ಕಾಂಗ್ರೆಸ್‌ಗೆ ಅಮರೀಂದರ್‌ ಗುಡ್‌ಬೈ : ಬಿಜೆಪಿ ಸೇರಲ್ಲವೆಂದು ಸ್ಪಷ್ಟನುಡಿ

By Kannadaprabha NewsFirst Published Oct 1, 2021, 8:01 AM IST
Highlights
  • ಪಂಜಾಬ್‌ ಮುಖ್ಯಮಂತ್ರಿ ಹುದ್ದೆಗೆ ದಿಢೀರ್‌ ರಾಜೀನಾಮೆ ಸಲ್ಲಿಸಿದ 12 ದಿನ
  • ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರು ಕಾಂಗ್ರೆಸ್‌ ಪಕ್ಷ ತ್ಯಜಿಸುವುದಾಗಿ ಗುರುವಾರ ಅಧಿಕೃತವಾಗಿ ಘೋಷಣೆ 

ನವದೆಹಲಿ (ಅ.01):  ಪಂಜಾಬ್‌ ಮುಖ್ಯಮಂತ್ರಿ (Punjab CM) ಹುದ್ದೆಗೆ ದಿಢೀರ್‌ ರಾಜೀನಾಮೆ ಸಲ್ಲಿಸಿದ 12 ದಿನಗಳ ತರುವಾಯ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ (Amarinder singh) ಅವರು ಕಾಂಗ್ರೆಸ್‌ (Congress) ಪಕ್ಷ ತ್ಯಜಿಸುವುದಾಗಿ ಗುರುವಾರ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಆದರೆ ಇದೇ ವೇಳೆ ಬಿಜೆಪಿ (BJP) ಸೇರ್ಪಡೆ ಕುರಿತ ವದಂತಿಗಳನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ಇದರಿಂದಾಗಿ ಪಂಜಾಬ್‌ನ 79 ವರ್ಷದ ಹಿರಿಯ ನಾಯಕನ ಮುಂದಿನ ನಡೆ ಕುತೂಹಲ ಕೆರಳಿಸಿದೆ. ಅವರು ಪ್ರಾದೇಶಿಕ ಪಕ್ಷ ಸ್ಥಾಪಿಸುವ ಸಾಧ್ಯತೆ ದಟ್ಟವಾಗುತ್ತಿದೆ.

ಪಂಜಾಬ್‌ ಕಾಂಗ್ರೆಸ್‌ಗೆ ಬಿಗ್ ಶಾಕ್: ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನವಜೋತ್ ಸಿಂಗ್!

ಪಂಜಾಬ್‌ ಸಿಎಂ ಹುದ್ದೆಗೆ ರಾಜೀನಾಮೆ (Resignation) ನೀಡಿದ ಬಳಿಕ ಕಾಂಗ್ರೆಸ್‌ ನಾಯಕತ್ವದ ವಿರುದ್ಧ ಕಿಡಿಕಾರಿದ್ದ ಅಮರೀಂದರ್‌ ಬುಧವಾರ ಬಿಜೆಪಿ ನಂ.2 ನಾಯಕರಾಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಅವರು ಬಿಜೆಪಿ ಸೇರಬಹುದು ಎಂಬ ವದಂತಿ ದಟ್ಟವಾಗಿ ಹರಡಿತ್ತು. ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು ಇದನ್ನು ಅಲ್ಲಗಳೆದರು.ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ. ಅಲ್ಲಿ ನಾನಿರುವುದಿಲ್ಲ. ಆ ಪಕ್ಷ ನನ್ನ ಮೇಲೆ ವಿಶ್ವಾಸ ಇರಿಸದೆ ಅವಮಾನ ಮಾಡಿದೆ. ಪಂಜಾಬ್‌ನಲ್ಲಿ ಮುಂದೇನು ಮಾಡಬೇಕು ಎಂಬ ಆಯ್ಕೆಗಳ ಕುರಿತು ಪರಿಶೀಲನೆಯಲ್ಲಿದ್ದೇನೆ. ಪಂಜಾಬ್‌ನ ಭದ್ರತೆಯೇ ನನ್ನ ಆದ್ಯತೆ ಎಂದು ಅಮರೀಂದರ್‌ ಹೇಳಿದರು.

ಸಿಧು, ಹೈಕಮಾಂಡ್‌ ವಿರುದ್ಧ ಮತ್ತೆ ಸಿಡಿದೆದ್ದ ಅಮರೀಂದರ್‌ ಸಿಂಗ್‌: ಬಿಗ್ ಚಾಲೆಂಜ್!

ಕಾಂಗ್ರೆಸ್‌ ಪಕ್ಷದ ಭವಿಷ್ಯದ ಬಗ್ಗೆ ಹಿರಿಯ ನಾಯಕರು ಚಿಂತಿತರಾಗಿದ್ದಾರೆ. ಅವರೆಲ್ಲಾ ಬುದ್ಧಿಜೀವಿಗಳು. ಹಿರಿಯ ನಾಯಕರಿಗೆ ಯೋಜನೆಗಳನ್ನು ರೂಪಿಸುವ ಹೊಣೆ ಕೊಟ್ಟು, ಅದನ್ನು ಯುವ ನಾಯಕರ ಮೂಲಕ ಅನುಷ್ಠಾನಗೊಳಿಸಬೇಕು. ದುರಾದೃಷ್ಟವೆಂದರೆ ಹಿರಿಯ ನಾಯಕರನ್ನು ಕಾಂಗ್ರೆಸ್‌ನಲ್ಲಿ ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಇದು ಪಕ್ಷಕ್ಕೆ ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.

ತಮ್ಮ ರಾಜಕೀಯ ವೈರಿಯಾಗಿರುವ ನವಜೋತ್‌ ಸಿಂಗ್‌ ಸಿಧು (Navjoth Singh sidhu) ವಿರುದ್ಧವೂ ಕಿಡಿಕಾರಿದ ಅವರು, ಸಿಧು ಅವರೊಬ್ಬ ಜನರನ್ನು ಸೆಳೆಯುವ ನಾಯಕ ಅಷ್ಟೆ. ಒಂದು ತಂಡವನ್ನು ಜತೆಯಲ್ಲಿ ಹೇಗೆ ಕರೆದೊಯ್ಯಬೇಕು ಎಂಬುದು ಅವರಿಗೆ ತಿಳಿದಿಲ್ಲ. ಒಂದು ವೇಳೆ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅವರನ್ನು ಸೋಲಿಸಲು ಎಲ್ಲಾ ಯತ್ನ ನಡೆಸುವುದಾಗಿ ಮತ್ತೊಮ್ಮೆ ಘೋಷಿಸಿದ್ದಾರೆ.

ಸಿಧು ಮುನಿಸಿಗೆ ತೇಪೆ: ಮತ್ತೆ ಪಿಸಿಸಿ ಅಧ್ಯಕ್ಷ?

ಅಮೃತಸರ: ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದ ನವಜೋತ್‌ ಸಿಂಗ್‌ ಸಿಧು ಅವರನ್ನು ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ (Charanjith Singh chenni) ಗುರುವಾರ ಭೇಟಿಯಾಗಿ ಕೋಪ ತಣಿಸುವ ಪ್ರಯತ್ನ ಮಾಡಿದ್ದಾರೆ. ಸಿಧು ಬೇಡಿಕೆಗಳಿಗೆ ಚನ್ನಿ ಒಪ್ಪಿದ್ದಾರೆನ್ನಲಾಗಿದ್ದು, ಶೀಘ್ರ ರಾಜೀನಾಮೆ ವಾಪಸ್‌ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

click me!