ಗುಜರಾತ್ Congress ಮುಖಂಡನ ಪುತ್ರನ ಮದುವೆ, ಮಾಂಸದೂಟ ತಿಂದ 1200 ಮಂದಿ ಆಸ್ಪತ್ರೆಗೆ ದಾಖಲು!

By Suvarna NewsFirst Published Mar 6, 2022, 12:27 AM IST
Highlights

ಶುಕ್ರವಾರ ರಾತ್ರಿ ನಡೆದ ವಿವಾಹ ಸಮಾರಂಭ

ಮಾಂಸದೂಟ ತಿಂದ 1200 ಮಂದಿ ಆಸ್ಪತ್ರೆಗೆ ದಾಖಲು

ಮಾಂಸದೂಟದಲ್ಲಿ ಫುಡ್ ಪಾಯ್ಸನ್ ಆಗಿರುವ ಶಂಕೆ

ಅಹಮದಾಬಾದ್ (ಮಾ. 6): ಗುಜರಾತ್‌ನ (Gujarat) ಮೆಹ್ಸಾನಾ (Mehsana) ಜಿಲ್ಲೆಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರ (Congress Leader) ಪುತ್ರನ ಮದುವೆಯಲ್ಲಿ ಆಹಾರ (Food) ಸೇವಿಸಿದ ನಂತರ 1,200 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು (Police) ಶನಿವಾರ ತಿಳಿಸಿದ್ದಾರೆ. ವಿಸ್ನಗರ (Visnagar ) ತಾಲೂಕಿನ ಸವಲ (Savala ) ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ವಿಸ್ನಗರ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಮದುವೆ ಮನೆಯಲ್ಲಿ ಆಹಾರ ಸೇವಿಸಿದ ನಂತರ 1,200 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದರು ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು ಎಂದು ಮೆಹ್ಸಾನಾ ಪೊಲೀಸ್ ವರಿಷ್ಠಾಧಿಕಾರಿ ಪಾರ್ಥರಾಜ್‌ಸಿನ್ಹ್ ಗೋಹಿಲ್ (Mehsana Superintendent of Police Parthrajsinh Gohil ) ಹೇಳಿದ್ದಾರೆ. ಜನರು ಔತಣಕ್ಕೆ ಮುಗಿಬಿದ್ದ ಬೆನ್ನಲ್ಲಿಯೇ, ವಾಂತಿ ಮಾಡಲು ಪ್ರಾರಂಭಿಸಿದರು. ಇನ್ನೂ ಕೆಲವರಿಗೆ ಭೇದಿಯ ಸಮಸ್ಯೆಯೂ ಕಾಡಿತು. ಅವರೆಲ್ಲರನ್ನೂ ವಿಸ್ನಗರ, ಮೆಹ್ಸಾನಾ ಮತ್ತು ವಡ್ನಗರದ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ. 

ಸಮಾರಂಭದಲ್ಲಿ ನೀಡಲಾದ ಆಹಾರದ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ಆಹಾರ ಮತ್ತು ಔಷಧ ಇಲಾಖೆಯಿಂದ ಸಂಗ್ರಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ವಿಸ್ನಗರ ಗ್ರಾಮಾಂತರ ಪೊಲೀಸರ ಪ್ರಕಾರ, ಸವಲ ಗ್ರಾಮದಲ್ಲಿ ನಡೆದ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರ ಮಗನ ಮದುವೆ ಸಮಾರಂಭದಲ್ಲಿ ಹಲವಾರು ಜನರು ಭಾಗವಹಿಸಿದ್ದರು. ಮಾಂಸಾಹಾರವೂ ಔತಣದ ಭಾಗವಾಗಿತ್ತು.

ಬರೋಬ್ಬರಿ ಮೂರು ಸಾವಿರಕ್ಕೂ ಅಧಿಕ ಜನ ಔತಣ ಕೂಟದಲ್ಲಿದ್ದರು. ಸಸ್ಯಾಹಾರ ಹಾಗೂ ಮಾಂಸಾಹಾರದ ಅಡುಗೆಗಳನ್ನು ಮಾಡಲಾಗಿತ್ತು. ಆದರೆ, ಮಾಂಸಹಾರ ಸೇವಿಸಿದ ಜನರಲ್ಲಿ ಮಾತ್ರವೇ ವಾಂತಿ, ಭೇದಿಯ ಲಕ್ಷಣ ಕಾಣಿಸಿಕೊಂಡಿದೆ. ಬೆನ್ನುಬೆನ್ನಿಗೆ ಎಲ್ಲರೂ ಅಸ್ವಸ್ಥರಾದ ಬೆನ್ನಲ್ಲಿಯೇ ಇಡೀ ಸಮಾರಂಭದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರಾಜ್ಯ ಆರೋಗ್ಯ ಸಚಿವ ಹೃಷಿಕೇಶ್ ಪಟೇಲ್ ಕೂಡ ಆಸ್ಪತ್ರೆಗೆ ಆಗಮಿಸಿ ರೋಗಿಗಳ ಸ್ಥಿತಿಗತಿಗಳನ್ನು ತಿಳಿದುಕೊಂಡಿದ್ದಾರೆ.

ಈ ಕುರಿತು ಮಾಹಿತಿ ಪಡೆದ ಆಹಾರ ಇಲಾಖೆಯು ಮದುವೆ ಸಮಾರಂಭದಲ್ಲಿ ನೀಡಿದ ಆಹಾರದ ಮಾದರಿಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಸಮಾರಂಭದಲ್ಲಿ ನಾನ್ ವೆಜ್ ತಿಂದ ಜನರು ಫುಡ್ ಪಾಯ್ಸನ್ ಎಂದು ದೂರಿದ್ದಾರೆ ಎಂದು ಹೇಳಲಾಗಿದೆ. ದೆಹಲಿ ದರ್ಬಾರ್ ಎಂಬ ಹೆಸರಿನ ಕ್ಯಾಟರರ್‌ಗಳಿಗೆ ಮದುವೆಗೆ ಆಹಾರ ಸಿದ್ಧಪಡಿಸುವ ಆರ್ಡರ್ ನೀಡಲಾಗಿತ್ತು ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ. ಸದ್ಯ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯಲಾಗುತ್ತಿದೆ. ಇಷ್ಟೊಂದು ಸಂಖ್ಯೆಯಲ್ಲಿ ಜನರು ಏಕಾಏಕಿ ಅಸ್ವಸ್ಥರಾಗಲು (ಫುಡ್ ಪಾಯ್ಸನಿಂಗ್) ಕಾರಣವೇನು ಎಂಬುದು ಅಲ್ಲಿಂದ ವರದಿ ಬಂದ ಬಳಿಕವಷ್ಟೇ ಸ್ಪಷ್ಟವಾಗಲಿದೆ. ಆ ಬಳಿಕವಷ್ಟೇ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಕರ್ನಾಟಕದಲ್ಲಿಯೂ (Karnataka) ಹಿಂದೊಮ್ಮೆ ಇದೇ ಮಾದರಿಯ ಘಟನೆ ನಡೆದಿತ್ತು. 2018ರಲ್ಲಿ ಚಾಮರಾಜನಗರದಲ್ಲಿ(Chamarajanagara) ಸಾಮೂಹಿಕ ಊಟದ ವೇಳೆ ನಡೆದ ದುರಂತ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.ಹನೂರು ತಾಲೂಕಿನ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ವಿಷಪ್ರಸಾದ ಸೇವಿಸಿ 14 ಜನ ಮೃತಪಟ್ಟಿದ್ದರು. ಇದರ ಬೆನ್ನಲ್ಲಿಯೇ ರಾಜ್ಯ ಸರ್ಕಾರ (State Governament) ಸಾಮೂಹಿಕ ಅನ್ನದಾಸೋಹದ ವೇಳೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಿತ್ತು. ಪ್ರಕರಣದಲ್ಲಿ ಒಟ್ಟು 6 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.

click me!