ಭ್ರಷ್ಟಾಚಾರ, ಕುಟುಂಬ ರಾಜಕಾರಣ ಭಾರತದ 2 ದೊಡ್ಡ ಸವಾಲುಗಳು: ಪ್ರಧಾನಿ ಮೋದಿ

By BK AshwinFirst Published Aug 15, 2022, 11:39 AM IST
Highlights

ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನ ದಿಲ್ಲಿಯ ಕೆಂಪುಕೋಟೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣದ ವಿರುದ್ಧವೂ ವಾಗ್ದಾಳಿ ಮಾಡಿದ್ದಾರೆ. ಪರೋಕ್ಷವಾಗಿ ಅವರು ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದ್ದು, ವಿವರ ಇಲ್ಲಿದೆ..

ರಾಷ್ಟ್ರ ರಾಜಧಾನಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಒಂದು ಗಂಟೆಗಳಿಗೂ ಹೆಚ್ಚು ಕಾಲ ಸುದೀರ್ಘ ಭಾಷಣ ಮಾಡಿದರು. ದೇಶದ ಸವಾಲುಗಳು, ಸಾಧನೆಗಳು, ಸ್ವತಂತ್ರ ಹೋರಾಟಗಾರರು ಮುಂತಾದ ವಿಚಾರಗಳ ಬಗ್ಗೆ ಮಾತನಾಡಿದರು. ಈ ವೇಳೆ ಭ್ರಷ್ಟಾಚಾರ, ಕುಟುಂಬ ರಾಜಕಾರಣ ಸಹ ಭಾರತದ ದೊಡ್ಡ ಸವಾಲುಗಳು ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ. 

ಸ್ವಾತಂತ್ರ್ಯ ದಿನದ ಭಾಷಣದಂದು ಪ್ರಧಾನಿ ಮೋದಿ ಭ್ರಷ್ಟಾಚಾರ ಹಾಗೂ ವಂಶಾಡಳಿತ ಅಥವಾ ಕುಟುಂಬ ರಾಜಕಾರಣದ ವಿರುದ್ಧ ಕಿಡಿ ಕಾರಿದ್ದಾರೆ. ಇವು ಭಾರತ ಎದುರಿಸುತ್ತಿರುವ ಅವಳಿ ದುಷ್ಪರಿಣಾಮಗಳು ಮತ್ತು ಅದನ್ನು ಜಯಿಸಲು ಹೋರಾಡಬೇಕು ಎಂದು ಇಂದು ಹೇಳಿದರು. 76ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪುಕೋಟೆಯ ಆವರಣದಿಂದ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಸ್ವಜನ ಪಕ್ಷಪಾತವು ದೇಶದ ಸಂಸ್ಥೆಗಳನ್ನು ಪೊಳ್ಳು ಮಾಡುತ್ತಿದೆ ಮತ್ತು ಹಲವು ಪ್ರಕರಣಗಳಲ್ಲಿ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದರು.

ಇದನ್ನು ಓದಿ: ಪಂಚ ಪ್ರಾಣಗಳ ಈಡೇರಿಕೆಗೆ ಸಂಕಲ್ಪ ತೊಡೋಣ: ಪ್ರಧಾನಿ ಮೋದಿ

"ಭ್ರಷ್ಟಾಚಾರವು ಗೆದ್ದಲಿನ ಹಾಗೆ ದೇಶವನ್ನು ಹಾಳುಮಾಡುತ್ತಿದೆ. ದೇಶವು ಅದರ ವಿರುದ್ಧ ಹೋರಾಡಬೇಕು. ನಾವು ಭ್ರಷ್ಟಾಚಾರವನ್ನು ಕಿತ್ತುಹಾಕಬೇಕು" ಎಂದು ಮುಷ್ಟಿಯನ್ನು ಅಲುಗಾಡಿಸುತ್ತಾ ಮೋದಿ ಹೇಳಿದ್ದು ವಿಶೇಷವಾಗಿತ್ತು. ಅಲ್ಲದೆ, ಭಾರತವು ಭ್ರಷ್ಟರ ವಿರುದ್ಧ ಹಾಗೂ ಭ್ರಷ್ಟಾಚಾರದ ವಿರುದ್ಧ ಎಚ್ಚರದಿಂದಿರಬೇಕು ಎಂದೂ ಹೇಳಿದರು.
"ಭ್ರಷ್ಟಾಚಾರದ ದುಷ್ಪರಿಣಾಮವನ್ನು ಪ್ರಚಾರ ಮಾಡುವವರನ್ನು ಶಿಕ್ಷಿಸಲು ನಾವು ಸಮಾಜವಾಗಿ ಒಗ್ಗೂಡಬೇಕಾಗಿದೆ. ನಾವು ದೇಶದಿಂದ ಓಡಿಹೋದ ಜನರ ಆಸ್ತಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ನನಗೆ ಸಹಾಯ ಮಾಡಲು ನಾನು ನಿಮ್ಮೆಲ್ಲರನ್ನು ವಿನಂತಿಸುತ್ತೇನೆ" ಎಂದೂ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಹೇಳಿದರು.

ಚುನಾವಣಾ ಸಮಯದಲ್ಲಿ ಬಿಜೆಪಿಯ ರಣಘೋಷವಾದ "ಭಾಯಿ-ಭಟಿಜಾಬಾದ್, ಪರಿವಾರವಾದ" ಅನ್ನು ಪ್ರತಿಧ್ವನಿಸಿದ ಮೋದಿ  "ಭಾಯಿ-ಭಟಿಜವಾದ್, ಪರಿವಾರವಾದ್ (ವಂಶಾಡಳಿತ ಮತ್ತು ಕುಟುಂಬದ ಮೇಲೆ ಕೇಂದ್ರೀಕರಿಸುವುದು) ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ" ಎಂದು ಹೇಳಿದರು. "ಪರಿವಾರವಾದದ ನೆರಳು ಹಲವಾರು ಸಂಸ್ಥೆಗಳ ಮೇಲಿದೆ. ಕುಟುಂಬ ಆಡಳಿತದಿಂದ ಬಾಧಿತವಾಗಿರುವ ನಮ್ಮ ಹಲವಾರು ಸಂಸ್ಥೆಗಳು ನಮ್ಮ ಪ್ರತಿಭೆ, ರಾಷ್ಟ್ರದ ಸಾಮರ್ಥ್ಯಗಳಿಗೆ ಹಾನಿ ಮಾಡುತ್ತದೆ ಮತ್ತು ಭ್ರಷ್ಟಾಚಾರವನ್ನು ಹುಟ್ಟುಹಾಕುತ್ತದೆ. ಸಂಸ್ಥೆಗಳನ್ನು ಉಳಿಸಲು ನಾವು ವಂಶಾಡಳಿತದ ವಿರುದ್ಧ ಅಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು. ಕುಟುಂಬದ ಕಲ್ಯಾಣ ರಾಷ್ಟ್ರದ ಕಲ್ಯಾಣದೊಂದಿಗೆ ಯಾವುದೇ ಸಂಬಂಧವಿಲ್ಲ, ಪರಿವಾರದ ಸಂಕೋಲೆಯಿಂದ ಭಾರತದ ರಾಜಕೀಯ ಮತ್ತು ಸಂಸ್ಥೆಗಳನ್ನು ಶುದ್ಧೀಕರಿಸೋಣ" ಎಂದು ಅವರು ಹೇಳಿದರು.

ಅಲ್ಲದೆ, ಸಂಸ್ಥೆಗಳಲ್ಲಿ, ಕ್ರೀಡೆಗಳಲ್ಲಿ ಸಹ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರ ನಿರುತ್ಸಾಹಗೊಳಿಸಬೇಕಾಗಿದೆ. ಇದರ ವಿರುದ್ಧ ಕ್ರಾಂತಿಯನ್ನು ಆರಂಭಿಸಬೇಕಾಗಿದೆ. ಇದು ನಮ್ಮ ಸಾಮಾಜಿಕ ಜವಾಬ್ದಾರಿಯಾಗಿದೆ. ನಮಗೆ ಪಾರದರ್ಶಕತೆ ಬೇಕು ಎಂದೂ ಧ್ವಜಾರೋಹಣದ ಬಳಿಕ ಪ್ರಧಾನಿ ಮೋದಿ ಭಾಷಣದ ವೇಳೆ ಹೇಳಿದರು.
ವಂಶಾಡಳಿತ ಅಥವಾ ಕುಟುಂಬ ರಾಜಕಾರಣವು ಕಾಂಗ್ರೆಸ್ ವಿರುದ್ಧ ಬಿಜೆಪಿಯ ದೊಡ್ಡ ಆರೋಪಗಳಲ್ಲಿ ಒಂದಾಗಿದೆ. ಪ್ರಧಾನಿ ಮೋದಿ ಇಂದು ಸ್ವಾತಂತ್ರ್ಸೋತ್ಸವ ಭಾ‍ಷಣದಲ್ಲೂ ಇದನ್ನು ಹೇಳಿದ್ದಾರೆ. ಇನ್ನು, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಮಾಯಾವತಿಯೊಂದಿಗೆ ಮೈತ್ರಿ ಮಾಡಿಕೊಂಡಾಗ ಅದರ ವಿರುದ್ಧ "ಭಾಯ್-ಭಟಿಜವಾದ್" ಮತ್ತು "ಬುವಾ-ಭಟಿಜಾ" ನಂತಹ ಪದಗಳನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಈ ಪದವನ್ನು ಇಂದು ಮೋದಿ ಬಳಸಿದ್ದಾರೆ.

ಇದನ್ನೂ ಓದಿ: Happy Independence Day: ನಿಮ್ಮ ಪ್ರೀತಿಪಾತ್ರರಿಗೆ ಹಂಚಿಕೊಳ್ಳಲು ಶುಭಾಶಯಗಳು ಇಲ್ಲಿದೆ..

ಈ ವರ್ಷದ ಆರಂಭದಲ್ಲಿ ನಡೆದ ಹಲವು ರಾಜ್ಯ ಚುನಾವಣೆಗಳ ನಂತರವೂ ಈ ಬಗ್ಗೆ ಹೇಳಿದ್ದ ಮೋದಿ, ಬಿಜೆಪಿ ಸಂಸದರ ಮಕ್ಕಳನ್ನು ಕಣಕ್ಕಿಳಿಸದಿರುವುದು ತನ್ನ ನಿರ್ಧಾರ ಎಂದಿದ್ದರು. "ಹಲವು ಸಂಸದರು ಮತ್ತು ಪಕ್ಷದ ಮುಖಂಡರು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ತಮ್ಮ ಮಕ್ಕಳಿಗೆ ಟಿಕೆಟ್ ಬಯಸಿದ್ದರು ಮತ್ತು ಅವರಲ್ಲಿ ಹಲವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಬಿಜೆಪಿ ಸಂಸದರ ಮಕ್ಕಳಿಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕಿಲ್ಲ, ಏಕೆಂದರೆ ಅದು ವಂಶಪಾರಂಪರ್ಯ ರಾಜಕಾರಣವಾಗುತ್ತದೆ. ನನ್ನಿಂದಾಗಿ ಅವರಿಗೆ ಟಿಕೆಟ್ ಸಿಕ್ಕಿಲ್ಲ ಎಂದು ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಗೋವಾದ ವಿಧಾನಸಭೆ ಚುನಾವಣೆಗಳಲ್ಲಿ ಕೇಸರಿ ಪಕ್ಷದ ಗೆಲುವಿನ ನಂತರ ಪ್ರಧಾನಿ ಮೋದಿ ಇದನ್ನು ಹೇಳಿದ್ದರು.

click me!