‘ಮನೆ ಮನೆಯಲ್ಲಿ ರಾಷ್ಟ್ರಧ್ವಜ’ ಯಶಸ್ಸಿಗೆ ಸಿಎಂ ಬೊಮ್ಮಾಯಿ ಸೂಚನೆ

By Govindaraj SFirst Published Aug 9, 2022, 4:15 AM IST
Highlights

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಮನೆ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ ಹರ್‌ ಘರ್‌ ತಿರಂಗ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರು (ಆ.09): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಮನೆ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ ಹರ್‌ ಘರ್‌ ತಿರಂಗ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸೋಮವಾರ ತಮ್ಮ ನಿವಾಸದಿಂದಲೇ ಎಲ್ಲ ಜಿಲ್ಲೆಗಳ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದ ಅವರು ಅಭಿಯಾನದ ಸಿದ್ಧತೆಯನ್ನು ಪರಿಶೀಲಿಸಿದರು.

ರಾಜ್ಯದಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ ಧ್ವಜ ವಿತರಣೆ ಕಾರ್ಯ ನಡೆಯುತ್ತಿದೆ. ಆಗಸ್ವ್‌ 13ರಂದೇ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ವಾತಾವರಣ ನಿರ್ಮಾಣವಾಗಬೇಕು. ಈ ಕಾರ್ಯಕ್ರಮವನ್ನು ಕೇವಲ ಕಾಟಾಚಾರಕ್ಕೆ ಮಾಡದೆ, ದೇಶದ ಮೇಲಿನ ಅಭಿಮಾನ ಪ್ರೀತಿಯಿಂದ ಆಯೋಜಿಸಬೇಕು. ಇದನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬ ತುಡಿತದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ನೆರೆ ಸಂತ್ರಸ್ತರ ನೆರವಿಗೆ ಸಮರೋಪಾದಿ ವ್ಯವಸ್ಥೆ: ಡಿಸಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸರ್ಕಾರಿ ಕಚೇರಿಗಳಲ್ಲಿ ಈ ಮೂರು ದಿನಗಳಂದು ಪ್ರತಿ ದಿನ ಬೆಳಿಗ್ಗೆ ಧ್ವಜಾರೋಹಣ ಮಾಡಿ, ಸಂಜೆ ಇಳಿಸಬೇಕು. ಮನೆಗಳಲ್ಲಿ ಆಗಸ್ಟ್‌ 13ರಂದು ಧ್ವಜಾರೋಹಣ ಮಾಡಿದರೆ, 15ರವರೆಗೆ ಇರಿಸಬಹುದಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಇದರೊಂದಿಗೆ ಕ್ವಿಟ್‌ ಇಂಡಿಯಾ ಚಳವಳಿಯ ಸ್ಮರಣಾರ್ಥ, ಆಯಾ ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟಗಾರರನ್ನು ಆಗಸ್ವ್‌ 9ರಿಂದ 14ರ ನಡುವೆ, ಅವರ ಮನೆಗೆ ತೆರಳಿ ಸನ್ಮಾನಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರೂ ಇದರಲ್ಲಿ ಭಾಗಿಯಾಗುವಂತೆ ಸೂಚಿಸಿದರು.

ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಉಚಿತ ಧ್ವಜ ವಿತರಣೆ: ತಂತ್ರ್ಯೋತ್ಸವ ಅಮೃತ ಮಹೋತ್ಸವದ ನಿಮಿತ್ಯ, ದೇಶದಾದ್ಯಂತ ಪ್ರತಿ ಮನೆಮನೆಗಳಲ್ಲೂ ಮೂರು ದಿನಗಳು ರಾಷ್ಟ್ರಧ್ವಜ ಹಾರಿಸುವ ಮೂಲಕ ರಾಷ್ಟ್ರಪ್ರೇಮ ಮೆರೆಯಬೇಕೆಂಬ ಪ್ರಧಾನಿ ಮೋದಿ ಕರೆಗೆ ಓಗೊಟ್ಟು, ದೇಶದಾದ್ಯಂತ ನಡೆಯುತ್ತಿರುವ ‘ಹರ್‌ ಘರ್‌ ತಿರಂಗ’ ಅಭಿಯಾನಕ್ಕೆ, ಪಟ್ಟಣದ 14ನೇ ವಾರ್ಡಿನ ಚುನಾಯಿತ ಸದಸ್ಯರೂ, ನ್ಯಾಯವಾದಿಯೂ ಆದ ಸಂಜಯ ಐಹೊಳ್ಳಿಯವರು, ಅಂಚೆ ಇಲಾಖೆಯಿಂದ ತಲಾ .25 ನಂತೆ ತಮ್ಮ ಸ್ವಂತ ಹಣದಿಂದ ಧ್ವಜ ತಂದು, ತಮ್ಮ ವಾರ್ಡಿನ 220 ಮನೆಗಳಿಗೂ ಉಚಿತವಾಗಿ ವಿತರಿಸಿದರು.

ಏರ್‌ಪೋರ್ಟ್‌ನಲ್ಲೇ ಮಂಕಿಪಾಕ್ಸ್‌ ಸೋಂಕಿತರ ಪತ್ತೆಗೆ ಸಿಎಂ ಕಟ್ಟಪ್ಪಣೆ

ಈ ಕುರಿತು ಮಾತನಾಡಿದ ಪಪಂ. ಸದಸ್ಯ ಸಂಜಯ ಐಹೊಳ್ಳಿ, ಪ್ರತಿಯೊಬ್ಬರಲ್ಲೂ ರಾಷ್ಟ್ರೀಯ ಜಾಗೃತ ಮೂಡಬೇಕು, ಹರ್‌ಘರ್‌ ತಿರಂಗಾ ಅಭಿಯಾನದಡಿ ನಮ್ಮ ವಾರ್ಡಿನ 220 ಮನೆಗಳ ಮೇಲೂ ರಾಷ್ಟ್ರಧ್ವಜ ಹಾರಬೇಕು ಎಂಬ ಉದ್ದೇಶದಿಂದ, ಪ್ರತಿ ಮನೆಗಳಿಗೂ ಉಚಿತವಾಗಿ ಧ್ವಜ ವಿತರಿಸಿದ್ದೇನೆ ಎಂದರು. ಪಟ್ಟಣದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಿ.ಎಸ್‌. ಬಾಸೂರ, ಪ್ರತಿಯೊಬ್ಬರಲ್ಲೂ ರಾಷ್ಟ್ರೀಯತೆ ಜಾಗೃತಗೊಳ್ಳಬೇಕು ಎಂಬ ಚಿಂತನೆಯಿಂದ, ನಮ್ಮ ವಾರ್ಡಿನ ಪಪಂ. ಸದಸ್ಯ ಸಂಜಯ ಐಹೊಳ್ಳಿಯವರು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು. ನಿವೃತ್ತ ಶಿಕ್ಷಕರಾದ ಬಿ.ಬಿ. ಸಜ್ಜನ, ಬಿ.ಬಿ. ಬಾಲನಾಯಕ ಸರ್‌ ಪಿ.ಎಚ್‌. ಪೂಜಾರ್‌, ಎಚ್‌.ಬಿ. ಬಲಕುಂದಿ ಮುಂತಾದವರಿದ್ದರು.

click me!