ಸೇನೆಗೆ ಅರುಣಾಚಲ ಯುವಕರ ನೇಮಕಕ್ಕೆ ಚೀನಾ ಹುನ್ನಾರ?

By Kannadaprabha NewsFirst Published Aug 12, 2021, 7:47 AM IST
Highlights

* ಅರುಣಾಚಲ ಪ್ರದೇಶದ ಕಾಂಗ್ರೆಸ್‌ ಶಾಸಕನಿಂದ ಆರೋಪ

* ಗಡಿ ಭಾಗದ ಯುವಕರನ್ನು ಸೇನೆಗೆ ನೇಮಿಸಿಕೊಳ್ಳುತ್ತಿರುವ ಶಂಕೆ

ಗುವಾಹಟಿ(ಆ.12): ಟಿಬೆಟನ್‌ ಯುವಕರನ್ನು ಸೇನೆಗೆ ಸೇರಿಸಿಕೊಂಡಿರುವ ಚೀನಾ ಇದೀಗ ಅರುಣಾಚಲ ಪ್ರದೇಶದ ಗಡಿ ಭಾಗದ ಯುವಕರ ಮೇಲೂ ಕಣ್ಣಿಟ್ಟಿದೆ. ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ಅರುಣಾಚಲ ಪ್ರದೇಶದ ಗಡಿ ಭಾಗದ ಯುವಕರನ್ನು ನೇಮಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಪಾಸಿಘಾಟ್‌ ಪ್ರದೇಶದ ಶಾಸಕ ನಿನೊಂಗ್‌ ಎರಿಂಗ್‌ ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶವೊಂದನ್ನು ಪೋಸ್ಟ್‌ ಮಾಡಿರುವ ಎರಿಂಗ್‌, ’ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಚೀನಾದ ಪಿಎಲ್‌ಎ ಟಿಬೆಟ್‌ ಹಾಗೂ ಅರುಣಾಚಲ ಪ್ರದೇಶದ ಯುವಕರನ್ನು ಕೂಡ ಸೇನೆಗೆ ನೇಮಿಸಿಕೊಳ್ಳುತ್ತಿದೆ. ಕೇಂದ್ರ ರಕ್ಷಣಾ ಸಚಿವಾಲಯ ಮತ್ತು ಗೃಹ ಸಚಿವಾಲಯ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಹೇಳಿದ್ದಾರೆ.

‘ಚೀನಾದ ಗಡಿಯಲ್ಲಿ ವಾಸಿಸುತ್ತಿರುವ ನಿಶಿ, ಆದಿ, ಮಿಶಿಮಿ, ಈಡು ಸಮುದಾಯಗಳು ಚೀನಾದ ಲೋಬಾ ಸಮುದಾಯದ ಜೊತೆ ಸಂಬಂಧವನ್ನು ಹೊಂದಿದ್ದಾರೆ. ಲೋಬಾ ಸಮುದಾಯದ ಜನರು ಆಡುವ ಭಾಷೆ ಮತ್ತು ಗಡಿ ಪ್ರದೇಶದ ಜನರ ಆಡು ಭಾಷೆಗೆ ಸಾಕಷ್ಟುಹೋಲಿಕೆಗಳು ಇವೆ. ಹಾಗೆಂದ ಮಾತ್ರಕ್ಕೆ ಅವರು ಚೀನಾದ ಪಿಎಲ್‌ಎ ಅನ್ನು ಸೇರಿಕೊಳ್ಳುತ್ತಾರೆ ಎಂಬ ಅರ್ಥವಲ್ಲ. ಚೀನಾದ ತಂತ್ರವನ್ನು ವಿಫಲಗೊಳಿಸಲು ಭಾರತೀಯ ಸೇನೆ ಸಮರ್ಥವಾಗಿದೆ’ ಎಂಬ ವಿಶ್ವಾಸ ತಮಗಿದೆ.

ಆದರೆ, ಚೀನಾ ಬಿಸಾ ಪ್ರದೇಶದಲ್ಲಿ ಮನೆಗಳನ್ನು ನಿರ್ಮಾಣ ಮಾಡುತ್ತಿದೆ. ಗೆಲ್ಹಿಂಗ್‌ ಮತ್ತು ಅನಿನಿಯಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದೆ. ಚೀನಾ ಗಡಿಯಲ್ಲ ಕೈಗೊಂಡಿರವ ಅಭಿವೃದ್ಧಿ ಕಾರ್ಯಗಳಿಂದ ಗಡಿ ಭಾಗದ ನಿವಾಸಿಗಳು ಪ್ರಭಾವಿತರಾಗಿದ್ದಾರೆ ಎನ್ನುವುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಭಾರತ ಕೂಡ ಪ್ರತಿಯಾಗಿ ಕ್ರಮಗಳನ್ನು ಕೈಗೊಂಡರೆ ಚೀನಾದ ತಂತ್ರವನ್ನು ತಡೆಯಬಹುದಾಗಿದೆ. ರಕ್ಷಣಾ ಸಚಿವಾಲಯ ಅರುಣಾಚಲ ಪ್ರದೇಶದ ಯುವಕರನ್ನು ವಿವಿಧ ಪಡೆಗಳಲ್ಲಿ ನೇಮಿಸಿ ಚೀನಾದೊಂದಿಗಿನ ಅಂತಾರಾಷ್ಟ್ರೀಯ ಗಡಿಯನ್ನು ಕಾಯಲು ನಿಯೋಜನೆ ಮಾಡಬೆಕು ಎಂದು ಹೇಳಿದ್ದಾರೆ.

ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವಗಿದ್ದು, ಮುಂದೆಯೂ ಭಾರತದ ಭಾಗವಾಗಿಯೇ ಇರಲಿದೆ. ಚೀನಾದ ದುಷ್ಕೃತ್ಯಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ವಿದೇಶಾಂಗ ವಿವಹಾರಗಳ ಸಚಿವಾಲಯಕ್ಕೆ ಪತ್ರಬರೆಯುವುದಾಗಿಯೂ ತಿಳಿಸಿದ್ದಾರೆ.

click me!