
ನವದೆಹಲಿ (ಜೂ.19): ದೇಶದಲ್ಲಿ 4 ನೇ ಅಲೆಯ ಭೀತಿಯ ನಡುವೆಯೇ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟುಏರಿಕೆ ಕಂಡುಬಂದಿದ್ದು, ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 13,216 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಸುಮಾರು 113 ದಿನಗಳ ಬಳಿಕ 13,000 ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದೇ ವೇಳೆಯಲ್ಲಿ 23 ಸೋಂಕಿತರು ಸಾವಿಗೀಡಾಗಿದ್ದಾರೆ. ಕೇರಳದಲ್ಲಿ 13, ಮಹಾರಾಷ್ಟ್ರದಲ್ಲಿ 2, ಕರ್ನಾಟಕದಲ್ಲಿ 2 ಹಾಗೂ ದೆಹಲಿ, ಮೇಘಾಲಯ, ಪಂಜಾಬ್, ಉತ್ತರಾಖಂಡ ಹಾಗೂ ಉತ್ತರಪ್ರದೇಶದಲ್ಲಿ ತಲಾ 1 ಸಾವು ವರದಿಯಾಗಿದೆ.
ಗುಣಮುಖರ ಸಂಖ್ಯೆ ಕಡಿಮೆ ಇರುವ ಕಾರಣ ಸಕ್ರಿಯ ಸೋಂಕಿತರ ಸಂಖ್ಯೆಯು 68,108ಕ್ಕೆ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇ. 2.73ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇ. 2.47ಕ್ಕೆ ಏರಿಕೆಯಾಗಿದೆ. ಇದು ದೇಶದಲ್ಲಿ ಕೋವಿಡ್ ಸೋಂಕು ವೇಗವಾಗಿ ಹರಡುತ್ತಿರುವುದನ್ನು ಸೂಚಿಸುತ್ತದೆ. ಇದೇ ವೇಳೆ, ಕೋವಿಡ್ ಚೇತರಿಕೆ ದರವು ಶೇ. 98.63ಕ್ಕೆ ಇಳಿಕೆಯಾಗಿದೆ. ದೇಶದಲ್ಲಿ ಈವರೆಗೆ 196 ಕೋಟಿ ಡೋಸು ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ.
ಮಾತನಾಡುವವನಿಗಿಂತ ಮೌನಿಗೆ ಕೋವಿಡ್ ಸಾಧ್ಯತೆ..!
ಜೀನೋಮ್ ಸೀಕ್ವೆನ್ಸಿಂಗ್ ಹೆಚ್ಚಿಸಿ: ದೇಶದಲ್ಲಿ ಕೋವಿಡ್ 4ನೇ ಅಲೆ ಅಬ್ಬರ ಹೆಚ್ಚುತ್ತಿರುವ ನಡುವೆಯೇ ‘ಕಳೆದ 7 ದಿನಗಳ ಅವಧಿಯಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಪ್ರದೇಶಗಳಿಂದ ಹೆಚ್ಚೆಚ್ಚು ಸ್ಯಾಂಪಲ್ಗಳನ್ನು ಜೀನೋಮ್ ಸೀಕ್ವೆನ್ಸಿಂಗ್ಗೆ ಕಳುಹಿಸಬೇಕು’ ಎಂದು ಕೇಂದ್ರ ಸರ್ಕಾರವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ದೇಶದಲ್ಲಿ ಕೋವಿಡ್ ಆರ್ಭಟ ಮತ್ತೆ ಹೆಚ್ಚಾಗುತ್ತಿರುವುದಕ್ಕೆ ಕೊರೋನಾದ ಹೊಸ ರೂಪಾಂತರಿ ಅಥವಾ ಉಪತಳಿ ಕಾರಣವಾಗಿರಬಹುದು ಎಂಬ ಸಾಧ್ಯತೆಯನ್ನು ಪರಿಶೀಲಿಸುವ ಹಿನ್ನೆಲೆಯಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ನಡೆಸುವ ಇನ್ಸಾಕೋಗ್ ಶುಕ್ರವಾರ ಸೂಚನೆ ನೀಡಿದೆ.
Covid Crisis: ಬೆಂಗಳೂರಿನಲ್ಲಿ 12 ದಿನದಲ್ಲಿ ಇಬ್ಬರು ಕೊರೋನಾ ಸೋಂಕಿನಿಂದ ಸಾವು
ಈವರೆಗೆ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಕೇರಳ, ದೆಹಲಿ, ತಮಿಳುನಾಡು, ಹರಾರಯಣ, ಉತ್ತರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ ಹಾಗೂ ಗುಜರಾತಿನಲ್ಲಿ 1000ಕ್ಕೂ ಹೆಚ್ಚು ಕೇಸುಗಳು ಪತ್ತೆಯಾಗಿವೆ. ಭಾರತದಲ್ಲಿ ತೀವ್ರ ಸೋಂಕು ಹರಡುವಿಕೆಗೆ ಕಾರಣವಾಗುವ ಒಮಿಕ್ರೋನ್ ಉಪತಳಿಗಳಾದ ಬಿಎ.2, ಬಿಎ.4 ಹಾಗೂ ಬಿಎ.5 ವೈರಸ್ ಈಗಾಗಲೇ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ದೇಶದಲ್ಲಿರುವ ಒಮಿಕ್ರೋನ್ನ ಉಪತಳಿಗಳಿಗಳು ಹಾಗೂ ಅದರಿಂದಾಗಿ ಸೋಂಕಿನ ಹರಡುವಿಕೆಯ ತೀವ್ರತೆ ಪ್ರಮಾಣ ಹಾಗೂ ಹೊಸ ಉಪತಳಿಗಳ ಉಗಮದ ಸಾಧ್ಯತೆಯ ಬಗ್ಗೆ ನಿಗಾ ಇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳಿಗೆ ಹೆಚ್ಚೆಚ್ಚು ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್ಗೆ ಕಳುಹಿಸಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ