ದೇಶದ ಈಶಾನ್ಯದಲ್ಲಿ ಮಳೆಯಬ್ಬರ, ಪ್ರವಾಹ, ಭೂಕುಸಿತ: 32 ಜನ ಸಾವು

Kannadaprabha News   | Kannada Prabha
Published : Jun 02, 2025, 05:25 AM IST
Monsoon rain

ಸಾರಾಂಶ

ದೇಶದ ಈಶಾನ್ಯ ರಾಜ್ಯಗಳಲ್ಲಿ ಮಳೆರಾಯ ತನ್ನ ಅಬ್ಬರವನ್ನು ಇನ್ನಷ್ಟು ಹೆಚ್ಚಿಸಿದ್ದು, ನದಿಗಳೆಲ್ಲಾ ಉಕ್ಕಿ ಹರಿದು, ಪ್ರವಾಹ, ಭೂಕುಸಿತಗಳಂತಹ ಘಟನೆಗಳಿಂದ ಸಾವಿರಾರು ಜನರ ಜೀವನ ಅಸ್ತವ್ಯಸ್ತವಾಗಿದೆ.

ಇಂಫಾಲ್‌/ಅಗರ್ತಲಾ (ಜೂ.02): ದೇಶದ ಈಶಾನ್ಯ ರಾಜ್ಯಗಳಲ್ಲಿ ಮಳೆರಾಯ ತನ್ನ ಅಬ್ಬರವನ್ನು ಇನ್ನಷ್ಟು ಹೆಚ್ಚಿಸಿದ್ದು, ನದಿಗಳೆಲ್ಲಾ ಉಕ್ಕಿ ಹರಿದು, ಪ್ರವಾಹ, ಭೂಕುಸಿತಗಳಂತಹ ಘಟನೆಗಳಿಂದ ಸಾವಿರಾರು ಜನರ ಜೀವನ ಅಸ್ತವ್ಯಸ್ತವಾಗಿದೆ. ಮಳೆ ಸಂಬಂಧಿತ ಅವಘಡಗಳಿಗೆ ಬಲಿಯಾದವರ ಸಂಖ್ಯೆ 32 ತಲುಪಿದೆ. ಜನ ಜೀವ ಉಳಿಸಿಕೊಳ್ಳಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅರುಣಾಚಲ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ ಭೂಕುಸಿತದಲ್ಲಿ 2 ಪರಿವಾರದ 7 ಜನ ಮತ್ತು 2 ಕಾರ್ಮಿಕರು ಸಾವನ್ನಪ್ಪಿದರು.

ಅಸ್ಸಾಂನಲ್ಲಿ ಉಕ್ಕಿದ 10 ನದಿ: ಅಸ್ಸಾಂನಲ್ಲಿ 10 ನದಿಗಳು ಉಕ್ಕೇರಿ 10 ಜಿಲ್ಲೆಗಳ ಬಹುತೇಕ ಪ್ರದೇಶಗಳು ಈಗಾಗಲೇ ಜಲಾವೃತವಾಗಿವೆ. ಭೂಕುಸಿತದಿಂದ 5, ಪ್ರವಾಹಕ್ಕೆ ಸಿಲುಕಿ 3 ಮಂದಿ ಅಸುನೀಗಿದ್ದಾರೆ. ಲಖಿಂಪುರ ಜಿಲ್ಲೆಗೆ ಅತಿ ಹೆಚ್ಚು ಹಾನಿಯಾಗಿದೆ. 78,000 ಜನರಿಗೆ ಅಪಾಯ ಎದುರಾಗಿದೆ. ನದಿಗಳೆಲ್ಲಾ ಉಕ್ಕಿ ಹರಿಯುತ್ತಿದ್ದು, ಸಾಲದ್ದಕ್ಕೆ ಅರುಣಾಚಲ ಮತ್ತು ಮೇಘಾಲಯದಿಂದಲೂ ಪ್ರವಾಹ ನುಗ್ಗಿ ಬರುತ್ತಿದೆ.

ಸಿಎಂ ನಿವಾಸ ಮುಂದೆಯೂ ನೆರೆ: ಮಿಜೋರಂನಲ್ಲಿ ಮ್ಯಾನ್ಮಾರ್‌ನ 3 ನಿರಾಶ್ರಿತರು ಸೇರಿದಂತೆ 6 ಜನ ಸಾವನ್ನಪ್ಪಿದ್ದಾರೆ. ತ್ರಿಪುರದಲ್ಲಿ 16 ವರ್ಷದ ಬಾಲಕ ಮೃತಪಟ್ಟಿದ್ದಾನೆ. ರಾಜಧಾನಿ ಅಗರ್ತಲದಲ್ಲಿ 3 ಗಂಟೆಯಲ್ಲಿ 200 ಎಂ.ಎಂ. ಮಳೆಯಾಗಿದ್ದು, ಸಿಎಂ ನಿವಾಸದ ಮುಂದೆಯೂ ಮೊಣಕಾಲು ಮುಳುಗುವಷ್ಟು ನೀರು ನಿಂತಿದೆ. 

ಸಿಕ್ಕಿಂನಲ್ಲಿ ಅನೇಕರು ಅತಂತ್ರ: ಅತ್ತ ಸಿಕ್ಕಿಂನಲ್ಲಿ ಒಡಿಶಾ, ತ್ರಿಪುರ ಮತ್ತು ಉತ್ತರ ಪ್ರದೇಶದ 11 ಪ್ರವಾಸಿಗರಿದ್ದ ವಾಹನವೊಂದು ತೀಸ್ತಾ ನದಿಗೆ ಬಿದ್ದು ಒಬ್ಬರು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದು, 8 ಮಂದಿ ಕಾಣೆಯಾಗಿದ್ದಾರೆ. ವಿವಿಧೆಡೆಗಳಲ್ಲಿ ಸಿಲುಕಿರುವ ಪ್ರವಾಸಿಗರು ಅತಂತ್ರರಾಗಿದ್ದಾರೆ.

ಮಣಿಪುರದಲ್ಲಿ 883 ಮನೆಗೆ ಹಾನಿ: ಮಣಿಪುರದ ಮಳೆಗೆ 883 ಮನೆಗಳಿಗೆ ಹಾನಿಯಾಗಿದ್ದು, 3,802 ಜನರಿಗೆ ತೊಂದರೆಯಾಗಿದೆ. ರಾಜ್ಯದಲ್ಲಿ ಈವರೆಗೆ 12 ಭೂಕುಸಿತಗಳು ಸಂಭವಿಸಿವೆ.

ಮಳೆ ಪೀಡಿತ ರಾಜ್ಯಗಳ ಸಿಎಂ ಜತೆ ಶಾ ಮಾತು: ಈಶಾನ್ಯ ರಾಜ್ಯಗಳಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಸಾವುನೋವುಗಳು ಸಂಭವಿಸುತ್ತಿರುವ ನಡುವೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅಸ್ಸಾಂ, ಅರುಣಾಚಲ, ಸಿಕ್ಕಿಂನ ಮುಖ್ಯಮಂತ್ರಿಗಳು ಮತ್ತು ಮಣಿಪುರದ ರಾಜ್ಯಪಾಲರ ಜತೆ ಆ ಕುರಿತು ಸಂಭಾಷಿಸಿದ್ದಾರೆ. ಈ ವೇಳೆ, ಸಾಧ್ಯವಿರುವ ಎಲ್ಲಾ ನೆರವು ಒದಗಿಸುವ ಭರವಸೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..