
ನವದೆಹಲಿ(ಅ.06): ಜಮ್ಮು ಮತ್ತು ಕಾಶ್ಮೀರ ಅತ್ಯಂತ ಸುಂದರ ರಾಜ್ಯ. ಭೂಮಿ ಮೇಲಿನ ಸ್ವರ್ಗ ಅನ್ನೋ ಮಾತುಗಳು ಇವೆ. ಕಣಿವೆ ರಾಜ್ಯದ ಪ್ರತಿ ಪ್ರದೇಶಗಳು ನಯನ ಮನೋಹರ. ಆದರೆ ಜಮ್ಮು ಮತ್ತು ಕಾಶ್ಮೀರ ಪ್ರವಾಸ ಅಂದರೆ ಎರಡೆರಡು ಭಾರಿ ಯೋಚನೆ ಮಾಡಬೇಕಿತ್ತು. ಕಾರಣ ಭಯೋತ್ಪಾದನೆ, ಉಗ್ರರ ದಾಳಿ, ಬಾಂಬ್ ಸ್ಫೋಟಗಳಿಂದ ಅತೀ ಸುಂದರ ರಾಜ್ಯದ ನರಕದ ಬೀಡಾಗಿತ್ತು. ಈ ಚಿತ್ರಣ ಇದೀಗ ಬದಲಾಗುತ್ತಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370 ರದ್ದು ಮಾಡಿ ಕೇಂದ್ರಾಡಳಿತ ಪ್ರದೇಶವಾಗಿ ಮಾಡಿದೆ. ಬಳಿಕ ಕಣಿವೆ ರಾಜ್ಯದ ಚಿತ್ರಣ ಬದಲಾಗಿದೆ. ಇದಕ್ಕೆ ಪೂರಕವಾದ ದಾಖಲೆ ಬಿಡುಗಡೆಯಾಗಿದೆ. 2022ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ 1.62 ಕೋಟಿ. ಇದು ಸ್ವಾತಂತ್ರ್ಯ ನಂತರ ದಾಖಲಾದ ಅತ್ಯಧಿಕ ಸಂಖ್ಯೆಯಾಗಿದೆ. ಕಳೆದ 75 ವರ್ಷಗಳಲ್ಲಿ ಈ ಮಟ್ಟಿಗೆ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕಗಳ ನಿರ್ದೇಶನಾಲಯ ಹೇಳಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರ ಭೇಟಿ ಮರುದಿನವೇ ಕಾಶ್ಮೀರ ಸರ್ಕಾರ ಈ ಅಂಕಿ ಅಂಶ ಬಿಡುಗಡೆ ಮಾಡಿದೆ. ಕಾಶ್ಮೀರ ಪ್ರವಾಸದಲ್ಲಿ ಅಮಿತ್ ಶಾ ಮಹತ್ವದ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಉಗ್ರರ ಬೀಡಾಗಿತ್ತು. ಇದೀಗ ಪ್ರವಾಸಿಗರ ಸ್ವರ್ಗವಾಗಿದೆ ಎಂದಿದ್ದರು. ಇದರ ಬೆನ್ನಲ್ಲೇ ಇದೀಗ ಕಾಶ್ಮೀರ ಪ್ರವಾಸೋದ್ಯಮದ ಮಾಹಿತಿ ಬಹಿರಂಗವಾಗಿದೆ.
ಉಗ್ರರ ಬೇಟೆ ನಿಲ್ಲಲ್ಲ, ಪಾಕ್ ಜೊತೆ ಮಾತಿಲ್ಲ: ಅಮಿತ್ ಶಾ
ಜಮ್ಮು ಮತ್ತು ಕಾಶ್ಮೀರ ಸೌಂದರ್ಯ ವೀಕ್ಷಿಸಲು, ಸವಿಯಲು 1.62 ಕೋಟಿ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕಣಿವೆ ರಾಜ್ಯದಲ್ಲಿ ಸ್ಥಳೀಯರು ಬದುಕುವುದೇ ಕಷ್ಟದ ಪರಿಸ್ಥಿತಿ ನಿರ್ಮಾವಾಗಿತ್ತು. ಆದರೆ ಇದೀಗ ಚಿತ್ರಣ ಬದಲಾಗಿದೆ ಅನ್ನೋದಕ್ಕೆ ಇದೇ ಸಾಕ್ಷಿಯಾಗಿದೆ. ಹೊರ ರಾಜ್ಯ, ವಿದೇಶಗಳಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಸುಳ್ಳು ಹೇಳಿ ಸಿಕ್ಕಿ ಬಿದ್ದ ಮೆಹಬೂಬಾ ಮುಫ್ತಿ, ಗೃಹಬಂಧನ ಠುಸ್ ಪಟಾಕಿ ಎಂದ ಪೊಲೀಸ್!
ಇದೇ ವೇಳೆ ರಾಜ್ಯದಲ್ಲಿ ಭಯೋತ್ಪಾದನೆ ನಿಧಾನವಾಗಿ ಮತ್ತು ಹಂತಹಂತವಾಗಿ ಅಂತ್ಯದತ್ತ ಸಾಗುತ್ತಿದೆ. ಇದಕ್ಕೆಲ್ಲಾ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಾಜ್ಯದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳೇ ಕಾರಣ. ಮುಫ್ತಿ ಆ್ಯಂಡ್ ಕಂಪನಿ ಮತ್ತು ಅಬ್ದುಲ್ಲಾ ಆ್ಯಂಡ್ ಸನ್ಸ್ 70 ವರ್ಷದ ರಾಜ್ಯ ಆಳಿದ ಅವಧಿಯಲ್ಲಿ 1 ಲಕ್ಷ ಜನರು ವಸತಿ ಇಲ್ಲದೆ ಚಳಿಯಲ್ಲಿ ಕಂಗೆಡುತ್ತಿದ್ದರು. ಆದರೆ 2014-2022 ಅವಧಿಯಲ್ಲಿ ಮೋದಿ ಸರ್ಕಾರ ರಾಜ್ಯದ ಜನರಿಗೆ 1 ಲಕ್ಷ ಮನೆಗಳನ್ನು ಒದಗಿಸಿದೆ, 12 ಲಕ್ಷ ಕುಟುಂಬಗಳಿಗೆ ಅಡುಗೆ ಅನಿಲ ಸಿಲಿಂಡರ್ ನೀಡಲಾಗಿದೆ. ರಾಜ್ಯಕ್ಕೆ ಮೋದಿ 56000 ಕೋಟಿ ರು. ಬಂಡವಾಳ ಹೂಡಿಕೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ, ಇದರಿಂದ 5 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಮಿತ್ ಶಾ ಕಾಶ್ಮೀರದಲ್ಲಿನ ರ್ಯಾಲಿಯಲ್ಲಿ ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ