
ಇದೇ 10ರಂದು ದೆಹಲಿಯ ಕೆಂಪು ಕೋಟೆಯಲ್ಲಿ (Delhi Red Fort Bomb Blast) ಬಳಿ ನಡೆದ ಬಾಂಬ್ ಬ್ಲಾಸ್ಟ್ನಲ್ಲಿ 13 ಮಂದಿ ಸಾವನ್ನಪ್ಪಿರುವ ಘಟನೆ ದೇಶಾದ್ಯಂತ ಭಾರಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ಬಿಹಾರದ ಎರಡನೆಯ ಹಂತದ ಚುನಾವಣೆಯ ಹಿಂದಿನ ದಿನ ಈ ಘಟನೆ ನಡೆದಿರುವುದಕ್ಕೆ ಕಾಂಗ್ರೆಸ್ಸಿಗರು, ಚುನಾವಣೆ ಗೆಲ್ಲಲು ಬಿಜೆಪಿಯೇ ಇದನ್ನು ಮಾಡಿಸಿದೆ ಎನ್ನುವ ಅಸಂಬದ್ಧ ಹೇಳಿಕೆ ನೀಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಭಯೋತ್ಪಾದಕರು, ಭಯೋತ್ಪಾದನೆ ವಿರುದ್ಧ ಮಾತನಾಡುವುದನ್ನು ಬಿಟ್ಟು, ಅಮಾಯಕರ ಸಾವನ್ನೂ ರಾಜಕೀಯವಾಗಿ ಬಳಸಿಕೊಳ್ಳುವ ಹೀನ ಮನಸ್ಥಿತಿಯ ವಿರುದ್ಧ ದೇಶಾದ್ಯಂತ ಭಾರಿ ಅಸಮಾಧಾನವೂ ಹೊಗೆಯಾಡುತ್ತಿದೆ.
ಆದರೆ ಇವೆಲ್ಲವುಗಳ ನಡುವೆಯೇ, ಇದೀಗ ತನಿಖೆಯಿಂದ ತಿಳಿದು ಬಂದಿರುವ ವಿಷಯ ಏನೆಂದರೆ, ಮೊನ್ನೆ ದೆಹಲಿಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಿ ಹತ್ತಾರು ಮಂದಿಯ ಪ್ರಾಣ ತೆಗೆಯುವುದು ಈ ಉಗ್ರರ ಪ್ಲ್ಯಾನ್ ಆಗಿರಲಿಲ್ಲ. ಬದಲಿಗೆ ಡಿಸೆಂಬರ್ 6ರಂದು ಕನಿಷ್ಠ ಆರು ಕಡೆ ಬಾಂಬ್ ಬ್ಲಾಸ್ಟ್ ಮಾಡಿ ಸಹಸ್ರಾರು ಮಂದಿಯ ಮಾರಣ ಹೋಮ ಮಾಡುವ ಯೋಜನೆ ರೂಪಿಸಲಾಗಿತ್ತು ಎನ್ನುವುದು. ಆದರೆ, ಉಗ್ರರ ಈ ಯೋಜನೆ ಉಲ್ಟಾ ಹೊಡೆದಿದೆ. ತರಾತುರಿಯಲ್ಲಿ ಕೊನೆಯ ಕ್ಷಣ ಕೆಂಪುಕೋಟೆ ಟಾರ್ಗೆಟ್ ಮಾಡಲಾಗಿದೆ ಎನ್ನುವುದು.
ಅಂದಹಾಗೆ ಡಿಸೆಂಬರ್ 6, ಏಕೆ ಎನ್ನುವುದಾದರೆ ಇದು ಬಾಬರಿ ಮಸೀದಿಯನ್ನು ಕೆಡವಿದ ದಿನ. ಆ ದಿನವೇ ಭಾರತದಲ್ಲಿ ಅಸಂಖ್ಯ ಜನರ ಪ್ರಾಣ ತೆಗೆಯಲು ಜೈಶ್-ಎ-ಮೊಹಮ್ಮದ್ ಜೊತೆ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಈ ವೈದ್ಯರನ್ನು ಒಳಗೊಂಡ ಶಂಕಿತ ಭಯೋತ್ಪಾದಕ ಘಟಕವು ಯೋಜನೆ ರೂಪಿಸಿತ್ತು. 1992 ರಲ್ಲಿ ಅಯೋಧ್ಯೆಯ ಬಾಬರಿ ಮಸೀದಿಯನ್ನು ಕೆಡವಲಾಯಿತು. ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಶಂಕಿತ ಭಯೋತ್ಪಾದಕರು "ಬಾಬರಿ ಮಸೀದಿ ಧ್ವಂಸಕ್ಕೆ ಸೇಡು ತೀರಿಸಿಕೊಳ್ಳಲು" ಬಯಸಿದ್ದರಿಂದ ದಿನಾಂಕವನ್ನು ಆಯ್ಕೆ ಮಾಡಲಾಗಿದೆ ಎನ್ನುವುದನ್ನೂ ವಿಚಾರಣೆ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ.
ಉನ್ನತ ಗುಪ್ತಚರ ಮೂಲಗಳ ಪ್ರಕಾರ, ಶಂಕಿತ ಭಯೋತ್ಪಾದಕ ಘಟಕದ ಸದಸ್ಯರು ವಿಚಾರಣೆಯ ಸಮಯದಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಸರಣಿ ಸ್ಫೋಟಗಳನ್ನು ನಡೆಸಲು ಹಂತವಾರು ಯೋಜನೆಯನ್ನು ಸಿದ್ಧಪಡಿಸಲಾಗಿತ್ತು ಎಂದಿದ್ದಾರೆ. ಇದೇ ಕಾರಣಕ್ಕೆ ಎಲ್ಲೆಲ್ಲಿ ಸ್ಫೋಟ ಮಾಡಬಹುದು ಎನ್ನುವ ಬಗ್ಗೆ ಈ ವೈದ್ಯರನ್ನು ಒಳಗೊಂಡ ಗುಂಪು ದೆಹಲಿಯ ವಿವಿಧ ಭಾಗಗಳ ಸಮೀಕ್ಷೆ ನಡೆಸುತ್ತಿತ್ತು ಎನ್ನುವುದು ತಿಳಿದುಬಂದಿದೆ.
ಆದರೆ, ಆಗ ಆಗಿದ್ದೇ ಬೇರೆ. ಕಾರ್ ಬಾಂಬ್ ಮೂಲಕ ಆ*ತ್ಮಹತ್ಯಾ ದಾಳಿ ನಡೆಸಿದ್ದ ಉಮರ್ಗೆ ಅಲ್ಲಿ ಮೊನ್ನೆ ಸ್ಫೋಟಿಸುವ ಉದ್ದೇಶವೇ ಇರಲಿಲ್ಲ. ಆದರೆ, ಸಹಸ್ರಾರು ಮಂದಿಯ ಸಾವಿಗೆ ಪ್ಲ್ಯಾನ್ ಮಾಡಲಾಗಿತ್ತು. ಆದರೆ ಭದ್ರತಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಈ ಭಾರಿ ಅನಾಹುತ ತಪ್ಪಿದೆ. ದೇಶದ ವಿವಿಧ ಭಾಗಗಳಲ್ಲಿ ವೈದ್ಯರೂ ಒಳಗೊಂಡಂತೆ ಏಳು ಮಂದಿ ಶಂಕಿತ ಉಗ್ರರನ್ನು ಅರೆಸ್ಟ್ ಮಾಡಲಾಯಿತು. ತಮ್ಮದೇ ಆದ ರೀತಿಯಲ್ಲಿ ಪೊಲಿಸರು ವಿಚಾರಣೆ ಮಾಡಿದಾಗ, ಅವರು ಬ್ಲಾಸ್ಟ್ ಬಗ್ಗೆ ಬಾಯಿ ಬಿಟ್ಟರು. ಅರೆಸ್ಟ್ ಅಗಿರೋ ಶಂಕಿತ ಉಗ್ರರೆಲ್ಲರೂ ಡಿಸೆಂಬರ್ 6ರ ಪ್ಲ್ಯಾನ್ ಸೇರಿದಂತೆ ತಮ್ಮ ಸಹವರ್ತಿಗಳ ಬಗ್ಗೆ ಬಾಯಿಬಿಟ್ಟಿರುವುದು ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ನೋಡಿ ಡಾ. ಉಮರ್ ತನ್ನ ಬುಡಕ್ಕೆ ಇದು ಬರುವುದು ಎಂದು ಅರ್ಥ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 6ರವರೆಗೆ ಕಾದು ಪ್ರಯೋಜನವಿಲ್ಲ ಎಂದು ಅಲ್ಲಿಯೇ ಬ್ಲಾಸ್ಟ್ ಮಾಡಿದ್ದಾನೆ ಎನ್ನುವುದು ತನಿಖೆಗಳಿಂದ ತಿಳಿದುಬಂದಿದೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ