
ತಣುಕು (ಆಂಧ್ರಪ್ರದೇಶ): ಉನ್ನತ ವ್ಯಾಸಂಗಕ್ಕಾಗಿ ಸ್ಪೇನ್ಗೆ ತೆರಳಿದ್ದ ಆಂಧ್ರದ ಹುಡುಗಿ ಅಲ್ಲಿನ ಹುಡುಗನ ಮನ ಗೆದ್ದಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯ ತಣುಕು ಪಟ್ಟಣದ (tanuku city) ಪ್ರಿಯದರ್ಶಿನಿ ಮತ್ತು ಸ್ಪೇನ್ ರಾಜಧಾನಿ ಮ್ಯಾಡ್ರಿಡ್ನ ಅಮಿನ್ ಅಲ್ ರಹಾದ್ ಇಬ್ಬರೂ ಈಗ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.
ಪ್ರಿಯದರ್ಶಿನಿ ಅವರು ಏಳು ವರ್ಷಗಳ ಹಿಂದೆ ಎಂಎಸ್ (MS) ಓದುವುದಕ್ಕಾಗಿ ಸ್ಪೇನ್ಗೆ ತೆರಳಿದ್ದರು. ಅಲ್ಲಿ ಮ್ಯಾಡ್ರಿಡ್ ಮೂಲದ ಪಿಎಚ್ಡಿ ಪದವೀಧರ ಅಮಿನ್ ಅಲ್ ರಹಾದ್ ಅವರ ಪರಿಚಯವಾಯಿತು. ಆರಂಭದಲ್ಲಿ ಸ್ನೇಹವಾಗಿದ್ದ ಇವರ ಸಂಬಂಧ ಕಾಲಕ್ರಮೇಣ ಪ್ರೇಮಕ್ಕೆ ತಿರುಗಿತು. ಪರಸ್ಪರರ ಸಂಸ್ಕೃತಿ ಮತ್ತು ವ್ಯಕ್ತಿತ್ವವನ್ನು ಗೌರವಿಸುತ್ತಾ ಬಂದ ಈ ಜೋಡಿ, ಜೀವನದುದ್ದಕ್ಕೂ ಜೊತೆಯಾಗಿ ಇರಲು ನಿರ್ಧರಿಸಿ ತಮ್ಮ ಪ್ರೀತಿಯ ವಿಷಯವನ್ನು ಮನೆಯವರಿಗೆ ತಿಳಿಸಿದರು.
ಪ್ರಿಯದರ್ಶಿನಿ ಅವರ ಜೀವನದ ಹಾದಿ ಅಷ್ಟು ಸುಲಭವಾಗಿರಲಿಲ್ಲ. ತಂದೆಯ ಸಾವಿನ ನಂತರ ಅವರ ತಾಯಿ ಭಾರತಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾ ಕಷ್ಟಪಟ್ಟು ಮಗಳನ್ನು ಓದಿಸಿದ್ದರು. ಮಗಳ ನಿರ್ಧಾರಕ್ಕೆ ತಾಯಿ ಪ್ರೀತಿಯಿಂದಲೇ ಒಪ್ಪಿಗೆ ನೀಡಿದರು. ಇತ್ತ ಸ್ಪೇನ್ನಲ್ಲಿರುವ ಅಮಿನ್ ಅವರ ಕುಟುಂಬವೂ ಈ ವಿವಾಹಕ್ಕೆ ಹಸಿರು ನಿಶಾನೆ ತೋರಿಸಿತು.
ತಮ್ಮ ಮಗ ಭಾರತೀಯ ಹುಡುಗಿಯನ್ನು ಮದುವೆಯಾಗುತ್ತಿದ್ದಾನೆ ಎಂಬ ವಿಷಯ ತಿಳಿದು ಅಮಿನ್ ಅವರ ಇಡೀ ಕುಟುಂಬ ಮ್ಯಾಡ್ರಿಡ್ನಿಂದ ಆಂಧ್ರದ ತಣುಕುಗೆ ಆಗಮಿಸಿತ್ತು. ತಣುಕುನಲ್ಲಿರುವ ಫಂಕ್ಷನ್ ಹಾಲ್ನಲ್ಲಿ ಅಪ್ಪಟ ತೆಲುಗು ಸಂಪ್ರದಾಯದಂತೆ ಈ ಮದುವೆ ವೈಭವದಿಂದ ನಡೆಯಿತು.
ದಕ್ಷಿಣ ಭಾರತದ ಮದುವೆಯ ವಿಧಿವಿಧಾನಗಳು, ಊಟದ ವೈವಿಧ್ಯತೆ ಮತ್ತು ಸಂಪ್ರದಾಯಗಳನ್ನು ನೋಡಿ ಸ್ಪ್ಯಾನಿಶ್ ಕುಟುಂಬದವರು ಬೆರಗಾದರು. ಸ್ಪ್ಯಾನಿಶ್ ಹುಡುಗ ಅಮಿನ್ ತೆಲುಗು ಸಂಪ್ರದಾಯದಂತೆ ಪಂಚೆ ಉಟ್ಟು, ಹಸೆಮಣೆ ಏರಿ ಪ್ರಿಯದರ್ಶಿನಿಯ ಕೊರಳಿಗೆ ತಾಳಿ ಕಟ್ಟಿದರು. ಈ ಅಪರೂಪದ ಮದುವೆಗೆ ಸ್ಥಳೀಯರು ಸಾಕ್ಷಿಯಾಗಿ ನೂತನ ವಧೂವರುಗಳನ್ನು ಹರಸಿದರು. ವಿದೇಶದಲ್ಲಿ ಚಿಗುರಿದ ಈ ಪ್ರೇಮಕಥೆ ಈಗ ಆಂಧ್ರದ ಮಣ್ಣಿನಲ್ಲಿ ಹಸೆಮಣೆ ಏರುವ ಮೂಲಕ ಸುಖಾಂತ್ಯ ಕಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ