ಚುನಾವಣಾ ಪ್ರಚಾರದ ವೇಳೆ ಕಲ್ಲು ತೂರಾಟ, ಸಿಎಂ ಜಗನ್ ಮೋಹನ್ ರೆಡ್ಡಿಗೆ ಗಾಯ!

By Suvarna NewsFirst Published Apr 13, 2024, 10:21 PM IST
Highlights

ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಗಾಯಗೊಂಡಿದ್ದಾರೆ. ಜಗನ್ ರ್ಯಾಲಿ ವೇಳೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ತೆರೆದ ವಾಹನದಲ್ಲಿದ್ದ ಜಗನ್  ಹಣೆಗೆ ಗಾಯವಾಗಿದೆ, ತಕ್ಷಣವೇ ಜಗನ್‌ಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ.
 

ವಿಜಯವಾಡ(ಏ.13) ಲೋಕಸಭಾ ಚುನಾವಣೆ ಕಾವು ಜೋರಾಗುತ್ತಿದೆ. ಭರ್ಜರಿ ಪ್ರಚಾರ, ರೋಡ್ ಶೋಗಳು ಎಲ್ಲೆಡೆ ಆಯೋಜನೆಗೊಳ್ಳುತ್ತಿದೆ. ಕೆಲ ಕ್ಷೇತ್ರದಲ್ಲಿ ಮತದಾರರ ಮುನಿಸು, ಆಕ್ರೋಶಗಳು ವ್ಯಕ್ತವಾಗುತ್ತಿದೆ. ಮತ್ತೆ ಕೆಲವೆಡೆ ಕಿಡಿಗೇಡಿಗಳ ಕಸರತ್ತು ಜೋರಾಗುತ್ತಿದೆ. ಇದೀಗ ವಿಜಯವಾಡಾದಲ್ಲಿ ತೆರೆದ ವಾಹನದ ಮೂಲಕ ರ್ಯಾಲಿ ನಡೆಸುತ್ತಿದ್ದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರ ಪರಿಣಾಮ ಜಗನ್ ಹಣೆ, ಎಡಗಣ್ಣು ಹಾಗೂ ತಲೆಗೆ ಗಾಯವಾಗಿದೆ. ರಕ್ತ ಸೋರುತ್ತಿದ್ದ ಜಗನ್‌ಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲಾಗಿದೆ.

YSRCP ಪಕ್ಷ ವಿಜಯವಾಡಾದಲ್ಲಿ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದೆ. ಮಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿಜಯವಾಡಾದಲ್ಲಿ ಪ್ರಚಾರ ನಡೆಸಿದ್ದಾರೆ. ತೆರದ ವಾಹನದಲ್ಲಿ ರ್ಯಾಲಿ ನಡೆಸುತ್ತಿದ್ದ ಜಗನ್ ಹಾಗೂ ಇತರ ನಾಯಕರ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಜಗನ್ ಹಣೆ, ತಲೆ, ಎಡಗಣ್ಣು ಹಾಗೂ ದೇಹಕ್ಕೆ ಕಲ್ಲು ಬಡಿದಿದೆ. ಇದರ ಪರಿಣಾಮ ರಕ್ತ ಜಿನುಗಿದೆ. ಜಗನ್ ಪಕ್ಕದಲ್ಲಿದ್ದ ನಾಯಕರಿಗೂ ಕಲ್ಲೇಟು ಬಿದ್ದಿದೆ. ಒರ್ವ ನಾಯಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟದ ತನಿಖೆಗೆ ತೆರಳಿದ ಎನ್‌ಐಎ ಅಧಿಕಾರಿಗಳ ಮೇಲೆಯೇ ದಾಳಿ

ಜಗನ್ ಜೊತೆಗಿದ್ದ ಶಾಸಕ ವೇಲಂಪಲ್ಲಿ ಶ್ರೀನಿವಾಸ್ ಕೂಡ ಗಾಯಗೊಂಡಿದ್ದಾರೆ. ತಕ್ಷಣವೇ ಜಗನ್ ಅವರಿಗೆ ಭದ್ರತಾ ಪಡೆಗಳು ರಕ್ಷಣೆ ನೀಡಿದೆ. ಇಷ್ಟೇ ಅಲ್ಲ ಜಗನ್ ಅವರನ್ನು ಬಸ್ ಯಾತ್ರೆಯಿಂದ ಕೆಳಗೆ ಇಳಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಕೆಲ ಹೊತ್ತು ವಿಶ್ರಾಂತಿ ಪಡೆಯಲು ವೈದ್ಯಾದಿಕಾರಿಗಳ ತಂಡ ಸೂಚಿಸಿದೆ. ಆದರೆ ಜಗನ್ ಪ್ರಥಮ ಚಿಕಿತ್ಸೆ ಪಡೆದು ಮತ್ತೆ ಪ್ರಚಾರ ಕಾರ್ಯ ಮುಂದುವರಿಸಿದ್ದಾರೆ.

ವಿಜಯವಾಡದಲ್ಲಿ ಜಗನ್ ಬಸ್ ಯಾತ್ರೆಗೆ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಬೆಂಬಲಿಗರು, ಜನರು ಜಗನ್‌ಗೆ ಹೂವಿನ ಸ್ವಾಗತ ನೀಡಿದ್ದರು. ಹಲವರು ಹೂವಿನ ದಳಗಳನ್ನು ಎಸೆದಿದ್ದರು. ಇದರ ನಡುವೆ ಕೆಲ ಕಿಡಿಗೇಡಿಗಳು ಮೊದಲೇ ಸಂಚು ರೂಪಿಸಿದ್ದರು. ಜಗನ್ ಬಸ್ ಯಾತ್ರೆ ಮೇಲೆ ದಾಳಿಗೆ ಸಜ್ಜಾಗಿದ್ದಾರೆ. ಹೀಗಾಗಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರ ನಡುವೆ ಸೇರಿ ಕಲ್ಲು ತೂರಾಟ ನಡೆಸಿದ್ದಾರೆ.

ಮೋದಿ ಕಿ ಗ್ಯಾರೆಂಟಿ ಮೇಲೆ ಭಾರಿ ನಿರೀಕ್ಷೆ, ನಾಳೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ!

ಈ ಕಲ್ಲುತೂರಾಟದ ಹಿಂದೆ ಟಿಡಿಪಿ ಕೈವಾಡವಿದೆ ಎಂದು ವೈಎಸ್ಆರ್ ಕಾಂಗ್ರೆಸ್ ಆರೋಪಿಸಿದೆ. ಚುನಾವಣೆಯಲ್ಲಿ ಮತದಾರರನ್ನು ಗೆಲ್ಲಲು ಸಾಧ್ಯವಾಗದ ಪಕ್ಷಗಳು ಕಲ್ಲುತೂರಾಟ ನಡೆಸಿ ನಮ್ಮನ್ನು ಬೆದರಿಸುವ ತಂತ್ರಕ್ಕೆ ಇಳಿದಿದೆ. ಇದಕ್ಕೆ ಜನರು ಉತ್ತರಿಸಲಿದ್ದಾರೆ ಎಂದು ವೈಎಸ್ಆರ್ ಕಾಂಗ್ರೆಸ್ ಹೇಳಿದೆ. 
 

 

click me!