ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ರೈತ ಪ್ರತಿಭಟನೆ ಇದೀಗ ಮತ್ತೊಂದು ಸ್ವರೂಪ ಪಡೆಯುತ್ತಿದೆ. ಜನವರಿ 26ರಂದು ರೈತರು ಟ್ರಾಕ್ಟರ್ ರ್ಯಾಲಿ ನಡೆಸಲು ನಿರ್ಧರಿಸಿದ್ದಾರೆ. ಈಗಾಗಲೇ ಅನುಮತಿ ನೀಡಿರುವ ದೆಹಲಿ ಪೊಲೀಸರು ಇದೀಗ ರ್ಯಾಲಿ ಹೈಜಾಕ್ ಮಾಡಲು ಪಾಕಿಸ್ತಾನ ಕುತಂತ್ರವನ್ನು ಬಯಲು ಮಾಡಿದ್ದಾರೆ.
ನವದೆಹಲಿ(ಜ.22): ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರು ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆ ರೈತರು ಗಣರಾಜ್ಯೋತ್ಸವ ದಿನ ಟ್ರಾಕ್ಟರ್ ಪರೇಡ್ ಮೂಲಕ ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಆದರೆ ರೈತರ ಈ ಟ್ರಾಕ್ಟರ್ ರ್ಯಾಲಿ ಹೈಜಾಕ್ ಮಾಡಲು ಪಾಕಿಸ್ತಾನದಲ್ಲಿ 300ಕ್ಕೂ ಹೆಚ್ಚು ಟ್ವಿಟರ್ ಖಾತೆ ತೆರೆಯಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಅಮೆರಿಕ-ಇಸ್ರೇಲ್ ಹಿಂದಿಕ್ಕಿದ ಭಾರತ, ರಾಜ್ಯದಲ್ಲಿ ಟ್ರಾಕ್ಟರ್ ರ್ಯಾಲಿ ಖಚಿತ; ಜ.24ರ ಟಾಪ್ 10 ಸುದ್ದಿ!.
ಜನವರಿ 13 ರಿಂದ 18ರ ವರೆಗೆ ಪಾಕಿಸ್ತಾನದಿಂದ 300ಕ್ಕೂ ಹೆಚ್ಚು ಟ್ವಿಟರ್ ಖಾತೆ ತೆರೆಯಲಾಗಿದೆ. ಈ ಖಾತೆಗಳ ಮೂಲಕ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಇನ್ನು ಪ್ರತಿಭಟನಾ ನಿರತ ರೈತರನ್ನು ಉದ್ರಿಕ್ತಗೊಳಿಸುವ ಹಾಗೂ ಗಲಭೆ ಸೃಷ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಗಣರಾಜ್ಯೋತ್ಸವ ದಿನಾಚರಣೆ, ಪರೇಡ್ ಹಾಗೂ ರೈತರ ಟ್ರಾಕ್ಟರ್ ರ್ಯಾಲಿಗೆ ಹೆಚ್ಚಿನ ಭದ್ರತೆ ನೀಡಲಾಗುವುದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.