ಇಂದಿನಿಂದ ಅಮಿತ್‌ ಶಾ 3 ದಿನದ ಕಾಶ್ಮೀರ ಪ್ರವಾಸ!

By Suvarna NewsFirst Published Oct 23, 2021, 9:09 AM IST
Highlights

* ಪರಿಚ್ಛೇದ 370 ರದ್ದಿನ ಬಳಿಕ ಮೊದಲ ಭೇಟಿ

* ಇಂದಿನಿಂದ ಅಮಿತ್‌ ಶಾ 3 ದಿನದ ಕಾಶ್ಮೀರ ಪ್ರವಾಸ

* ಉಗ್ರರ ಇತ್ತೀಚಿನ ದಾಳಿ ತಡೆಗೆ ರಣನೀತಿ ರೂಪಿಸುವ ಉದ್ದೇಶ

ಶ್ರೀನಗರ(ಅ.23): ಜಮ್ಮು-ಕಾಶ್ಮೀರದಲ್ಲಿ(Jammu Kashmir) ಭಯೋತ್ಪಾದಕ ದಾಳಿಗಳು(Terror Attacks) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವುಗಳ ತಡೆಗೆ ಮಾರ್ಗೋಪಾಯ ಸೂಚಿಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ(Home Minister Amit Shah) ಅವರು ಶನಿವಾರದಿಂದ ಮೂರು ದಿನಗಳ ಕಾಲ ಕಣಿವೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

2019ರ ಆಗಸ್ಟ್‌ನಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಪರಿಚ್ಛೇದ 370(Article 370) ರದ್ದಿನ ಬಳಿಕ ಇದೇ ಮೊದಲ ಬಾರಿಗೆ ಇಲ್ಲಿಗೆ ಭೇಟಿ ನೀಡುತ್ತಿರುವ ಶಾ, ಸೇನೆಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಲಿದ್ದಾರೆ. ಶಾ ಮೊದಲಿಗೆ ಶ್ರೀನಗರಕ್ಕೆ ಭೇಟಿ ನೀಡಿ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಜೊತೆಗೆ ಜಮ್ಮುವಿನಲ್ಲಿ ನಡೆಯುವ ರಾರ‍ಯಲಿಯಲ್ಲೂ ಭಾಗಿಯಾಗಲಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಕಾಶ್ಮೀರಿ ಪಂಡಿತರು ಮತ್ತು ವಲಸೆ ಕಾರ್ಮಿಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗುತ್ತಿದ್ದು, ಈವರೆಗೆ 11 ನಾಗರಿಕರನ್ನು ಹತ್ಯೆಗೈಯಲಾಗಿದೆ.

ಕಾಶ್ಮೀರಕ್ಕೆ 25 ಹೆಚ್ಚುವರಿ ಸೇನಾ ತುಕಡಿ ರವಾನೆ

ಜಮ್ಮು-ಕಾಶ್ಮೀರದಲ್ಲಿ ಹೊರ ರಾಜ್ಯಗಳ ಪ್ರಜೆಗಳ ಮೇಲೆ ದಾಳಿಗಳು ಮತ್ತು ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ಮಧ್ಯೆ ಎನ್‌ಕೌಂಟರ್‌ಗಳು ಹೆಚ್ಚುತ್ತಿರುವ ನಡುವೆಯೇ, ಕಣಿವೆ ಪ್ರದೇಶಕ್ಕೆ ಹೆಚ್ಚುವರಿ ಭದ್ರತಾ ಪಡೆಗಳನ್ನು ರವಾನಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಕಣಿವೆ ರಾಜ್ಯದಲ್ಲಿ ಶಾಂತಿ ಪುನಃಸ್ಥಾಪಿಸುವ ನಿಟ್ಟಿನಲ್ಲಿ ನಡೆದ ಉನ್ನತ ಹಂತದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಭದ್ರತಾ ಪಡೆಗಳ 25 ಹೆಚ್ಚುವರಿ ತುಣುಕುಗಳನ್ನು ರವಾನಿಸುವ ಕುರಿತಾಗಿ ಶೀಘ್ರವೇ ಸೂಚಿಸುವ ಸಾಧ್ಯತೆಯಿದೆ. ಈ ಪೈಕಿ ಮೊದಲಿಗೆ ಸಿಆರ್‌ಪಿಎಫ್‌ನ 10 ಸೇನಾ ತುಕಡಿಗಳನ್ನು ರವಾನಿಸಲಾಗುತ್ತದೆ. ಆ ಬಳಿಕ 15 ಸೇನಾ ತುಕಡಿಗಳನ್ನು ಎರಡು ಹಂತಗಳಲ್ಲಿ ರವಾನಿಸಲಾಗುತ್ತದೆ ಎನ್ನಲಾಗಿದೆ. ತನ್ಮೂಲಕ ಜಮ್ಮು-ಕಾಶ್ಮೀರದಲ್ಲಿ ನಾಗರಿಕರಿಗೆ ಹೆಚ್ಚುವರಿ ಭದ್ರತೆ ಮತ್ತು ಉಗ್ರರನ್ನು ಸದೆಬಡಿಯಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

click me!