ಅರುಣಾಚಲ ಪ್ರದೇಶದ ಕುಮಿ ನದಿಯಲ್ಲಿ ಮುಳುಗಿ 19 ಕಾರ್ಮಿಕರ ಸಾವು?

By Santosh NaikFirst Published Jul 19, 2022, 12:16 AM IST
Highlights

ಅರುಣಾಚಲ ಪ್ರದೇಶದ ಕುಮಿ ನದಿಯಲ್ಲಿ ಮುಳುಗಿ 19 ಕಾರ್ಮಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇವರೆಲ್ಲರೂ ಅರುಣಾಚಲದಿಂದ ಕಾಲ್ನಡಿಗೆಯಲ್ಲಿ ಅಸ್ಸಾಂಗೆ ತೆರಳುತ್ತಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ.
 

ನವದೆಹಲಿ (ಜುಲೈ 18): ಅರುಣಾಚಲ ಪ್ರದೇಶದ ಕುಮಿ ನದಿಯಲ್ಲಿ ಮುಳುಗಿ 19 ಕಾರ್ಮಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ಕಾರ್ಮಿಕರು ಚೀನಾ ಗಡಿ ಬಳಿ ರಸ್ತೆ ನಿರ್ಮಾಣ ಕೆಲಸ ಮಾಡುತ್ತಿದ್ದರು. ಈದ್ ಸಂದರ್ಭದಲ್ಲಿ ಅಸ್ಸಾಂಗೆ ಹೋಗಬೇಕೆಂದು ಬಯಸಿ, ಗುತ್ತಿಗೆದಾರನಿಗೆ ಮನವಿಯನ್ನೂ ಮಾಡಿದ್ದರು. ಆದರೆ ಬೇಡಿಕೆ ಒಪ್ಪದಿದ್ದಾಗ ಎಲ್ಲರೂ ಕಾಲ್ನಡಿಗೆಯಲ್ಲೇ ಅಸ್ಸಾಂಗೆ ತೆರಳಿದ್ದರು. ಈ ವೇಳೆ ಅರುಣಾಚಲ ಪ್ರದೇಶದಲ್ಲಿ ಕುಮಿ ನದಿ ದಾಟುವಾಗ ಪ್ರವಾಹದಲ್ಲಿ ಎಲ್ಲಾ 19 ಮಂದಿ ಕಾರ್ಮಿಕರು ಕೊಚ್ಚಿಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ. ಇವೆಲ್ಲವನ್ನೂ ಬಾರ್ಡರ್‌ ರೋಡ್‌ ಆರ್ಗನೈಜೇಷನ್‌ (ಬಿಆರ್‌ಓ) ಅರುಣಾಚಲ ಪ್ರದೇಶದಲ್ಲಿ ಚೀನಾ ಗಡಿಯ ಸಮೀಪ ರಸ್ತೆ ನಿರ್ಮಾಣಕ್ಕಾಗಿ ತಂದಿದ್ದರು ಎಂದು ತಿಳಿದು ಬಂದಿದೆ. ಈದ್ ಸಂದರ್ಭದಲ್ಲಿ ಅವರು ಅಸ್ಸಾಂನಲ್ಲಿರುವ ತಮ್ಮ ಮನೆಗೆ ಹೋಗಬೇಕಿತ್ತು. ಕಾರ್ಮಿಕರಿಗೆ ಹಬ್ಬ ಆಚರಿಸಲು ಬಿಡಬೇಕು ಎಂದು ಗುತ್ತಿಗೆದಾರರಿಗೆ ಹಲವು ಬಾರಿ ತಿಳಿಸಲಾಗಿತ್ತು. ಆದರೆ ಗುತ್ತಿಗೆದಾರ ಒಪ್ಪದಿದ್ದಾಗ ಈ ಕಾರ್ಮಿಕರೆಲ್ಲರೂ ಕಾಲ್ನಡಿಗೆಯಲ್ಲಿ ಅಸ್ಸಾಂಗೆ ತೆರಳಿದರು. ಬಂದಿರುವ ಸುದ್ದಿಯ ಪ್ರಕಾರ, ಈ ಕಾರ್ಮಿಕರು ಅರುಣಾಚಲದ ಕುರುಂಗ್ ಕುಮೇ ಜಿಲ್ಲೆಯ ಕಾಡುಗಳಲ್ಲಿ ನಾಪತ್ತೆಯಾಗಿದ್ದು, ಕುಮಿ ನದಿಯ ಪ್ರವಾಹದಲ್ಲಿ ಸಾವಿಗೀಡಾಗಿರಬಹುದು ಎನ್ನಲಾಗಿದೆ.

ಸದ್ಯ, ಜಿಲ್ಲಾಧಿಕಾರಿ ಸ್ಥಳದಿಂದ ಕೇವಲ ಒಂದು ದೇಹವನ್ನು ಮಾತ್ರ ಹೊರತೆಗೆದಿದ್ದಾರೆ, ಆದರೆ ಸ್ಥಳೀಯರ ಪ್ರಕಾರ, ಎಲ್ಲಾ ಕಾರ್ಮಿಕರು ಸಾವನ್ನಪ್ಪಿದ್ದಾರೆ. ನಾಳೆ ಮತ್ತೊಂದು ತಂಡವನ್ನು ಸ್ಥಳಕ್ಕೆ ಕಳುಹಿಸಿ ಉಳಿದ ಕಾರ್ಮಿಕರ ಪತ್ತೆಗೆ ಪ್ರಯತ್ನಿಸಲಾಗುವುದು ಎಂದಿದ್ದಾರೆ.

Latest Videos

ಇದನ್ನೂ ಓದಿ: ಸಿಂಗಟಾಲೂರು ಬ್ಯಾರೇಜಿಂದ 89,000 ಕ್ಯುಸೆಕ್‌ ನೀರು ಬಿಡುಗಡೆ: ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಶುರು

ಘಟನೆ ನಡೆದು ಹಲವು ದಿನ: ಅಂದಹಾಗೆ, ಕುಮಿ ನದಿಯಲ್ಲಿ (Kumi River) ಕಾರ್ಮಿಕರು ಯಾವಾಗ ಮತ್ತು ಹೇಗೆ ಮುಳುಗಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವರು ನದಿ ದಾಟಲು ಪ್ರಯತ್ನಿಸುತ್ತಿದ್ದರೇ? ನದಿ ದಾಟುವ ವೇಳೆ ನದಿಯು ವೇಗವಾಗಿ ಹರಿಯುತ್ತಿತ್ತೇ? ಎನ್ನುವ ಹಲವು ಪ್ರಶ್ನೆಗಳಿದ್ದು, ಅದಕ್ಕೆ ಉತ್ತರಗಳು ಇನ್ನೂ ಸಿಕ್ಕಿಲ್ಲ, ಈ ಕಾರಣದಿಂದಾಗಿ ಪೊಲೀಸರು ಕೂಡ ಈ ಅಪಘಾತದ ಬಗ್ಗೆ ಈವರೆಗೂ ಯಾವ ಮಾಹಿತಿಯನ್ನೂ ನೀಡಿಲ್ಲ. ಕಳೆದ ಒಂದು ವಾರದಿಂದ ಈ ಎಲ್ಲ ಕೂಲಿಕಾರರು ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಮಾತ್ರ ಲಭಿಸಿದೆ. ಈದ್ (Eid) ಆಚರಿಸಲು ಕಾಲ್ನಡಿಗೆಯಲ್ಲಿ ಅಸ್ಸಾಂಗೆ ತೆರಳಿದ್ದರು. ದಾರಿ ಮಧ್ಯೆ ಅವರಿಗೆ ಈ ದೊಡ್ಡ ಅಪಘಾತ ಸಂಭವಿಸಿದೆ ಎನ್ನುವುದಂತೂ ಸ್ಪಷ್ಟವಾಗಿದೆ.

ಇದನ್ನೂ ಓದಿ: ತುಂಗಭದ್ರಾ ತುಂಬಿದ್ರೆ ಸಾಕು ಈ ಗ್ರಾಮದ ಜನ ಜೀವ ಕೈಯಲ್ಲಿ ಹಿಡಿದು ಓಡಾಡ್ತಾರೆ!

ಅರುಣಾಚಲದಲ್ಲಿ ಭಾರೀ ಮಳೆ: ಅರುಣಾಚಲ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಮುಂದಿನ ದಿನಗಳಲ್ಲೂ ಇನ್ನಷ್ಟು ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆ ಕೂಡ ಇದೆ. ಈ ಕಾರಣಕ್ಕಾಗಿ, ಈಗಾಗಲೇ ನದಿಗಳ ನೀರಿನ ಮಟ್ಟವು ಹೆಚ್ಚುತ್ತಿದೆ ಮತ್ತು ಯಾರಾದರೂ ಮುಳುಗಿದರೆ, ಅವರನ್ನು ಉಳಿಸುವುದು ದೊಡ್ಡ ಸವಾಲಾಗಿದೆ.

click me!