Gorakhnath Temple Attack: ಐಐಟಿ ಪದವೀಧರ ಅಹ್ಮದ್‌ ಮುರ್ತುಜಾಗೆ ಮರಣದಂಡನೆ!

By Santosh NaikFirst Published Jan 30, 2023, 6:40 PM IST
Highlights

ಉತ್ತರ ಪ್ರದೇಶದ ಗೋರಖ್‌ನಾಥ ದೇವಸ್ಥಾನದ ಮೇಲೆ ದಾಳಿ ಮಾಡಿದ ಪ್ರಕರಣದಲ್ಲಿ ದೋಷಿ ಎಂದು ನಿರ್ಣಯವಾಗಿದ್ದ ಅಹ್ಮದ್‌ ಮುರ್ತಜಾ ಅಬ್ಬಾಸಿಗೆ ವಿಶೇಷ ಎಟಿಎಸ್‌ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ದೋಷಿ ಎಂದು ಘೋಷಿಸಿದ ಎರಡು ದಿನಗಳ ಬಳಿಕ ಶಿಕ್ಷೆಯ ಪ್ರಮಾಣ ಪ್ರಕಟವಾಗಿದೆ.

ನವದೆಹಲಿ (ಜ.30): ಗೋರಖ್‌ನಾಥ ದೇವಾಲಯದ ದಾಳಿ ಪ್ರಕರಣದ ಆರೋಪಿ ಅಹ್ಮದ್ ಮುರ್ತಾಜಾ ಅಬ್ಬಾಸಿಗೆ ಎಟಿಎಸ್ ನ್ಯಾಯಾಲಯ ಸೋಮವಾರ ಮರಣದಂಡನೆ ವಿಧಿಸಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಉತ್ತರ ಪ್ರದೇಶದ ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಅಬ್ಬಾಸಿ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಆರೋಪ ಹೊರಿಸಲಾಗಿತ್ತು.ದೇವಾಲಯದ ಹೊರಗೆ ಇಬ್ಬರು ಪಿಎಸಿ ಕಾನ್ಸ್‌ಸ್ಟೇಬಲ್‌ಗಳ ಮೇಲೆ ಮೇಲೆ ದಾಳಿ ಮಾಡಿದ್ದಕ್ಕಾಗಿ ಅಬ್ಬಾಸಿಯನ್ನು ದೋಷಿ ಎಂದು ಘೋಷಿಸಿತ್ತು. ದೋಷಿ ಎಂದು ಘೋಷಣೆ ಮಾಡಿದ ಎರಡು ದಿನಗಳ ಬಳಿಕ ಎಟಿಎಸ್‌ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಪ್ರಕಟ ಮಾಡಿದೆ. ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಐಐಟಿ) ಪದವಿಧರನಾಗಿದ್ದ ಅಬ್ಬಾರಿ 2022ರ ಏಪ್ರಿಲ್‌ 3 ರಂದು ಗೋರಖನಾಥ ದೇವಾಲಯದಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿಯ ಮೇಲೆ ಹರಿತವಾದ ಕುಡುಗೋಲಿನಿಂದ ಹಲ್ಲೆ ನಡೆಸಿ ದೇವಾಲಯದ ಆವರಣಕ್ಕೆ ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ್ದ. ಘಟನೆಯಲ್ಲಿ ಇಬ್ಬರು ಪ್ರಾಂತೀಯ ಸಶಸ್ತ್ರ ಕಾನ್ಸ್‌ಟೇಬಲ್‌ಗಳು (ಪಿಎಸಿ) ಗಾಯಗೊಂಡಿದ್ದರು. ಆದರೆ, ಆರೋಪಿಯನ್ನು ಇತರ ಭದ್ರತಾ ಸಿಬ್ಬಂದಿಗಳು ಸದೆಬಡಿದು ಬಂಧಿಸಿದ್ದರು.

ವಿನಯ್ ಕುಮಾರ್ ಮಿಶ್ರಾ ಅವರ ದೂರಿನ ಆಧಾರದ ಮೇಲೆ ಗೋರಖ್‌ನಾಥ್ ಪೊಲೀಸ್ ಠಾಣೆಯಲ್ಲಿ ಅಬ್ಬಾಸಿ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿತ್ತು. ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಈ ಘಟನೆಯ ತನಿಖೆ ನಡೆಸಿತ್ತು.

ಯುಪಿ ಗೃಹ ಇಲಾಖೆಯು ನೀಡಿದ್ದ ಹೇಳಿಕೆಯಲ್ಲಿ "ಗೋರಖ್‌ಪುರದ ಗೋರಖ್‌ನಾಥ್ ದೇವಸ್ಥಾನದಲ್ಲಿ ಪೊಲೀಸ್ ಜವಾನರ ಮೇಲಿನ ದಾಳಿ ಆಳವಾದ ಪಿತೂರಿಯ ಒಂದು ಭಾಗವಾಗಿದೆ ಮತ್ತು ಲಭ್ಯವಿರುವ ಸತ್ಯಗಳ ಆಧಾರದ ಮೇಲೆ ಇದು ಭಯೋತ್ಪಾದಕ ಘಟನೆ ಎಂದು ಹೇಳಬಹುದು" ಎಂದು ಹೇಳಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಹುಟ್ಟೂರು ಹಾಗೂ ಮುಖ್ಯಮಂತ್ರಿ ಆಗುವ ಮುನ್ನ ಇದೇ ದೇವಸ್ಥಾನದಲ್ಲಿ ಅವರು ಪೂಜಾಕಾರ್ಯಗಳನ್ನು ಮಾಡುತ್ತಿದ್ದ ಕಾರಣ, ಈ ಘಟನೆಯ ಬಳಿಕ ಉತ್ತರ ಪ್ರದೇಶದ ಈ ದೇವಸ್ಥಾನದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು.

ಗೋರಖ್‌ಪುರ ದಾಳಿಕೋರನಿಂದ ಪೊಲೀಸರ ಮೇಲೇ ದಾಳಿ: ಗುದ್ದಿ, ಉಗುರಿನಿಂದ ಪರಚಿದ ಅಬ್ಬಾಸಿ

ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಎಂಟೆಕ್ ಮಾಡಿದ್ದ ಮುರ್ತಜಾ ಗೋರಖನಾಥ ದೇವಾಲಯದ ಕಾವಲು ಕಾಯುತ್ತಿದ್ದ ಇಬ್ಬರು ಯೋಧರ ಮೇಲೆ ದಾಳಿ ನಡೆಸಿದ್ದ. ಸೈನಿಕರ ರೈಫಲ್ ಗಳನ್ನು ಕಸಿದುಕೊಳ್ಳಲು ಯತ್ನಿಸಿದ್ದ. ರೈಫಲ್ ಕಸಿದುಕೊಂಡ ನಂತರ ಮುರ್ತಜಾ ಮನಬಂದಂತೆ ಗುಂಡು ಹಾರಿಸಲು ಯೋಜಿಸುತ್ತಿದ್ದ ಎಂದು ಎಟಿಎಸ್ ತನಿಖೆಯಿಂದ ತಿಳಿದುಬಂದಿದೆ. ಯುಪಿ ಎಟಿಎಸ್ ತನ್ನ ತನಿಖೆಯಲ್ಲಿ 27 ಸಾಕ್ಷಿಗಳನ್ನು ಹಾಜರುಪಡಿಸಿತ್ತು. ತನ್ನನ್ನು ಅನಾರೋಗ್ಯ ಮತ್ತು ಮಾನಸಿಕ ವಿಕಲಾಂಗ ಎಂದು ಕರೆಯುವ ಆತನ ವಾದವು ನ್ಯಾಯಾಲಯದಲ್ಲಿ ಕೆಲಸ ಮಾಡಲಿಲ್ಲ. ಫೇಸ್‌ಬುಕ್‌ನಲ್ಲಿ 6 ಐಡಿಗಳನ್ನು ಹೊಂದಿದ್ದ ಮುರ್ತಜಾ ವಿದೇಶದಲ್ಲಿ ನೆಲೆಸಿರುವವರ ಸ್ನೇಹ ಬೆಳೆಸಿಕೊಂಡಿದ್ದ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಗೋರಖ್‌ಪುರ ದೇಗುಲದಲ್ಲಿ ಪೊಲೀಸರ ಮೇಲೆ ದಾಳಿ ಮಾಡಿದ ವ್ಯಕ್ತಿ ಬಾಂಬೆ ಐಐಟಿ ಗ್ರಾಜ್ಯುಯೇಟ್

ಈ ವೇಳೆ ಆರೋಪಿ ಮುರ್ತಾಜಾನ ತಂದೆ, ತನ್ನ ಮಗ ಮಾನಸಿಕ ಅಸ್ವಸ್ಥ ಎಂದು ಹೇಳಿದ್ದರು. ಅವನು ಸ್ಥಿರವಾಗಿಲ್ಲ ಮತ್ತು ಏಕಾಂಗಿಯಾಗಿ ಬದುಕಲು ಸಾಧ್ಯವಿಲ್ಲ. ಮುರ್ತಾಜಾನ ತಂದೆ ಆತ ಬಾಲ್ಯದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಿದ್ದರು, ಅದು ನಮಗೆ ಅರ್ಥವಾಗಲಿಲ್ಲ, ಆದರೆ 2018 ರ ಹೊತ್ತಿಗೆ ಈ ರೋಗವು ಭಯಾನಕ ರೂಪವನ್ನು ಪಡೆಯಿತು. ಕೆಲಸದ ವೇಳೆಯೂ 2 ತಿಂಗಳ ಕಾಲ ಮಾಹಿತಿ ಇಲ್ಲದೆ ಕೋಣೆಯಲ್ಲೇ ಮಲಗಿಕೊಂಡಿರುತ್ತಿದ್ದ. ಕೆಲಸಕ್ಕೆ ಹೋಗುತ್ತಿರಲಿಲ್ಲ.  ಅಹಮದಾಬಾದ್‌ನ ಜಾಮ್‌ನಗರ್‌ನಲ್ಲಿಯೂ ಆತನ ಚಿಕಿತ್ಸೆಯನ್ನು ಮಾಡಿದ್ದೇವೆ. ಆತ ಏಕಾಂಗಿಯಾಗಿ ಬದುಕಲು ಸಾಧ್ಯವಿಲ್ಲ. ಆತನ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದಿದ್ದರು.

click me!