
ಚೆನ್ನೈ/ಕೋಲ್ಕತಾ(ಫೆ.27): ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆಗೆ ಕೆಲವೇ ತಾಸು ಮುನ್ನ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಮತದಾರರಿಗೆ ಭರ್ಜರಿ ಕೊಡುಗೆಗಳನ್ನು ಆಯಾ ರಾಜ್ಯ ಸರ್ಕಾರಗಳು ಪ್ರಕಟಿಸಿವೆ. ತಮಿಳುನಾಡಿನಲ್ಲಿ ಚಿನ್ನದ ಸಾಲ ಮನ್ನಾ ಮಾಡಿದ್ದರೆ, ಬಂಗಾಳದಲ್ಲಿ ಕಾರ್ಮಿಕರ ಕನಿಷ್ಠ ಕೂಲಿ ಹೆಚ್ಚಿಸಲಾಗಿದೆ.
"
ತಮಿಳುನಾಡಿನಲ್ಲಿ ಚುನಾವಣಾ ಕೊಡುಗೆಯಲ್ಲಿ ಹೊಸ ‘ರಾಜಕೀಯ ಅನ್ವೇಷಣೆ’ ಮಾಡಲಾಗಿದೆ. ಇಷ್ಟುಕಾಲ ಕೃಷಿಗೆ ಸೀಮಿತವಾಗಿದ್ದ ಸಾಲ ಮನ್ನಾವನ್ನು ಇದೀಗ ಚಿನ್ನದ ಸಾಲಕ್ಕೂ ವಿಸ್ತರಿಸಲಾಗಿದೆ. ತಮಿಳುನಾಡಿನಲ್ಲಿ ಸಹಕಾರಿ ಬ್ಯಾಂಕ್ಗಳಲ್ಲಿ ಚಿನ್ನವನ್ನು ಅಡವಿಟ್ಟು ರೈತರು ಮತ್ತು ಬಡವರು ಮಾಡಿದ್ದ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಘೋಷಿಸಿದ್ದಾರೆ. 6 ಸವರನ್(48 ಗ್ರಾಂ) ವರೆಗೆ ಚಿನ್ನ ಅಡವಿಟ್ಟು ಸಾಲ ಪಡೆದಿದ್ದರೆ ಅದು ಮನ್ನಾ ಆಗಿ, ಅಡವಿಟ್ಟವರಿಗೆ ಚಿನ್ನ ಮರಳಿ ಸಿಗಲಿದೆ. ಜೊತೆಗೆ, ಸಹಕಾರ ಬ್ಯಾಂಕ್ಗಳ ಮೂಲಕ ಸ್ವಸಹಾಯ ಸಂಘಗಳು ಪಡೆದ ಸಾಲ ಕೂಡ ಮನ್ನಾ ಆಗಲಿದೆ.
ಇದರೊಂದಿಗೆ ತಮಿಳುನಾಡಿನಲ್ಲಿ ರಾಜಕೀಯ ಪಕ್ಷಗಳು ಮಿಕ್ಸಿ, ಮೊಬೈಲ್, ಸ್ಕೂಟರ್, ಟೀವಿ, ಅಮ್ಮ ಕ್ಯಾಂಟೀನ್, ಅಮ್ಮ ಬೇಬಿ ಕೇರ್, ಅಮ್ಮ ವಾಟರ್, ಅಮ್ಮ ಲ್ಯಾಪ್ಟಾಪ್ ಮುಂತಾಗಿ ಪ್ರಕಟಿಸುತ್ತಿದ್ದ ಉಚಿತ ಕೊಡುಗೆಗಳ ಪಟ್ಟಿಗೆ ಹೊಸದೊಂದು ಸೇರ್ಪಡೆಯಾಗಿದೆ.
ಪ.ಬಂಗಾಳದಲ್ಲೂ ಕೊಡುಗೆ:
ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವ ಮುಂಚಿತವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದಿನಗೂಲಿ ಕಾರ್ಮಿಕರ ಕನಿಷ್ಠ ವೇತನ ಏರಿಕೆ ಸೇರಿದಂತೆ ಹಲವು ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ತನ್ಮೂಲಕ ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆಗೇರಲು ಯತ್ನಿಸುತ್ತಿರುವ ಬಿಜೆಪಿಯನ್ನು ಕಟ್ಟಿಹಾಕಲು ಮಮತಾ ಯೋಜನೆ ರೂಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ