
ನವದೆಹಲಿ (ಫೆ. 2): ಅದಾನಿ-ಹಿಂಡೆನ್ಬರ್ಗ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕಠಿಣ ಕ್ರಮ ಕೈಗೊಂಡಿದ್ದು, ಪ್ರಕರಣದ ಕುರಿತಾಗಿ ತಜ್ಞರ ಸಮಿತಿ ನೇಮಕ ಮಾಡುವುದಾಗಿ ತಿಳಿಸಿದೆ. ಅದರೊಂದಿಗೆ ಮಾರ್ಕೆಟ್ ರೆಗ್ಯಲೇಟರ್ ಆಗಿರುವ ಸೆಬಿಗೆ ಈ ವಿಚಾರವಾಗಿ ತನಿಖೆ ಮಾಡುವಂತೆ ಆದೇಶ ನೀಡಿದೆ. ಎರಡು ತಿಂಗಳ ಒಳಗಾಗಿ ಈ ಕುರಿತಾದ ವರದಿಯನ್ನು ನೀಡುವಂತೆ ಸೂಚನೆ ನೀಡಿದೆ. ನ್ಯಾಯಾಲಯ ರಚಿಸಿರುವ ಸಮಿತಿಯ ನೇತೃತ್ವವನ್ನು ನಿವೃತ್ತ ನ್ಯಾಯಮೂರ್ತಿ ಎಎಂ ಸಪ್ರೆ ವಹಿಸಲಿದ್ದಾರೆ. ಇಷ್ಟೇ ಅಲ್ಲ, ಈ ವಿಚಾರದಲ್ಲಿ ಸೆಬಿ ತನಿಖೆ ಮುಂದುವರೆಸಿ 2 ತಿಂಗಳಲ್ಲಿ ವರದಿ ಸಲ್ಲಿಸಲಿದೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಹಿಂಡೆನ್ಬರ್ಗ್ ಸಂಶೋಧನಾ ಸಂಸ್ಥೆ ಮಾಡಿರುವ ವರದಿ ಹಾಗೂ ಮಾರುಕಟ್ಟೆ ಉಲ್ಲಂಘನೆ ಈ ಎರಡೂ ಆರೋಪಗಳ ಬಗ್ಗೆ ಸೆಬಿ ಈಗಾಗಲೇ ತನಿಖೆ ನಡೆಸುತ್ತಿದೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಇಂಥ ಪರಿಸ್ಥಿತಿಯಲ್ಲಿ ಸೆಬಿ ತನ್ನ ತನಿಖೆಯನ್ನು ಮುಂದುವರಿಸಲಿದೆ. ತನ್ನೆಲ್ಲಾ ತನಿಖೆಯ ವಿವರಗಳನ್ನು ಸೆಬಿ 2 ತಿಂಗಳ ಒಳಗಾಗಿ ನೀಡಬೇಕು. ಇಷ್ಟೇ ಅಲ್ಲ, ಹಿಂಡೆನ್ಬರ್ಗ್ ವರದಿ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ 6 ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿದೆ.
ತಜ್ಞರ ಸಮಿತಿಯಲ್ಲಿ ಇಬ್ಬರು ಕನ್ನಡಿಗರು: ತಜ್ಞರ ಸಮಿತಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಎಎಂ ಸಪ್ರೆ ಕೆಲ್ ಅವರಲ್ಲದೆ, ಈ ಸಮಿತಿಯಲ್ಲಿ ಒಪಿ ಭಟ್, ನ್ಯಾಯಮೂರ್ತಿ ಕೆಪಿ ದೇವದತ್ ರಾಜ್ಯದ ಕೆವಿ ಕಾಮತ್, ನಂದನ್ ನಿಲೇಕಣಿ, ಸೋಮಶೇಖರ್ ಸುಂದರೇಶನ್ ಇದ್ದಾರೆ.
ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಕುಸಿದ ಅದಾನಿ,ಅಂಬಾನಿ ಸ್ಥಾನ; ಮುಗಿಯಿತಾ ಭಾರತದ ಶ್ರೀಮಂತರ ದರ್ಬಾರ್?
ಏನಿದು ಪ್ರಕರಣ: ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಕುರಿತು ಅಮೆರಿಕದ ಹಿಂಡೆನ್ಬರ್ಗ್ ಸಂಸ್ಥೆ ಕೆಲ ತಿಂಗಳ ಹಿಂದೆ ತನ್ನ ವರದಿಯನ್ನು ಪ್ರಕಟ ಮಾಡಿತ್ತು. ಅದರಂತೆ, ಅದಾನಿ ಗ್ರೂಪ್ ಮಾರುಕಟ್ಟೆ ನಿಯಮ ಉಲ್ಲಂಘನೆ ಮಾಡುವ ಮೂಲಕ ಷೇರು ಬೆಲೆಯನ್ನು ಕೃತಕವಾಗಿ ಏರಿಕೆ ಮಾಡುತ್ತಿದೆ ಮತ್ತು ವ್ಯವಹಾರಗಳಲ್ಲಿ ವಂಚನೆ ಮಾಡಲಾಗಿದೆ ಎಂದು ಆರೋಪ ಮಾಡಿತ್ತು.
Hindenburg report on Adani: ಮಾಧ್ಯಮಗಳಿಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್!
ಅದಾದ ಬಳಿಕ ಭಾರತೀಯ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನವೇ ಸೃಷ್ಟಿಯಾಗಿತ್ತು.ಅದಾನಿ ಗ್ರೂಪ್ನ ಎಲ್ಲಾ ಷೇರುಗಳಲ್ಲಿ ದೊಡ್ಡ ಕುಸಿತವಾಗಿತ್ತು. ಹಾಗಿದ್ದರೂ, ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಈ ಆರೋಪಗಳನ್ನು ಆಧಾರರಹಿತ ಮತ್ತು ತಪ್ಪುದಾರಿಗೆಳೆಯುವ ವರದಿ ಎಂದು ಆರೋಪ ಮಾಡಿದೆ. ಈ ವರದಿಯಲ್ಲಿ ಸಾರ್ವಜನಿಕರನ್ನು ದಾರಿ ತಪ್ಪಿಸುವ ರೀತಿಯಲ್ಲಿ ಬರೆಯಲಾಗಿದೆ ಎಂದು ತಿಳಿಸಲಾಗಿತ್ತು.
ತನಿಖೆಗೆ ಆದೇಶಿಸಿದ ಸುಪ್ರೀಂ ಕೋರ್ಟ್: ಹಿಂಡೆನ್ಬರ್ಗ್ನ ವರದಿಯ ನಂತರ, ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಹಲವಾರು ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿತ್ತು. ಹಿಂಡೆನ್ಬರ್ಗ್ ವರದಿಯಲ್ಲಿ ಅದಾನಿ ಗ್ರೂಪ್ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದಾರೆ. ಈ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಈಗ 6 ಸದಸ್ಯರ ಸಮಿತಿಯನ್ನು ರಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ