ ಐವರೂ ದಾರುಣವಾಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಧಾವಿಸಿದ ಪ್ರಮೋದ್ ಮಧುರಿಕರ್ ಎಂಬುವವರು ಹೇಳುವಂತೆ, ಮೃತದೇಹಗಳನ್ನು ಗುರುತಿಸುವುದೇ ಸವಾಲಾಗಿತ್ತು. ಸುಟ್ಟು ಕರಕಲಾಗಿದ್ದ ದೇಹಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದ್ದು, ಇಡೀ ಬಾರಾಮತಿ ಈ ಘಟನೆಯಿಂದ ಆಘಾತಕ್ಕೊಳಗಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ