ರೈಲಲ್ಲೂ ಹಾವು ಬಂದ್ರೆ ಏನಪ್ಪಾ ಮಾಡೋದು: ಯುವಕ ಆಸ್ಪತ್ರೆಗೆ ದಾಖಲು

By Suvarna NewsFirst Published Apr 15, 2024, 3:35 PM IST
Highlights

ರೈಲಿನಲ್ಲಿ ಪ್ರಯಾಣಿಸುವ ವೇಳೆ ಹಾವು ಕಚ್ಚಿ ಪ್ರಯಾಣಿಕನೋರ್ವ ಅಸ್ವಸ್ಥನಾದ ಘಟನೆ ಗುರುವಾಯೂರು ಮಧುರೈ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನಡೆದಿದೆ. 

ಕೇರಳ: ರೈಲಿನಲ್ಲಿ ಪ್ರಯಾಣಿಸುವ ವೇಳೆ ಹಾವು ಕಚ್ಚಿ ಪ್ರಯಾಣಿಕನೋರ್ವ ಅಸ್ವಸ್ಥನಾದ ಘಟನೆ ಗುರುವಾಯೂರು ಮಧುರೈ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನಡೆದಿದೆ. ತೆಂಕಾಸಿ ನಿವಾಸಿ 23 ವರ್ಷದ ಕಾರ್ತಿ ಎಂಬ ಯುವಕನಿಗೆ ಇಂದು ಮುಂಜಾನೆ ರೈಲಿನಲ್ಲಿ ಪ್ರಯಾಣಿಸುವ ವೇಳೆ ಹಾವು ಕಚ್ಚಿದ್ದು, ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಗುರುವಾಯೂರು ಮಧುರೈ ಎಕ್ಸ್‌ಪ್ರೆಸ್‌ ರೈಲಿನ 7ನೇ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರೈಲು ಇಟ್ಟಮನೂರಿಗೆ ತಲುಪಿದ ವೇಳೆ ಯುವಕನಿಗೆ ಹಾವು ಕಚ್ಚಿದ್ದು, ಕೂಡಲೇ ಕಾರ್ತಿಯನ್ನು ಕೊಟ್ಟಾಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಮಧ್ಯೆ ರೈಲ್ವೆ ಸಿಬ್ಬಂದಿ ರೈಲಿನೊಳಗೆ ಹಾವು ಹೇಗೆ ಹೋಯ್ತು ಎಂಬ ಬಗ್ಗೆ ಚಿಂತೆ ಮಾಡ್ತಿದ್ದು, ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ಫೋನ್ ಕದಿಯುವಾಗ ತಗ್ಲಾಕೊಂಡ ಕಳ್ಳ, ಪಾಠ ಕಲಿಸಲು 1 ಕಿ.ಮಿ ಎಳೆದೊಯ್ದ ರೈಲು ಪ್ರಯಾಣಿಕ!

ಈ ಮಧ್ಯೆ ರೈಲ್ವೆ ಪೊಲೀಸ್ ಪೋರ್ಸ್ ಯುವಕನಿಗೆ ಹಾವು ಕಚ್ಚಿದ ಅಥವಾ ಇಲಿಯೇನಾದರೂ ಕಚ್ಚಿರಬಹುದೇ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಆದರೂ ಸಹ ಪ್ರಯಾಣಿಕರು ರೈಲಿನಲ್ಲಿ ಹಾವು ಇತ್ತು ಎಂಬುದನ್ನು ಹೇಳಿದ್ದಾರೆ. ಅಲ್ಲದೇ ಯುವಕ ಚಿಕಿತ್ಸೆಗೆ ದಾಖಲಾದ ಕೊಟ್ಟಾಯಂ ಮೆಡಿಕಲ್ ಕಾಲೇಜಿನ ವೈದ್ಯಕೀಯ ಸಿಬ್ಬಂದಿ ಕೂಡ ಯುವಕನಿಗೆ ಕಚ್ಚಿದ್ದು ಹಾವೇ ಎಂದು ಖಚಿತಪಡಿಸಿದ್ದಾರೆ. ಘಟನೆಯ ನಂತರ ರೈಲಿನ 7ನೇ ಬೋಗಿಯನ್ನು ಬಂದ್ ಮಾಡಿ  ರೈಲು ತನ್ನ ಪ್ರಯಾಣ ಮುಂದುವರೆಸಿದೆ.

ಬಹುಶಃ ಗುರುವಾಯೂರಿನಲ್ಲಿ ರೈಲು ಪಾರ್ಕಿಂಗ್ ಆಗಿದ್ದ ವೇಳೆ ರೈಲಿನ ಬೋಗಿಯೊಳಗೆ ಹಾವು ಹತ್ತಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಘಟನೆಯೂ ರೈಲು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸುವಂತೆ ಮಾಡಿದೆ. ಇತ್ತ ಯುವಕ ದಾಖಲಾದ ಆಸ್ಪತ್ರೆಯ ವೈದ್ಯರು ಯುವಕನಿಗೆ ಗಂಭೀರವಾದ ಆರೋಗ್ಯ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.

ಇತರರು ಆಕ್ರಮಿಸಿಕೊಂಡಿದ್ದ ಬುಕ್ಕಿಂಗ್ ಸೀಟನ್ನು ದೂರು ನೀಡಿದ 20 ನಿಮಿಷದಲ್ಲಿ ಮರಳಿ ನೀಡಿದ ಭಾರತೀಯ ರೈಲ್ವೆ

click me!