'ಡ್ರ್ಯಾಗನ್‌ಗೆ ಒಂದಿಂಚೂ ನೆಲ ಬಿಟ್ಟಿಲ್ಲ: ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ಭಾರತ-ಚೀನಾ ಒಪ್ಪಂದ'

By Suvarna NewsFirst Published Feb 11, 2021, 1:41 PM IST
Highlights

ಲಡಾಖ್ ಗಡಿಭಾಗದಲ್ಲಿ ಬಿಕ್ಕಟ್ಟು ಶಮನಗೊಳಿಸಲು ಭಾರತ ನಡೆಸಿದ ಅವಿರತ ಮಾತುಕತೆ| ಲಡಾಖ್​ನ ಪಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯ ಪ್ರದೇಶಗಳಿಂದ ಭಾರತ ಮತ್ತು ಚೀನಾದ ಸೇನೆಗಳು ವಾಪಸ್ ಹೋಗುವ ಕೆಲಸ ಆರಂಭ| ಭಾರತಕ್ಕೆ ಸೇರಿದ ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ

ನವದೆಹಲಿ(ಫೆ.11): ಲಡಾಖ್ ಗಡಿಭಾಗದಲ್ಲಿ ಬಿಕ್ಕಟ್ಟು ಶಮನಗೊಳಿಸಲು ಭಾರತ ನಡೆಸಿದ ಅವಿರತ ಮಾತುಕತೆ ಪ್ರಯತ್ನ ಫಲಕೊಡುತ್ತಿದೆ. ಲಡಾಖ್​ನ ಪಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯ ಪ್ರದೇಶಗಳಿಂದ ಭಾರತ ಮತ್ತು ಚೀನಾದ ಸೇನೆಗಳು ವಾಪಸ್ ಹೋಗುವ ಕೆಲಸ ಆರಂಭವಾಗಿದೆ. ಅಲ್ಲದೇ ಭಾರತಕ್ಕೆ ಸೇರಿದ ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ, ದೇಶದ ಭದ್ರತೆ ವಿಚಾರ ಬಂದಾಗ ನೆರೆ ದೇಶಗಳೊಂದಿಗೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪುನರುಚ್ಛರಿಸಿದ್ದಾರೆ.

ನಾನೊಬ್ಬ ಭಾರತೀಯ ಮುಸಲ್ಮಾನ ಎನ್ನಲು ಹೆಮ್ಮೆಯಾಗುತ್ತೆ: ಗುಲಾಂ ನಬಿ ಆಜಾದ್!

ಇಂದು ರಾಜ್ಯಸಭೆಯಲ್ಲಿ ಭಾರತ-ಚೀನಾ ಗಡಿ ವಿವಾದ, ಬೆಳವಣಿಗೆಗಳ ಬಗ್ಗೆ ಮಾಹಿತಿ ಕೊಟ್ಟ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಂತ ಹಂತವಾಗಿ ಎಚ್ಚರಿಕೆಯಿಂದ ಈ ಪ್ರಕ್ರಿಯೆ ನಡೆಯಲಿದೆ. ಪಾಂಗಾಂಗ್ ನಾರ್ತ್ ಬ್ಯಾಂಕ್​ನಲ್ಲಿ ಜಮಾವಣೆ ಆಗಿರುವ ಉಭಯ ಸೇನಾಪಡೆಗಳನ್ನ ಮೊದಲು ಹಿಂದಕ್ಕೆ ಕರೆಸಲಾಗುತ್ತದೆ. ನಂತರ ದಕ್ಷಿಣ ದಂಡೆಯಿಂದ ತೆರವು ಕಾರ್ಯವಾಗಲಿದೆ. ಸರೋವರದ ದಕ್ಷಿಣ ದಂಡೆಯಿಂದ ಯುದ್ಧದ ಟ್ಯಾಂಕ್​ಗಳನ್ನ ವಾಪಸ್ ಕಳುಹಿಸಲಾಗುತ್ತಿದೆ. ಅಲ್ಲಿರುವ ಭಾರತೀಯ ತುಕಡಿಗಳ ಪ್ರಮಾಣವನ್ನೂ ತಗ್ಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅಲ್ಲದೇ ಚೀನಾ ಸೇನೆ ಜೊತೆ ಇದುವರೆಗೆ 9 ಸುತ್ತಿನ ಮಾತುಕತೆ ನಡೆದಿದೆ. ಅದರಲ್ಲಿ ಆದ ಒಪ್ಪಂದದ ಪ್ರಕಾರ, ಪಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ತೀರದಲ್ಲಿ ಸೇನೆ ಹಿಂಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ಹಂತ ಹಂತವಾಗಿ, ಸಮನ್ವಯ ಮಾದರಿಯಲ್ಲಿ ಗಡಿ ಸಮೀಪದ ಮೊದಲ ಸಾಲಿನಿಂದ ಭಾರತ-ಚೀನಾ ಸೇನಾಪಡೆಯನ್ನು ಹಿಂತೆಗೆದುಕೊಳ್ಳುತ್ತಿವೆ ಎಂದು ವಿವರ ನೀಡಿದರು.

ಪಾಕಿಸ್ತಾನ ಅಕ್ರಮವಾಗಿ ಭಾರತದ ಭೂಮಿಯನ್ನು ಚೀನಾಗೆ ನೀಡಿದೆ. ಈ ಒಪ್ಪಂದ ನಾವು ಎಂದಿಗೂ ಒಪ್ಪಲು ಸಾಧ್ಯವಿಲ್ಲ. ಭಾರತಕ್ಕೆ ಸೇರಿದ ಪ್ರದೇಶ ತನಗೆ ಸೇರಿದ್ದು ಎಂದು ಚೀನಾ ಪ್ರತಿಪಾದಿಸುತ್ತಿದೆಡ. ಅಂತಹ ಅನಪೇಕ್ಷಿತ ಹೇಳಿಕೆಗಳನ್ನು ನಾವು ಒಪ್ಪಲು ಸಾಧ್ಯವೇ ಇಲ್ಲ ಎಂದೂ ತಿಳಿಸಿದ್ದಾರೆ. 

ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಬಗ್ಗೆ ಮಾತನಾಡುತ್ತಾ ಭಾವುಕರಾದ ಮೋದಿ!

ಪೂರ್ವ ಲಡಾಖ್ ಪರಿಸ್ಥಿತಿ ಹೇಗಿದೆ?

ಪೂರ್ವ ಲಡಾಖ್​ನ ಎಲ್​ಎಸಿ ಬಳಿ ಹಲವು ಪುಟ್ಟ ಪ್ರದೇಶಗಳನ್ನ ನಿರ್ಮಿಸಲಾಗಿದೆ. ಗಡಿ ಬಳಿ ಹಾಗೂ ನಮ್ಮ ಗಡಿಭಾಗದ ಸಮೀಪವೇ ಚೀನಾ ದೊಡ್ಡ ಪ್ರಮಾಣದಲ್ಲಿ ಸೇನಾ ಪಡೆ ಹಾಗೂ ಮದ್ದು ಗುಂಡುಗಳನ್ನ ನಿಯೋಜಿಸಿದೆ. ನಮ್ಮ ಸೇನಾಪಡೆಗಳು ಅದಕ್ಕೆ ತಕ್ಕಂತೆ ನಿಯೋಜನೆಗೊಂಡಿವೆ. ಭಾರತದ ಸಾರ್ವಭೌಮತೆಯನ್ನ ರಕ್ಷಿಸಲು ಎಂಥದ್ದೇ ಕ್ಲಿಷ್ಟ ಸಂದರ್ಭ ಎದುರಾದರೂ ಎದುರಿಸಲು ನಮ್ಮ ಭದ್ರತಾ ಪಡೆಗಳು ಸಮರ್ಥ ಇವೆ ಎಂಬುದು ನಿಚ್ಚಳವಾಗಿದೆ ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.ಮಾತುಕತೆಯಂತೆ ಪಾಂಗಾಂಗ್ ಸರೋವರದ ಉತ್ತರ ದಂಡೆಯಲ್ಲಿರುವ ಫಿಂಗರ್ 8 ಪ್ರದೇಶದ ಪೂರ್ವ ಭಾಗದಲ್ಲಿ ಚೀನಾ ತನ್ನ ಸೇನಾ ತುಕಡಿಗಳ ನಿಯೋಜನೆ ಮುಂದುವರಿಸಲಿದೆ. ಭಾರತವು ಫಿಂಗರ್ 3 ಪ್ರದೇಶದಲ್ಲಿರುವ ತನ್ನ ಖಾಯಂ ನೆಲೆಯಲ್ಲಿ ಸೇನಾ ನಿಯೋಜನೆ ಇರಲಿಸಲಿದೆ ಎಂದೂ ರಕ್ಷಣಾ ಸಚಿವರು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ಧಾರೆ.

click me!