ಫತೇಪುರ್ ಸಿಕ್ರಿ ದರ್ಗಾ ಅಡಿಯಲ್ಲಿ ಹಿಂದೂ ದೇವಾಲಯದ ಕುರುಹು, ಅರ್ಜಿ ವಿಚಾರಣೆಗೆ ಕೋರ್ಟ್ ಅಸ್ತು!

By Suvarna NewsFirst Published May 10, 2024, 2:36 PM IST
Highlights

ಗ್ಯಾನವ್ಯಾಪಿ, ಮಥುರಾ ಸೇರಿದಂತೆ ಹಲವು ಮಸೀದಿಗಳು ಹಿಂದೂ ದೇವಾಲಯ ಧ್ವಂಸಗೊಳಿಸಿ ನಿರ್ಮಿಸಲಾಗಿದೆ ಅನ್ನೋ ವಿವಾದ ವಿವಾದ ಕೋರ್ಟ್‌ನಲ್ಲಿದೆ. ಇದರ ಬೆನ್ನಲ್ಲೇ ಇದೀಗ ಪ್ರಸಿದ್ಧ ಫತೇಪುರ್ ಸಿಕ್ರಿ ದರ್ಗಾ ವಿರುದ್ಧ ವಕೀಲರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ. ದರ್ಗಾ ಅಡಿಯಲ್ಲಿ ಕಾಮಾಕ್ಯ ದೇವಾಲಯವಿದೆ. ಸಮೀಕ್ಷೆ ನಡೆಸಿ ಹಿಂದೂಗಳಿಗೆ ಮರಳಿಸಲು ಕೋರಿದ ಅರ್ಜಿಯನ್ನು ಕೋರ್ಟ್ ಸ್ವೀಕರಿಸಿದೆ.
 

ಆಗ್ರ(ಮೇ 10) ಕಾಶಿ ವಿಶ್ವನಾಥ ದೇವಾಲಯದ ಆವರಣದಲ್ಲಿರುವ ಗ್ಯಾನವ್ಯಾಪಿ ಮಸೀದಿ, ಮಥುರಾ ಶ್ರೀಕೃಷ್ಣ ಮಂದಿರದ ಆವರಣದಲ್ಲಿರುವ ಈದ್ಗಾ ಮಸೀದಿ, ಬೋಜಶಾಲಾ ದೇವಾಲಯ ಸಂಕೀರ್ಣ ಸೇರಿದಂತೆ ಹಲವು ಮಸೀದಿ ಹಾಗೂ ದರ್ಗಾ ವಿರುದ್ದದ ಪ್ರಕರಣಗಳು ಕೋರ್ಟ್‌ನಲ್ಲಿದೆ. ಹಿಂದೂ ದೇವಾಲಯದ ಮೇಲೆ ಮಸೀದಿ, ದರ್ಗಾ ಕಟ್ಟಲಾಗಿದೆ ಎಂದು ಕಾನೂನು ಹೋರಾಟ ನಡೆಯುತ್ತಿದೆ. ಇದೀಗ ಈ ಸಾಲಿಗೆ ಪ್ರಸಿದ್ಧ ಫತೇಪುರ್ ಸಿಕ್ರಿ ದರ್ಗಾ ಸೇರಿಕೊಂಡಿದೆ. ಫತೇಪುರ್ ಸಿಕ್ರಿ ದರ್ಗಾ ಅಡಿಯಲ್ಲಿ ಮಾ ಕಾಮಾಕ್ಯ ದೇವಿ ಹಿಂದೂ ದೇವಾಲಯದ ಕುರುಹುಗಳಿವೆ ಎಂದು ಆಗ್ರಾ ವಕೀಲರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ. ವಕೀರಲ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿದ್ದು, ವಿಚಾರಣೆಗೆ ಗ್ರೀನ್ ಸಿಗ್ನಲ್ ನೀಡಿದೆ.

ವಕೀಲ ಅಜಯ್ ಪ್ರತಾಪ್ ಸಿಂಗ್ ಇದೀಗ ಈ ಪ್ರಕರಣ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಆಗ್ರಾ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಅಜಯ್ ಪ್ರತಾಪ್ ಸಿಂಗ್, ಸಲೀಂ ಚಿಸ್ತಿ ದರ್ಗಾ ಆಡಳಿತ ನೋಡಿಕೊಳ್ಳುತ್ತಿರುವ ಉತ್ತರ ಪ್ರದೇಶ ಕೇಂದ್ರ ಸುನ್ನಿ ವಕ್ಫ್ ಬೋರ್ಡ್, ಜಾಮಾ ಮಸೀದಿ ಆಡಳಿತ ಮಂಡಳಿ ವಿರುದ್ಧ ದೂರು ನೀಡಿದ್ದಾರೆ. ಸದ್ಯ ಫತೇಪುರ್ ಸಿಕ್ರಿ ದರ್ಗಾ ಭಾರತೀಯ ಪುರಾತತ್ವ ಇಲಾಖೆ ಅಡಿಯಲ್ಲಿರುವ ಈ ಆಸ್ತಿಯನ್ನು ಸುನ್ನಿ ವಕ್ಫ್ ಬೋರ್ಡ್, ಜಾಮಾ ಮಸೀದಿ ಆಡಳಿತ ಮಂಡಳಿ ಕಬ್ಜಾ ಮಾಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಹಿಂದೂ ಹೋರಾಟಕ್ಕೆ ಗೆಲುವು, ಗ್ಯಾನವಾಪಿ ಮಸೀದಿಯಲ್ಲಿ ಪೂಜೆ ತಡೆಗೆ ಸುಪ್ರೀಂ ಕೋರ್ಟ್ ನಿರಾಕರಣೆ!

ಫತೇಪುರ್ ಸಿಕ್ರಿಯ ಮೂಲ ಹೆಸರು ಸಿಕ್ರಿ. ವಿಜಯಪುರ ಸಿಕ್ರಿ ಎಂದೂ ಕರೆಯುತ್ತಾರೆ. ಇದು ಈ ಪ್ರದೇಶವನ್ನು ಆಡಳಿತ ಮಾಡಿದ ಸಿಕಾವಾರ್ ಕ್ಷತ್ರಿಯಾ ರಾಜನಿಂದ ಈ ಹೆಸರು ಬಂದಿದೆ. ಮಾ ಕಾಮಾಕ್ಯ ದೇವಿಯ ಗರ್ಭಗುಡಿಯ ಮೇಲೆ ಫತೇಪುರ್ ಸಿಕ್ರಿ ದರ್ಗಾ ನಿರ್ಮಿಸಲಾಗಿದೆ. ಅಕ್ಬರ್ ಕಾಲದಲ್ಲಿ ಈ ದೇವಾಲಯ ಧ್ವಂಸ ಮಾಡಿ ದರ್ಗಾ ನಿರ್ಮಿಸಲಾಗಿದೆ. ಈ ಕುರಿತು ಬಾಬರ್ ನಾಮದಲ್ಲಿ ಉಲ್ಲೇಖವಿದೆ ಎಂದು ಅಜಯ್ ಪ್ರತಾಪ್ ಸಿಂಗ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇತ್ತೀಚೆಗೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ಭೋಜಶಾಲಾ ಸಂಕೀರ್ಣ ಸಮೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್ ಆದೇಶ ನೀಡಿತ್ತು. ಕಾರಣ ಹಿಂದೂಗಳ ದೇವಾಲಯಕ್ಕೆ ತಾಗಿಕೊಂಡ ಮಸೀದಿ ನಿರ್ಮಾಣ ಮಾಡಲಾಗಿದೆ. ಆದರೆ ಇದು 11ನೇ ಶತಮಾನಲದಲ್ಲಿ ನಿತ್ಯ ಪೂಜೆ ಮಾಡುತ್ತಿದ್ದ ಸರಸ್ವತಿ ಮಂದಿರವಾಗಿತ್ತು ಎಂದು ಹಿಂದೂಗಳು ವಾದ ಮಂಡಿಸಿದ್ದಾರೆ. ಹೀಗಾಗಿ ಮಧ್ಯಪ್ರದೇಶ ಸರ್ಕಾರ ಸಮೀಕ್ಷೆಗೆ ಆದೇಶ ನೀಡಿತ್ತು. ಇದೇ ಮಂದಿರವು ಇದೀಗ  ಮುಸ್ಲಿಮ್ ಆಡಳಿತ ಮಂಡಳಿಯಲ್ಲಿದೆ. ಇದನ್ನು ಕಮಲ್ ಮೌಲಾ ಮಸೀದಿ ಎಂದು ಮುಸ್ಲಿಮರು ವಾದಿಸಿದ್ದಾರೆ.  2003ರಿಂದ ಕೋರ್ಟ್ ಅನುಮತಿ ಮೇರೆಗೆ ಇಲ್ಲಿ ಮಂಗಳವಾರ ಸರಸ್ವತಿ ಪೂಜೆಗೆ ಅವಕಾಶ ನೀಡಲಾಗಿದೆ.  

ಭೋಜಶಾಲಾ ದೇವಾಲಯ ಸಂಕೀರ್ಣದ ಎಎಸ್‌ಐ ಸರ್ವೆಗೆ ಆದೇಶ ನೀಡಿದ ಹೈಕೋರ್ಟ್‌!

click me!