ಮಯೂರ್ ಹೆಗಡೆ, ಕನ್ನಡಪ್ರಭ ವಾರ್ತೆ
ಬೆಂಗಳೂರು: ಯುದ್ಧದ ವೇಳೆ ನಮ್ಮದೇ ಭೂ, ವಾಯು, ನೌಕಾ ಸೇನೆಗಳ ನಡುವೆ ಕೆಲವೊಮ್ಮೆ ಗುರುತು ಪತ್ತೆ ಸಮಸ್ಯೆ ಆಗುತ್ತದೆ. ಸಂವಹನ ಕೊರತೆಯಿಂದ ಆಂತರಿಕ ದಾಳಿ ಏರ್ಪಡುವ ಸಾಧ್ಯತೆಯೂ ಇಲ್ಲದಿಲ್ಲ. ಇಂತಹ ಸಂದರ್ಭದಲ್ಲಿ ಪಡೆಗಳ ನಿಖರ ಗುರುತು, ಕ್ಷಿಪ್ರ ಕಾರ್ಯಾಚರಣೆ, ದುರ್ಗಮ ಪ್ರದೇಶದಲ್ಲಿ ಸಂವಹನಕ್ಕೆ ಅನುವಾಗುವಂತೆ ವಾಯು ಸೇನೆ ತಂತ್ರಾಂಶ ಆಧಾರಿತ ಉಪಕರಣ ರೂಪಿಸಿದೆ.
ಇದುವೇ ವಾಯುಲಿಂಕ್! ವಾಯುಸೇನೆಯ ಎಂಜಿನಿಯರಿಂಗ್ ವಿಭಾಗ (engineering department)ಖುದ್ದಾಗಿ ರೂಪಿಸಿರುವ ಈ ಉಪಕರಣ ಶೀಘ್ರವೇ ಸೇನೆಯ ಬತ್ತಳಿಕೆಗೆ ಸೇರಲಿದೆ. ಯುದ್ಧದ ವೇಳೆ ಸಂವಹನ ಸಮಸ್ಯೆ ಉಂಟಾಗುವ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಯುವಾಗ ಮೂರು ಸೇನೆಗಳು ಏಕಕಾಲಕ್ಕೆ ತಾಂತ್ರಿಕ ಹಾಗೂ ಭೌತಿಕ ತಂತ್ರಗಾರಿಕೆ ರೂಪಿಸಿಕೊಂಡು ತಳಮಟ್ಟದಲ್ಲಿ ಕಾರ್ಯಾಚರಣೆಗೆ ತರುವಲ್ಲೂ ಇದು ನೆರವಾಗಲಿದೆ.
ಹೇಗೆ ಕಾರ್ಯ:
ಸಾಮಾನ್ಯವಾಗಿ ಸೇನೆಯಲ್ಲಿ ರೇಡಿಯೋ ಟಿಲಿಫೋನ್ ಕರೆಗಳ (radio telephone calls) ಮೂಲಕ ಸಂವಹನ ನಡೆಯುತ್ತದೆ. ಆದರೆ, ಇದರ ಮೂಲಕ ಕಳುಹಿಸಲಾದ ಸಂದೇಶ ಕಣಿವೆಯಂಥ ಪ್ರದೇಶದಲ್ಲಿ ವಾಯುಪಡೆಗಳಿಗೆ, ಯುದ್ಧವಾಹಕ ನೌಕೆಗಳ ಮೂಲಕ ಕಳುಹಿಸಲಾದ ಸಂದೇಶ ತಲುಪುವುದಿಲ್ಲ ಅಥವಾ ಕಡಿದಾದ ಬೆಟ್ಟಪ್ರದೇಶದಲ್ಲಿರುವ ಯೋಧನೊಬ್ಬನಿಗೆ (soldier) ಕ್ಷಿಪ್ರ ಸಂದೇಶ ಕಳುಹಿಸಲಾಗದೆ ಸಮಸ್ಯೆ ಉಂಟಾಗುತ್ತದೆ. ಇಂಥ ಸಂದರ್ಭವನ್ನು ಸಮರ್ಥವಾಗಿ ಎದುರಿಸಿ ಸಂದೇಶ ರವಾನೆಯಾಗುವಂತೆ ವಾಯುಲಿಂಕ್ ಡಾಟಾ ಸಹಾಯಕ ಆಗುತ್ತದೆ.
ವಾಯುಲಿಂಕ್ ಕೂಡ ರೇಡಿಯೋ ಫ್ರಿಕ್ವೆನ್ಸಿ ಆಧರಿಸಿಯೇ ಕಾರ್ಯನಿರ್ವಹಿಸುತ್ತದೆ. ಆದರೆ, ಇದು ಆ್ಯಂಡ್ ಟು ಆ್ಯಂಡ್ ಇನ್ಸ್ಕ್ರಿಪ್ಶನ್, ಎಡ್-ಹಾಕ್ ನೆಟ್ವರ್ಕ್ ಸಿಸ್ಟಂ, ರಿಯಲ್ ಟೈಂ ಡೆಟಾ ವ್ಯವಸ್ಥೆ ಹೊಂದಿದೆ. ಯಾರ ಬಳಿ ಆ್ಯಕ್ಸೆಸ್ ಇರುತ್ತದೆಯೋ ಅವರಿಗೆ ಮಾತ್ರ ಸಂದೇಶ ಲಭ್ಯವಾಗುತ್ತದೆ. ಸಂವಹನ ನಿರ್ವಹಣಾ ಕೇಂದ್ರ ಮೂರು ಪಡೆಗಳು ಎಲ್ಲಿ ನಿಯೋಜಿತವಾಗಿವೆ ಅಥವಾ ಕಾರ್ಯಾಚರಣೆಯಲ್ಲಿವೆ ಎಂಬ ನಿಖರ ಸ್ಥಳವನ್ನು ಗುರುತು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಸೈನಿಕರ ಗುರುತು ಸುಲಭ. ಅಲ್ಲದೆ, ಶತ್ರು ಸೈನಿಕರ ವಂಚನೆಯ ಜಾಲದಿಂದಲೂ ರಕ್ಷಣೆ ಸಾಧ್ಯ.
ಒಂದು ವೇಳೆ ದುರ್ಗಮ ಪ್ರದೇಶದಲ್ಲಿ ಯುದ್ಧ ವಿಮಾನ ದುರಂತಕ್ಕೀಡಾದರೂ ಅದನ್ನು ಶೀಘ್ರವಾಗಿ ಪತ್ತೆ ಮಾಡಿ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಲು ಕೂಡ ಇದು ಸಹಾಯಕ. ಪ್ಯಾರಾಚ್ಯೂಟ್ ಮೂಲಕ ಕಾರ್ಯಾಚರಣೆಗೆ ಮುಂದಾಗುವ ವೇಳೆ ನೆಲಮಟ್ಟದಲ್ಲಿ ಯಾವ ಸೇನೆಯಿದೆ ಎಂಬುದು ಕೂಡ ಸೈನಿಕನಿಗೆ ತಿಳಿಸಲು ಸಾಧ್ಯವಾಗುತ್ತದೆ. ಅದೇ ರೀತಿ ನೌಕಾಪಡೆ, ಭೂಸೇನೆಯಲ್ಲೂ ಇದು ಬಳಕೆಯಾಗಲಿದೆ.
ಕಳೆದ ನಾಲ್ಕು ವರ್ಷಗಳಿಂದ ಇದರ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿತ್ತು. ಇದೀಗ ಪ್ರಾಥಮಿಕ ಹಂತವಾಗಿ ನಾಲ್ಕಾರು ಕಡೆಗಳಲ್ಲಿ ಪ್ರಾಯೋಗಿಕವಾಗಿ ಬಳಕೆ ಆಗುತ್ತಿದೆ. ಆದರೆ, ಯಾವಾಗ ಸಂಪೂರ್ಣವಾಗಿ ಬಳಕೆ ಪ್ರಾರಂಭವಾಗುತ್ತದೆ ಹಾಗೂ ಅಂತಿಮವಾಗಿ ಯಾವ ಪ್ರದೇಶದಲ್ಲಿ ಬಳಸಲಾಗುತ್ತದೆ ಎಂಬುದು ಸೇನಾ ಗೌಪ್ಯತೆ ಕಾರಣದಿಂದ ಹೇಳಲಾಗಲ್ಲ ಎಂದು ಸೇನಾಧಿಕಾರಿಗಳು ತಿಳಿಸಿದರು.
ವಾಯುಲಿಂಕ್ ಶೀಘ್ರವೇ ಸೇನೆಯ ಮೂರು ವಿಭಾಗದಲ್ಲಿ ಕಾರ್ಯನಿರ್ವಹಿಸಲಿದೆ. ಇದರಿಂದ ಮೂರು ಪಡೆಗಳ ನಡುವಿನ ಸಂವಹನ ವ್ಯವಸ್ಥೆಯೂ ಅಭಿವೃದ್ಧಿಯಾಗಲಿದೆ. ಹಲವು ಸಮಸ್ಯೆಗಳು ನಿವಾರಣೆ ಆಗಲಿವೆ- ಪಿ.ಮನೀಷ್, ವಾಯುಪಡೆ ಅಧಿಕಾರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ