3 ವರ್ಷದ ಮಗುವನ್ನು ಸೇತುವೆ ಮೇಲೆಯೇ ಬಿಟ್ಟು ನದಿಗೆ ಜಿಗಿದ ದಂಪತಿ, 'ಅಮ್ಮಾ..ಅಪ್ಪಾ' ಅಂತಾ ಕಣ್ಣೀರಿಟ್ಟ ಪುಟ್ಟ ಕಂದ!

Published : Aug 29, 2026, 11:43 AM IST
Self death in Andhrapradesh

ಸಾರಾಂಶ

ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ, ಸಾಲದ ಬಾಧೆಯಿಂದ ಬೇಸತ್ತ ದಂಪತಿಯು ತಮ್ಮ ಮೂರು ವರ್ಷದ ಮಗುವನ್ನು ಸೇತುವೆಯ ಮೇಲೆ ಬಿಟ್ಟು ಗೋದಾವರಿ ನದಿಗೆ ಹಾರಿ ಸಾವಿಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮಗುವನ್ನು ರಕ್ಷಿಸಿ, ದಂಪತಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಗೋದಾವರಿ (ಆ.29): ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಎದೆಝಲ್ಲೆನಿಸುವ ಕರುಣಾಜನಕ ಘಟನೆಯೊಂದು ವರದಿಯಾಗಿದೆ. ಸಾಲದ ಬಾಧೆಗೆ ಬೇಸತ್ತ ದಂಪತಿಯೊಂದು ತಮ್ಮ 3 ವರ್ಷದ ಮುದ್ದು ಮಗುವನ್ನು ಸೇತುವೆಯ ಮೇಲೆಯೇ ಬಿಟ್ಟು, ರಭಸವಾಗಿ ಹರಿಯುತ್ತಿದ್ದ ಗೋದಾವರಿ ನದಿಗೆ ಜಿಗಿದು ಸಾವಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ವೆಲ್ಪುರು ಗ್ರಾಮದ ನಿವಾಸಿಗಳಾದ ದೊಡ್ಡ ಸಾಯಿ (29) ಹಾಗೂ ಅವರ ಪತ್ನಿ ಶಿರೀಷಾ (28) ನದಿಗೆ ಜಿಗಿದ ದಂಪತಿ ಎಂದು ಗುರುತಿಸಲಾಗಿದೆ. ಗುರುವಾರ ತಡರಾತ್ರಿ ಸುಮಾರು 10 ಗಂಟೆಯ ವೇಳೆಗೆ ಈ ದಂಪತಿ ತಮ್ಮ 3 ವರ್ಷದ ಮಗುವಿನೊಂದಿಗೆ ಸ್ಕೂಟರ್‌ನಲ್ಲಿ ಚಿಂಚಿನಾಡ ವಸಿಷ್ಠ ಸೇತುವೆಯ ಬಳಿಗೆ ಬಂದಿದ್ದಾರೆ. ಬಳಿಕ ಮಗುವನ್ನು ಸೇತುವೆಯ ಮೇಲೆ ನಿಲ್ಲಿಸಿದ್ದ ಸ್ಕೂಟರ್ ಬಳಿಯೇ ಬಿಟ್ಟು, ಉಕ್ಕಿ ಹರಿಯುತ್ತಿದ್ದ ಗೋದಾವರಿ ನದಿಗೆ ಜಿಗಿದಿದ್ದಾರೆ.

"ಅಮ್ಮಾ... ನಾನ್ನಾ..." ಎಂದು ಮಗುವಿನ ರೋದನ

ಕತ್ತಲಿನಲ್ಲಿ, ಮೈಕೊರೆಯುವ ಚಳಿಯ ನಡುವೆ ಸೇತುವೆಯ ಮೇಲೆ ಒಂಟಿಯಾಗಿ ನಿಂತಿದ್ದ ಮಗು "ಅಮ್ಮಾ... ನಾನ್ನಾ..." (ಅಮ್ಮ... ಅಪ್ಪ...) ಎಂದು ಗಟ್ಟಿಯಾಗಿ ಅಳಲು ಪ್ರಾರಂಭಿಸಿದೆ. ಆ ಮಾರ್ಗವಾಗಿ ತೆರಳುತ್ತಿದ್ದ ಪಾದಾಚಾರಿಗಳು ಮಗುವಿನ ರೋದನವನ್ನು ಗಮನಿಸಿ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಕ್ಕಪಕ್ಕದಲ್ಲಿ ಪೋಷಕರಿಗಾಗಿ ಹುಡುಕಾಟ ನಡೆಸುವ ವೇಳೆ ಸ್ವತಃ ಮಗುವೇ ಅಪ್ಪ, ಅಮ್ಮ ನದಿಗೆ ಜಿಗಿದಿರುವುದನ್ನು ತಿಳಿಸಿದೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಮಗುವನ್ನು ತಮ್ಮ ವಶಕ್ಕೆ ಪಡೆದು, ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಮಗುವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ನದಿಗೆ ಜಿಗಿದ ದಂಪತಿಯ ಪತ್ತೆಗಾಗಿ ಪೊಲೀಸರು, ಸ್ಥಳೀಯ ರಕ್ಷಣಾ ಪಡೆಗಳು, ಈಜುಗಾರರು ಹಾಗೂ ದೋಣಿ ತಂಡಗಳ ನೆರವಿನೊಂದಿಗೆ ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಸುದ್ದಿ ಪ್ರಕಟವಾಗುವವರೆಗೂ ದಂಪತಿಯ ಸುಳಿವು ಸಿಕ್ಕಿರಲಿಲ್ಲ.

ಸಾಲದ ಬಾಧೆಯೇ ದುರಂತಕ್ಕೆ ಕಾರಣ?

ಪ್ರಾರಂಭಿಕ ತನಿಖೆಯ ಪ್ರಕಾರ, ವೃತ್ತಿಯಲ್ಲಿ ಚಾಲಕನಾಗಿದ್ದ ದೊಡ್ಡ ಸಾಯಿ, ಹಿಂದೆ ಗಲ್ಫ್ ದೇಶದಲ್ಲೂ ಕೆಲಸ ಮಾಡಿ ಆಂಧ್ರಪ್ರದೇಶಕ್ಕೆ ಮರಳಿದ್ದ. ಇತ್ತೀಚೆಗೆ ಆತ ತೀವ್ರ ಸಾಲದ ಸುಳಿಗೆ ಸಿಲುಕಿದ್ದು, ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಎನ್ನಲಾಗಿದೆ. ಹಣಕಾಸಿನ ಬಿಕ್ಕಟ್ಟಿನಿಂದಾಗಿಯೇ ಈ ದಂಪತಿ ಇತ್ತೀಚೆಗೆ ತಮ್ಮ ಮನೆಯನ್ನೂ ಮಾರಾಟ ಮಾಡಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಈ ದುರಂತಕ್ಕೆ ಆರ್ಥಿಕ ಸಂಕಷ್ಟವೊಂದೇ ಕಾರಣವೇ ಅಥವಾ ಬೇರೆ ಏನಾದರೂ ಕೌಟುಂಬಿಕ ಕಲಹಗಳಿವೆಯೇ ಎಂಬ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

2027ರ ಚುನಾವಣೆಗೆ AIMIM ಪಕ್ಷದಿಂದ ಬ್ರಾಹ್ಮಣ ಅಭ್ಯರ್ಥಿ! ಓವೈಸಿಯ ಈ ನಿರ್ಧಾರಕ್ಕೆ ದೇಶದ ರಾಜಕೀಯದಲ್ಲೇ ಸಂಚಲನ!
₹83 ಲಕ್ಷದ ಗೂಗಲ್ ಕೆಲಸಕ್ಕೆ ಗುಡ್‌ಬೈ! ಸಾವಯವ ಕೃಷಿಯಲ್ಲಿ ಕ್ರಾಂತಿ ಮಾಡಿದ ಸಾಫ್ಟ್‌ವೇರ್ ಎಂಜಿನಿಯರ್!