ಉತ್ತರಾಖಂಡ್ ನೀರ್ಗಲ್ಲು ದುರಂತ: 2019ರಲ್ಲೇ ಅಪಾಯದ ಮುನ್ನೆಚ್ಚರಿಕೆ!

By Kannadaprabha NewsFirst Published Feb 8, 2021, 7:19 AM IST
Highlights

2019ರಲ್ಲೇ ಇಂಥ ಅಪಾಯದ ಮುನ್ನೆಚ್ಚರಿಕೆ| ಜಾಗತಿಕ ತಾಪಮಾನ ಏರಿಕೆಯಿಂದ ಹಿಮಾಲಯ ನೀರ್ಗಲ್ಲು ದುಪ್ಪಟ್ಟು ವೇಗದಲ್ಲಿ ಕರಗುತ್ತಿವೆ : ತಜ್ಞರ ಎಚ್ಚರಿಕೆ

ನವದೆಹಲಿ(ಫೆ.08): ಭಾನುವಾರ ಉತ್ತರಾಖಂಡದಲ್ಲಿ ನಡೆದ ಘಟನೆಗೆ ಜಾಗತಿಕ ತಾಪಮಾನ ಏರಿಕೆಯೇ ಕಾರಣ ಎಂಬ ವಿಶ್ಲೇಷಣೆಗಳ ಬೆನ್ನಲ್ಲೇ, 2019ರಲ್ಲಿ ಪ್ರಕಟವಾದ ವರದಿಯೊಂದು ಇಂಥ ಘಟನೆಗಳು ಮುಂದಿನ ದಿನಗಳಲ್ಲಿ ಸಾಮಾನ್ಯವಾಗುವ ಕುರಿತು ಎಚ್ಚರಿಕೆಯನ್ನು ನೀಡಿತ್ತು.

ಭಾರತ, ಚೀನಾ, ನೇಪಾಳ ಮತ್ತು ಭೂತಾನ್‌ನ ವ್ಯಾಪ್ತಿಯ ಹಿಮಾಲಯದ ಈ ಹಿಂದಿನ 40 ವರ್ಷಗಳ ಉಪಗ್ರಹ ಚಿತ್ರ ಆಧರಿಸಿ, ಪ್ರದೇಶದಲ್ಲಿ ಜಾಗತಿಕ ಹವಾಮಾನ ಏರಿಕೆಯ ಪರಿಣಾಮಗಳ ಬಗ್ಗೆ ಜರ್ನಲ್‌ ಸೈನ್ಸ್‌ನಲ್ಲಿ ವರದಿಯೊಂದನ್ನು ಪ್ರಕಟಿಸಲಾಗಿತ್ತು. ಅದರಲ್ಲಿ ಜಾಗತಿಕ ಹವಾಮಾನ ಏರಿಕೆಯು ಹೇಗೆ ಹಿಮಾಲಯವನ್ನು ಆಪೋಷನ ತೆಗೆದುಕೊಳ್ಳುತ್ತಿವೆ. ಈ ಶತಮಾನದ ಆರಂಭದಲ್ಲಿ ಇದ್ದುದಕ್ಕಿಂತ 2 ಪಟ್ಟು ಹೆಚ್ಚು ಪ್ರಮಾಣದಲ್ಲಿ ನೀರ್ಗಲ್ಲುಗಳು ಕರಗುತ್ತಿವೆ ಎಂಬುದನ್ನು ವಿವರಿಸಲಾಗಿತ್ತು.

ಅದರಲ್ಲಿ, ‘1975-2000ರ ಅವಧಿಯಲ್ಲಿ ಹಿಮಕುಸಿತ ಎಷ್ಟುಪ್ರಮಾಣದಲ್ಲಿ ನಡೆಯುತ್ತಿತ್ತೋ, ಅದಕ್ಕಿಂತ ದ್ವಿಗುಣ ಪ್ರಮಾಣದ ಕುಸಿತ 2000ನೇ ಇಸವಿ ಬಳಿಕ ನಡೆಯುತ್ತಿದೆ. ಕಳೆದ 4 ದಶಕಗಳಲ್ಲಿ ಇಂಥ ಹಿಮಬಂಡಗಳು ತಮ್ಮ ಶೇ.25ರಷ್ಟುಪಾಲನ್ನು ಈ ರೀತಿ ಕುಸಿತದ ಮೂಲಕ ಕಳೆದುಕೊಂಡಿವೆ. ಇದಕ್ಕೆಲ್ಲಾ ಜಾಗತಿಕ ತಾಪಮಾನ ಏರಿಕೆಯೇ ಪ್ರಮುಖ ಕಾರಣ’ ಎಂದು ದೂರಲಾಗಿತ್ತು.

ಹಿಮಾಲಯದ ಪೂರ್ವದಿಂದ ಪಶ್ಚಿಮ ಭಾಗದ 2000 ಕಿ.ಮೀ ವ್ಯಾಪ್ತಿಯಲ್ಲಿ ಬರುವ 650 ಗ್ಲೇಷಿಯರ್‌ಗಳ ಉಪಗ್ರಹ ಚಿತ್ರ ಆಧರಿಸಿ ಇಂಥದ್ದೊಂದು ವರದಿಯನ್ನು ತಯಾರಿಸಲಾಗಿತ್ತು. ಈ ಪೈಕಿ ಕೆಲ ಚಿತ್ರಗಳನ್ನು ಅಮೆರಿಕ ಗೂಢಚರ ಉಪಗ್ರಹಗಳು ಸೆರೆಹಿಡಿದ ಚಿತ್ರಗಳು ಬಹಿರಂಗವಾದ ಬಳಿಕ ಬಳಸಿಕೊಳ್ಳಲಾಗಿತ್ತು.

ವರದಿ ಅನ್ವಯ 1975-2000ರ ಅವಧಿಯಲ್ಲಿ ಈ ಗ್ಲೇಷಿಯರ್‌ಗಳು ಪ್ರತಿ ವರ್ಷ 0.25 ಮೀಟರ್‌ನಷ್ಟುಮಂಜುಗಡ್ಡೆಯನ್ನು ಕಳೆದುಕೊಳ್ಳುತ್ತಿದ್ದವು. 1990ರ ಬಳಿಕ ಜಾಗತಿಕ ಮಟ್ಟದಲ್ಲಿ ಹೆಚ್ಚಾದ ತಾಪಮಾನ ಏರಿಕೆಯ ಪರಿಣಾಮಗಳು 2000ನೇ ಇಸವಿಯ ಬಳಿಕ ಗೋಚರವಾಗಲು ಆರಂಭವಾದವು. ಪರಿಣಾಮ ಮಂಜುಗಡ್ಡೆ ಕರಗುವ ವಾರ್ಷಿಕ ಪ್ರಮಾಣ ಅರ್ಧ ಮೀಟರ್‌ಗೆ ಏರಿತ್ತು ಎಂದು ವಿವರಿಸಲಾಗಿತ್ತು.

click me!