ಅಯೋಧ್ಯೆಯ ಶ್ರೀರಾಮಮಂದಿರ‘ಆತ್ಮನಿರ್ಭರ’ ದೇಗುಲ ಸಂಕೀರ್ಣ, ಜ.22ರಂದು ವಿಮಾನ ಪಾರ್ಕಿಂಗ್‌ಗೆ ಸ್ಥಳಾಭಾವ

By Kannadaprabha NewsFirst Published Dec 27, 2023, 11:35 AM IST
Highlights

ಅಯೋಧ್ಯೆಯ ಶ್ರೀರಾಮಮಂದಿರ. ‘ಆತ್ಮನಿರ್ಭರ’ ದೇಗುಲ ಸಂಕೀರ್ಣ. ಒಳಚರಂಡಿ ನೀರು ಶುದ್ಧೀಕರಣ, ತ್ಯಾಜ್ಯ ವಿಲೇ ಘಟಕ ಸ್ಥಾಪನೆ. ಅಯೋಧ್ಯೆಗೆ ಜ.22ರಂದು ನೂರಾರು ವಿಮಾನ ಲಗ್ಗೆ. ವಿಮಾನ ಪಾರ್ಕಿಂಗ್‌ಗೆ ಸ್ಥಳಾಭಾವ.  ವಿಮಾನ ದಟ್ಟಣೆ ತಡೆಗೆ ವಾರಾಣಸಿ, ಪ್ರಯಾಗ್‌ರಾಜ್‌, ಗೋರಖಪುರದಲ್ಲಿ ನಿಲುಗಡೆ

ಅಯೋಧ್ಯೆ (ಡಿ.27): ಜ.22ರಂದು ಅಯೋಧ್ಯೆಯಲ್ಲಿ ಲೋಕಾರ್ಪಣೆಯಾಗಲಿರುವ ಭವ್ಯ ಶ್ರೀರಾಮಮಂದಿರ ಆತ್ಮನಿರ್ಭರ ದೇಗುಲ ಸಂಕೀರ್ಣವಾಗಿದೆ. ಒಳಚರಂಡಿ ಹಾಗೂ ನೀರು ಶುದ್ಧೀಕರಣ ಘಟಕಗಳನ್ನು ಹೊಂದಿದೆ. ಅಲ್ಲದೆ ವೃದ್ಧರು ಹಾಗೂ ಅಂಗವಿಕಲರ ಸುಗಮ ಓಡಾಟಕ್ಕೂ ಇಲ್ಲಿ ಅವಕಾಶವಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಗುಲ ಸಮುಚ್ಚಯ ನಿರ್ಮಾಣವಾಗುತ್ತಿರುವ 70 ಎಕರೆ ಪ್ರದೇಶದ ಪೈಕಿ ಶೇ.70ರಷ್ಟು ಭೂಭಾಗ ಹಸಿರಿನಿಂದ ಆವೃತ್ತವಾಗಿರುತ್ತದೆ. 2 ಎಸ್‌ಟಿಪಿ (ಒಳಚರಂಡಿ ನೀರು ಶುದ್ಧೀಕರಣ ಘಟಕ), ಒಂದು ಡಬ್ಲ್ಯುಟಿಪಿ (ನೀರು ಶುದ್ಧೀಕರಣ ಘಟಕ)ಯನ್ನು ಹೊಂದಿರುತ್ತದೆ. ವಿದ್ಯುತ್‌ ಘಟಕದಿಂದ ಪ್ರತ್ಯೇಕವಾದ ಮಾರ್ಗ ದೇಗುಲಕ್ಕೆ ಇರುತ್ತದೆ. ಅಗ್ನಿ ಅನಾಹುತಗಳನ್ನು ಎದುರಿಸಲು ಅಗ್ನಿಶಾಮಕ ವಿಭಾಗವನ್ನೂ ದೇಗುಲ ಹೊಂದಿರುತ್ತದೆ. ಅದಕ್ಕೆ ನೀರು ಒದಗಿಸಲು ಭೂಗತ ಜಲಾಶಯ ನಿರ್ಮಿಸಲಾಗುತ್ತದೆ ಎಂದು ರಾಮಮಂದಿರ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ತಿಳಿಸಿದ್ದಾರೆ. ರಾಮಮಂದಿರದಲ್ಲಿ ವೃದ್ಧರು, ಅಂಗವಿಕಲರಿಗಾಗಿ ಲಿಫ್ಟ್‌ ಹಾಗೂ ರ್‍ಯಾಂಪ್‌ ಸೌಕರ್ಯ ಇರುತ್ತದೆ ಎಂದಿದ್ದಾರೆ.

ಜಟಾಯು ಪ್ರತಿಮೆ ಸ್ಥಾಪನೆ: ಅಯೋಧ್ಯೆಯ ಕುಬೇರ್‌ ತಿಲಾದಲ್ಲಿ ಜಟಾಯು ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಚಂಪತ್ ರಾಯ್‌ ಅವರು ಮಾಹಿತಿ ನೀಡಿದ್ದಾರೆ.

ಬೆಂಗಳೂರಿಗೆ 2 ಸೇರಿ 5 ವಂದೇ ಭಾರತ್, 2 ಅಮೃತ್ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಡಿ. 30 ರಂದು ಹಸಿರು ನಿಶಾನೆ

ಅಯೋಧ್ಯೆಗೆ ಜ.22ರಂದು ನೂರಾರು ವಿಮಾನ ಲಗ್ಗೆ, ವಿಮಾನ ಪಾರ್ಕಿಂಗ್‌ಗೆ ಸ್ಥಳಾಭಾವ
ಶ್ರೀರಾಮ ಮಂದಿರ ಪ್ರತಿಷ್ಠಾಪನೆ ಜ.22ರಂದು ಗಣ್ಯರನ್ನು ಹೊತ್ತ ನೂರಾರು ಬಾಡಿಗೆ ವಿಮಾನಗಳು ಇಲ್ಲಿನ ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದೆ. ಆದರೆ ಅಷ್ಟು ವಿಮಾನಗಳು ಇಲ್ಲಿ ನಿಲ್ಲಿಸಲು ಸ್ಥಳಾವಕಾಶ ಇಲ್ಲದ ಕಾರಣ ಅಕ್ಕಪಕ್ಕದ ಜಿಲ್ಲೆಗಳ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿದೆ.

ಶಿಲ್ಪಕಲೆಗಳ ವೈಭವ, ಪುರಾಣಗಳ ಚಿತ್ರಕಾವ್ಯ... ರಾಮಮಂದಿರ ಒಳಾಂಗಣದ First look!

ರಾಮ ಮಂದಿರ ಪ್ರತಿಷ್ಠಾಪನೆಗೆ ದೇಶದ ಸಾವಿರಾರು ಗಣ್ಯರಿಗೆ ಆಹ್ವಾನವಿದ್ದು, ಅವರಲ್ಲಿ ಹಲವು ಖಾಸಗಿ ವಿಮಾನದಲ್ಲಿ ಬರುವ ನಿರೀಕ್ಷೆ ಇದೆ. ಈ ವಿಮಾನಗಳು ಅಯೋಧ್ಯೆ ನಿಲ್ದಾಣದಲ್ಲಿ ಗಣ್ಯರನ್ನು ಇಳಿಸಿ ನಂತರ ವಾರಾಣಸಿ, ಗೋರಖಪುರ, ಪ್ರಯಾಗ್‌ರಾಜ್‌ ಸೇರಿ ಹಲವು ಸಮೀಪದ ಏರ್‌ಪೋರ್ಟಲ್ಲಿ ತಂಗಲಿವೆ. ಕಾರ್ಯಕ್ರಮ ಮುಗಿದ ಬಳಿಕ ಮತ್ತೆ ಅಯೋಧ್ಯೆಗೆ ತೆರಳಿ ಗಣ್ಯರನ್ನು ಹತ್ತಿಸಿಕೊಂಡು ಆಯಾ ಸ್ಥಳಗಳಿಗೆ ವಾಪಸಾತ್ತವೆ. ಇದರಿಂದಾಗಿ ಅಯೋಧ್ಯೆಯಲ್ಲಿ ವಿಮಾನಗಳ ಆಗಮನ ನಿರ್ಗಮನ ತೊಂದರೆ ಆಗುವುದಿಲ್ಲ ಎಂದು ಮೂಲಗಳು ಹೇಳಿವೆ.

ಇದನ್ನು ಹೊರತುಪಡಿಸಿ ಈಗಾಗಲೇ ಇಂಡಿಗೋ, ಏರ್‌ ಇಂಡಿಯಾ ಬೆಂಗಳೂರು ಸೇರಿ ದೇಶದ ಹಲವು ನಗರಗಳಿಂದ ಅಯೋಧ್ಯೆಗೆ ನೇರ ವಿಮಾನವನ್ನು ಆಯೋಜಿಸುವುದಾಗಿ ತಿಳಿಸಿವೆ.

click me!