ಅದಾನಿ ಹೆಸರು ಮೋದಿ ಹೂಡಿಕೆ, ತನಿಖೆ ನಡೆಸಿದರೆ ಪ್ರಧಾನಿ ಒಳಗೆ; ಕೇಜ್ರಿವಾಲ್ ಗಂಭೀರ ಆರೋಪ!

By Suvarna NewsFirst Published Mar 28, 2023, 5:40 PM IST
Highlights

ದೆಹಲಿ ವಿಧಾನಸಭೆಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ. ಅದಾನಿ ಹೆಸರು ಮಾತ್ರ, ಎಲ್ಲಾ ಹೂಡಿಕೆಯನ್ನು ಮೋದಿ ಮಾಡಿದ್ದಾರೆ. ತನಿಖೆ ನಡೆಸಿದರೆ ಅದಾನಿಗೆ ಏನೂ ಆಗಲ್ಲ, ಮೋದಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುತ್ತಾರೆ ಎಂದಿದ್ದಾರೆ.

ನವದೆಹಲಿ(ಮಾ.28): ರಾಹುಲ್ ಗಾಂಧಿ ಅನರ್ಹ, ಉದ್ಯಮಿ ಗೌತಮ್ ಅದಾನಿ ವಿಚಾರ ಹಿಡಿದು ವಿಪಕ್ಷಗಳು ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಮುಗಿ ಬಿದ್ದಿದೆ. ಕಳೆದ ಕೆಲ ತಿಂಗಳಿನಿಂದ ಅದಾನಿ ವಿಚಾರ ಭಾರಿ ಗದ್ದಲಕ್ಕೆ ಕಾರಣವಾಗಿದೆ. ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇದೇ ಅದಾನಿ ವಿಚಾರ ಹಿಡಿದು ಪ್ರಧಾನಿ ಮೋದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಗೌತಮ್ ಅದಾನಿ ಹೆಸರು ಮಾತ್ರ. ಎಲ್ಲಾ ಹೂಡಿಕೆಯನ್ನು ಅದಾನಿ ಹೆಸರಲ್ಲಿ ಸ್ವತಃ ಮೋದಿ ಮಾಡಿದ್ದಾರೆ. ಹಿಂಡರ್‌ಬರ್ಗ್ ವರದಿ ತನಿಖೆ ನಡೆಸಿದರೆ ಅದಾನಿಗೆ ಏನೂ ಸಮಸ್ಯೆ ಇಲ್ಲ. ಆದರೆ ಮೋದಿ ಒಳಗೆ ಹೋಗುತ್ತಾರೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಈ ದೇಶದ ಪ್ರಜೆಗಳಿಗೆ ಏನೂ ಮಾಡಿಲ್ಲ. ಆದರೆ ತಮ್ಮ ಗೆಳೆಯರ ಬಗ್ಗೆ ಅತೀವ ಕಾಳಜಿ ಹೊಂದಿದ್ದಾರೆ. ಹಿಂಡರ್‌ಬರ್ಗ್ ವರದಿಯಿಂದ ಅತೀ ದೊಡ್ಡ ಹಗರಣ ಬೆಳಕಿಗೆ ಬಂದಿದೆ. ತಕ್ಷಣವೇ ಮೋದಿ ಅದಾನಿಯನ್ನು ಆಪತ್ತಿನಿಂದ ಪಾರುಮಾಡುವ ಕೆಲಸ ಮಾಡಿದ್ದಾರೆ. ಜೆಪಿಸಿ ತನಿಖೆಗೆ ಒತ್ತಾಯವಿದ್ದರೂ ಮೋದಿ ಬಾಯಿ ಬಿಡುತ್ತಿಲ್ಲ. ಒಂದು ವರದಿ ಪ್ರಕಾರ ಗೌತಮ್ ಅದಾನಿ ಹೆಸರಲ್ಲಿ ಪ್ರಧಾನಿ ಮೋದಿ ಹೂಡಿಕೆ ಮಾಡಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಪಿಯುಸಿ ಪಾಸ್ ಆದವರಿಂದ ಸರ್ಕಾರ ಮುನ್ನಡೆಸಲು ಸಾಧ್ಯವಿಲ್ಲ, ಪ್ರಧಾನಿ ಮೋದಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ!

ಎರಡು ವರ್ಷಗಳ ಹಿಂದೆ ವಿಮಾನ ನಿಲ್ದಾಣಗಳ ಖಾಸಗೀಕರಣ ಮಾಡಲಾಗಿದೆ. ಕೊನೆಯ ಕ್ಷಣದಲ್ಲಿ ಇದರಲ್ಲಿನ ನಿಯಮದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಅಂತಿಮವಾಗಿ ವಿಮಾನ ನಿಲ್ದಾಣ ಖಾಸಗೀಕರಣದಲ್ಲಿ ಲಾಭವಾಗಿದ್ದು ಅದಾನಿ ಸಮೂಹಕ್ಕೆ. 6 ವಿಮಾನ ನಿಲ್ದಾಣಗಳನ್ನು ಪ್ರಧಾನಿ ಮೋದಿ ಅದಾನಿ ಸಮೂಹಕ್ಕೆ ನೀಡಿದ್ದಾರೆ ಎಂದರು. 6 ವಿಮಾನ ನಿಲ್ದಾಣಗಳ ಹರಾಜಿನ ವೇಳೆ ಷರತ್ತುಗಳನ್ನು ಸಡಿಲಗೊಳಿಸಿ ಅದಾನಿ ಸಮೂಹಕ್ಕೆ ಮೋದಿ ಉಡುಗೊರೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಶ್ರೀಲಂಕಾದ ಹಲವು ಪ್ರಾಜೆಕ್ಟ್‌ಗಳು ಅದಾನಿ ಸಮೂಹದ ಕೈಸೇರಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ಶ್ರೀಲಂಕಾ ಮೇಲೆ ಮಾಡಿದ ಒತ್ತಡವೇ ಕಾರಣ. ಈ ಕುರಿತು ಶ್ರೀಲಂಕಾ ಸಂಸತ್ತಿನಲ್ಲಿ ರಾಜಪಕ್ಸ ಉತ್ತರ ನೀಡಿದ್ದಾರೆ. ಒತ್ತಡದಿಂದ ಅದಾನಿ ಗ್ರೂಪ್‌ಗೆ ಪ್ರಾಜೆಕ್ಟ್ ನೀಡಲಾಗಿದೆ ಎಂದಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 

Arvind Kejriwal: ಪ್ರಧಾನಿ ಮೋದಿಗೆ ನಿದ್ರೆ ಬರದೇ ಇರೋ ರೋಗ ಇದೆ ಎಂದ ದೆಹಲಿ ಸಿಎಂ!

ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಆಮ್ ಆದ್ಮಿ ಪಾರ್ಟಿ ಸತತ ವಾಗ್ದಾಳಿ ನಡೆಸುತ್ತಿದೆ. ದೆಹಲಿ ಮಾಜಿ ಗೃಹ ಸಚಿವ ಮನೀಶ್ ಸಿಸೋಡಿಯಾ ಬಂಧನ ಬಳಿಕ ಈ ವಾಗ್ದಾಳಿ ಹೆಚ್ಚಾಗಿದೆ. ಅಕ್ರಮ ಅಬಕಾರಿ ನೀತಿ ಹಗರಣದಲ್ಲಿ ಮನೀಶ್ ಸಿಸೋಡಿಯಾ ಬಂಧನ ರಾಜಕೀಯ ಪ್ರೇರಿತ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು. ಇಷ್ಟೇ ಅಲ್ಲ, ಪ್ರಧಾನಿ ಮೋದಿ ಸಿಬಿಐ ಸೇರಿದಂತೆ ಕೇಂದ್ರ ತನಿಖಾದಳಗಳನ್ನು ತಮ್ಮ ದಾಳಕ್ಕೆ ಬಳಸಿಕೊಳ್ಳುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದರು.
 

click me!