
ನವದೆಹಲಿ: ‘ಜನಗಣತಿ 2026ರ ಏ.1ರಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಅದಕ್ಕಿಂತ 3 ತಿಂಗಳ ಮೊದಲೇ ಜಿಲ್ಲೆ, ಉಪಜಿಲ್ಲೆ, ತಾಲೂಕು, ತೆಹಸಿಲ್, ಪೊಲೀಸ್ ಠಾಣೆಗಳಂತಹ ಆಡಳಿತ ಘಟಕಗಳ ಗಡಿಗಳನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಹೊಸ ಜಿಲ್ಲೆ/ತಾಲೂಕು ರಚನೆ ಸೇರಿದಂತೆ ಗಡಿಗಳಿಗೆ ಸಂಬಂಧಿಸಿದ ಯಾವುದೇ ಪ್ರಸ್ತಾವಿತ ಬದಲಾವಣೆಗಳಿದ್ದರೆ ಡಿ.31ರ ಒಳಗೆ ಮುಗಿಸಿಕೊಳ್ಳಿ’ ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರ್ದೇಶಿಸಿದೆ.
ಇದರಿಂದಾಗಿ ಹೊಸ ತಾಲೂಕು ಹಾಗೂ ಜಿಲ್ಲೆ ರಚನೆ ಮಾಡುವುದಿದ್ದರೆ ಡಿ.31ರೊಳಗೆ ಮಾಡಬೇಕು. ನಂತರ ಯಾವುದೇ ಹೊಸ ತಾಲೂಕು ಹಾಗೂ ಜಿಲ್ಲೆ ರಚನೆ ಮಾಡುವಂತಿಲ್ಲ ಎಂದು ಕೇಂದ್ರ ಸೂಚಿಸಿದಂತಾಗಿದೆ. ಗಣತಿ ಪ್ರಕ್ರಿಯೆ ಮುಗಿವವರೆಗೆ ಈ ಸೂಚನೆ ಇದು ಜಾರಿಯಲ್ಲಿರುತ್ತದೆ.
ಕರ್ನಾಟಕದಲ್ಲಿ ತುಮಕೂರು ಜಿಲ್ಲೆಯನ್ನು 3 ಭಾಗ ಹಾಗೂ ಬೆಳಗಾವಿಯನ್ನು 2 ಭಾಗ ಮಾಡಬೇಕು ಎಂಬ ಬೇಡಿಕೆ ಇರುವ ನಡುವೆಯೇ ಕೇಂದ್ರ ಸರ್ಕಾರದ ಈ ಸೂಚನೆ ಮಹತ್ವ ಪಡೆದಿದೆ.
ಕೇಂದ್ರದ ಸೂಚನೆ ಏನು?:
ಜನಗಣತಿ ಸಂಬಂಧ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಜನಗಣತಿ ಆಯುಕ್ತ ಹಾಗೂ ರಿಜಿಸ್ಟ್ರಾರ್ ಜನರಲ್ ಮೃತ್ಯುಂಜಯ ಕುಮಾರ್ ನಾರಾಯಣ್ ಪತ್ರ ಬರೆದಿದ್ದು, ‘ಜನಗಣತಿಗಾಗಿ, ಎಲ್ಲಾ ಹಳ್ಳಿ ಮತ್ತು ಪಟ್ಟಣಗಳನ್ನು ಏಕರೂಪದ ಬ್ಲಾಕ್ಗಳಾಗಿ ವಿಂಗಡಿಸಲಾಗಿದೆ.
ಬ್ಲಾಕ್ಗಳನ್ನು ಅಂತಿಮಗೊಳಿಸಿದ ನಂತರ, ಗಡಿಗಳಿಗೆ ಸಂಬಂಧಿಸಿದ ಯಾವುದೇ ಬದಲಾವಣೆ ಮಾಡಲು ಸಾಧ್ಯವಾಗುವುದಿಲ್ಲ. ಜಿಲ್ಲೆ, ಉಪಜಿಲ್ಲೆ, ತಾಲೂಕು ಮತ್ತು ಪೊಲೀಸ್ ಠಾಣೆಗಳಂತಹ ಆಡಳಿತ ಘಟಕಗಳ ಗಡಿಗಳನ್ನು ಅಂತಿಮಗೊಳಿಸಿದ 3 ತಿಂಗಳ ನಂತರವೇ ಜನಗಣತಿ ನಡೆಸಬಹುದು. ಗಣತಿಯನ್ನು ಏ.1ರಿಂದ ಆರಂಭಿಸಲಾಗುತ್ತದೆ. ಹಾಗಾಗಿ ಡಿ.31ಕ್ಕೂ ಮೊದಲೇ ಗಡಿಗಳಿಗೆ ಸಂಬಂಧಿಸಿದ ಯಾವುದೇ ಪ್ರಸ್ತಾವಿತ ಬದಲಾವಣೆಗಳಿದ್ದರೆ ಮಾಡಿಕೊಳ್ಳಬೇಕು’ ಎಂದು ನಿರ್ದೇಶಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ