
ನವದೆಹಲಿ (ಮೇ.13): ಲೋಕಸಭಾ ಚುನಾವಣೆಯ ಇನ್ನೂ 4 ಹಂತದ ಮತದಾನ ಬಾಕಿ ಇರುವಾಗಲೇ, ಈ ಬಾರಿ 400ಕ್ಕಿಂತ ಹೆಚ್ಚು ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಏರುವ ವಿಶ್ವಾಸದಲ್ಲಿರುವ ಬಿಜೆಪಿ ತನ್ನ ನೂತನ ಸರ್ಕಾರದ ಮೊದಲ ಮಂತ್ರಿ ಪರಿಷತ್ ಸಭೆಗೆ ಸಿದ್ಧತೆ ನಡೆಸುತ್ತಿದೆ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.
ಹಾಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ವಿವಿಧ ಸಚಿವಾಲಯಗಳಲ್ಲಿ ಕಾರ್ಯದರ್ಶಿಗಳಾಗಿರುವ 10 ವಿವಿಧ ವಲಯಗಳ ಕಾರ್ಯದರ್ಶಿಗಳ ಗುಂಪೊಂದನ್ನು ಸರ್ಕಾರ ರಚಿಸಿದ್ದು, ಅದು ಈಗಾಗಲೇ ನೂತನ ಸರ್ಕಾರದ ಮೊದಲ 100 ದಿನದ ಅಜೆಂಡಾ (ಕಾರ್ಯಸೂಚಿ) ರೂಪಿಸುವ ಕೆಲಸದಲ್ಲಿ ನಿರತವಾಗಿದೆ ಎಂದು ಮೂಲಗಳು ತಿಳಿಸಿವೆ.
ನಾನು ಇರೋವರೆಗೂ ಸಿಎಎ ರದ್ದಿಲ್ಲ: ಪ್ರಧಾನಿ ಮೋದಿ
ಕೃಷಿ, ಹಣಕಾಸು, ವಿದೇಶಾಂಗ, ಗೃಹ, ರಕ್ಷಣೆ ಸೇರಿದಂತೆ ಹಲವು ಸಚಿವಾಲಯಗಳ ಕಾರ್ಯದರ್ಶಿಗಳು ಹಲವು ದಿನಗಳಿಂದ ನೂತನ ಸರ್ಕಾರ ತನ್ನ ಮೊದಲ 100 ದಿನಗಳಲ್ಲಿ ಕೈಗೊಳ್ಳಬೇಕಾದ/ಕೈಗೊಳ್ಳಲಿರುವ ಯೋಜನೆಗಳ ರೂಪರೇಷೆ ರಚಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ತಂಡಕ್ಕೆ ಈಗಾಗಲೇ ಆಂತರಿಕವಾಗಿ ಮತ್ತು ಬಾಹ್ಯವಾಗಿ ಸಂಗ್ರಹಿಸಿರುವ ಮಾಹಿತಿ ರವಾನಿಸಲಾಗಿದೆ.
ಅದನ್ನು ಆಧಾರವಾಗಿಟ್ಟುಕೊಂಡು ಈ ಅಧಿಕಾರಿಗಳ ತಂಡ ತನ್ನ ವರದಿಯನ್ನು ಸಿದ್ಧಪಡಿಸಲಿದೆ. ಇದು ಅಂತಿಮಗೊಂಡು ಬಳಿಕ ಅದನ್ನು ನೂತನ ಸರ್ಕಾರ, ತನ್ನ ಮೊದಲ ಮಂತ್ರಿಪರಿಷತ್ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುವ ಉದ್ದೇಶ ಹೊಂದಿದೆ ಎಂದು ಮೂಲಗಳು ತಿಳಿಸಿವೆಕೆಲ ದಿನಗಳ ಹಿಂದೆ ಅಧಿಕಾರಿಗಳು ಭಾಗಿಯಾಗಿದ್ದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಮುಂದಿನ ಕೆಲ ದಿನಗಳ ಕಾಲ ನಾನು ಚುನಾವಣೆಯಲ್ಲಿ ಬ್ಯುಸಿಯಾಗಿರುವೆ.
Karnataka MLC Election 2024: ಜೆಡಿಎಸ್-ಬಿಜೆಪಿ ಮೈತ್ರಿಗೆ ಅಭ್ಯಂತರ ಇಲ್ಲ: ಡಿ.ಕೆ.ಶಿವಕುಮಾರ್
ಆದರೆ ಒಮ್ಮೆ ಚುನಾವಣೆ ಮುಗಿದು ನಮ್ಮ ಸರ್ಕಾರ ರಚನೆಯಾಗುತ್ತಲೇ ಮೊದಲ ದಿನದಿಂದಲೇ ನಿಮಗೆ ಭರ್ಜರಿ ಕೆಲಸ ಕಾದಿರಲಿದೆ. ಅದಕ್ಕೆ ನೀವು ಸಿದ್ಧರಾಗಿರಿ ಎಂದಿದ್ದರು.ಅದಕ್ಕೆ ಪೂರಕವಾಗಿ ಇದೀಗ ಮೋದಿ ಸರ್ಕಾರ ಅರ್ಧ ಚುನಾವಣೆ ಮುಗಿಯುವೇ ಮೊದಲೇ ಗೆಲುವಿನ ವಿಶ್ವಾಸದಲ್ಲಿ ಹೊಸ ಸರ್ಕಾರ ಜಾರಿಗೆ ತರಲಿರುವ ಯೋಜನೆಗಳ ಸಿದ್ಧಪಡಿಸುವ ಕೆಲಸ ಆರಂಭಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ