
ನವದೆಹಲಿ: ವಿದೇಶಕ್ಕೆ ಹೋಗಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ಕನಸು ಹೊತ್ತಿದ್ದ ಭಾರತೀಯ ವಿದ್ಯಾರ್ಥಿನಿಯೊಬ್ಬಳು ಕೆನಡಾದಲ್ಲಿ ಬರ್ಬರವಾಗಿ ಕೊಲೆಯಾಗಿದ್ದಾರೆ. ಪಂಜಾಬ್ನ ಲುಧಿಯಾನ ಮೂಲದ 23 ವರ್ಷದ ದಮನ್ಪ್ರೀತ್ ಕೌರ್ ಅವರನ್ನು ಅವರ ಲಿವ್-ಇನ್ ಪಾರ್ಟ್ನರ್ (ಪ್ರಿಯಕರ) ಕತ್ತು ಹಿಸುಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಎಡ್ಮಂಟನ್ನಲ್ಲಿ ನಡೆದಿದೆ.
ದಮನ್ಪ್ರೀತ್ ಕೌರ್ ಪಂಜಾಬ್ನ ಸಮ್ರಾಲಾ ನಿವಾಸಿಯಾಗಿದ್ದು, ಸುಮಾರು ಐದು ವರ್ಷಗಳ ಹಿಂದೆ ಸ್ಟೂಡೆಂಟ್ ವೀಸಾದ ಮೇಲೆ ಕೆನಡಾಕ್ಕೆ ತೆರಳಿದ್ದರು. ಜುಲೈ 9 ರಂದು ಎಡ್ಮಂಟನ್ನ ಸಿಲ್ವರ್ಬೆರಿ ಬಡಾವಣೆಯ ಮನೆಯೊಂದರಲ್ಲಿ ದಮನ್ಪ್ರೀತ್ ಅವರು ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಜುಲೈ 12 ರಂದು ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಜುಲೈ 14 ರಂದು ನಡೆದ ಮರಣೋತ್ತರ ಪರೀಕ್ಷೆಯಲ್ಲಿ ದಮನ್ಪ್ರೀತ್ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬುದು ದೃಢಪಟ್ಟಿದೆ. ಈ ಸಂಬಂಧ ಕೆನಡಾ ಪೊಲೀಸರು ಅವರೊಂದಿಗೆ ವಾಸವಿದ್ದ 22 ವರ್ಷದ ರಿತೇಶ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯ ಮೇಲೆ ಎರಡನೇ ಹಂತದ ಕೊಲೆ (Second-degree murder) ಪ್ರಕರಣ ದಾಖಲಿಸಲಾಗಿದೆ. ಇದೊಂದು 'ಇಂಟಿಮೇಟ್ ಪಾರ್ಟ್ನರ್ ಹೋಮಿಸೈಡ್' ಅಂದರೆ ಸಂಗಾತಿಯಿಂದ ನಡೆದ ಕೊಲೆ ಎಂದು ಪೊಲೀಸರು ತಿಳಿಸಿದ್ದಾರೆ.
ದಮನ್ಪ್ರೀತ್ ಅವರ ಪೋಷಕರು ತಮ್ಮ ಮಗಳ ವಿದ್ಯಾಭ್ಯಾಸ ಮತ್ತು ವಿದೇಶಿ ಭವಿಷ್ಯಕ್ಕಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು. ಸಾಲ ತೀರಿಸಿ ಕುಟುಂಬಕ್ಕೆ ಆಧಾರವಾಗಬೇಕಿದ್ದ ಮಗಳು ಈಗ ಹೆಣವಾಗಿ ಬರುತ್ತಿರುವುದು ಪೋಷಕರನ್ನು ಆಘಾತಕ್ಕೆ ದೂಡಿದೆ. ದಮನ್ಪ್ರೀತ್ ಅವರ ಮೃತದೇಹವನ್ನು ಭಾರತಕ್ಕೆ ತರಲು 'ಗೋ ಫಂಡ್ ಮಿ' (GoFundMe) ಮೂಲಕ ಆರ್ಥಿಕ ನೆರವು ಸಂಗ್ರಹಿಸಲಾಗುತ್ತಿದೆ.
20,000 ಕೆನಡಿಯನ್ ಡಾಲರ್ ಅಂದರೆ ಸುಮಾರು ₹12.23 ಲಕ್ಷ ರೂಪಾಯಿಗಳು ಗುರಿ ಇಟ್ಟುಕೊಳ್ಳಲಾಗಿದೆ. ಇಲ್ಲಿಯವರೆಗೆ 18,000 ಡಾಲರ್ಗಿಂತ ಹೆಚ್ಚು ಅಂದರೆ ಸುಮಾರು ₹11 ಲಕ್ಷ ರೂಪಾಯಿಗಳಿಗೂ ಅಧಿಕ ಹಣ ಈಗಾಗಲೇ ಸಂಗ್ರಹವಾಗಿದೆ. ಕೆನಡಾದಲ್ಲಿ ಇತ್ತೀಚಿನ ದಿನಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದಾಳಿ ಮತ್ತು ಇಂತಹ ಅಹಿತಕರ ಘಟನೆಗಳು ಅನಿವಾಸಿ ಭಾರತೀಯರಲ್ಲಿ ಆತಂಕ ಮೂಡಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ