ಈ ವರ್ಷವೂ ಕೊಡವ ಹಾಕಿ ಉತ್ಸವಕ್ಕೆ ಕೊರೋನಾ ಬ್ರೇಕ್..!

By Kannadaprabha NewsFirst Published Apr 20, 2022, 8:13 AM IST
Highlights

* ‘ಕೊಡವ ಕೌಟುಂಬಿಕ ಹಾಕಿ’ ಉತ್ಸವಕ್ಕೆ ಈ ಬಾರಿಯೂ ಬ್ರೇಕ್‌

* ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಸುಮಾರು ಒಂದು ತಿಂಗಳ ಕಾಲ ನಡೆಯುತ್ತಿದ್ದ ಕ್ರೀಡಾಕೂಟ

* ಕೊರೋನಾ ಸೋಂಕಿನ ಕಾರಣ ಕಳೆದ ವರ್ಷವೂ ಹಾಕಿ ಉತ್ಸವ ನಡೆಸಲು ಸಾಧ್ಯವಾಗಿರಲಿಲ್ಲ

- ವಿಘ್ನೇಶ್ ಎಂ. ಭೂತನಕಾಡು, ಕನ್ನಡಪ್ರಭ

ಮಡಿಕೇರಿ(ಏ.20) ಮಹಾಮಾರಿ ಕೊರೋನಾದಿಂದಾಗಿ (Coronavirus) ಕೊಡವ ನಾಡಿನ ಪ್ರಮುಖ ಕ್ರೀಡಾ ಉತ್ಸವವಾದ ‘ಕೊಡವ ಕೌಟುಂಬಿಕ ಹಾಕಿ’ ಉತ್ಸವ (Kodava hockey festival) ಈ ಬಾರಿಯೂ ನಡೆಯುತ್ತಿಲ್ಲ. ಇದರಿಂದ ಹಾಕಿ ಆಟಗಾರರು ಹಾಗೂ ಕ್ರೀಡಾಭಿಮಾನಿಗಳಲ್ಲಿ ತೀವ್ರ ನಿರಾಶೆ ಉಂಟಾಗಿದೆ. ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಸುಮಾರು ಒಂದು ತಿಂಗಳ ಕಾಲ ಕುಟುಂಬವೊಂದರ ಸಾರಥ್ಯದಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವ ಕೊಡಗು ಜಿಲ್ಲೆಯಲ್ಲಿ (Kodagu District) ನಡೆಯುತ್ತಿತ್ತು.

2018ರಲ್ಲಿ ನಾಪೋಕ್ಲುವಿನಲ್ಲಿ 22ನೇ ವರ್ಷದ ಕೌಟುಂಬಿಕ ಹಾಕಿ ಉತ್ಸವ ಕುಲ್ಲೇಟಿರ ಕಪ್‌ ನಡೆದಿತ್ತು. 2018ರಲ್ಲಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹದ ಕಾರಣ 2019ರಲ್ಲಿ ಬಾಳುಗೋಡುವಿನಲ್ಲಿ ನಡೆಯಬೇಕಿದ್ದ ಮುಕ್ಕಾಟಿರ(ಹರಿಹರ) ಕಪ್‌ ಅನ್ನು ಒಂದು ವರ್ಷ ಮುಂದೂಡುವ ನಿರ್ಧಾರ ಮಾಡಲಾಯಿತು. ಆದರೆ, ಮತ್ತೆ ಮಳೆಯಿಂದ ಭಾರೀ ಅನಾಹುತವಾದ ಕಾರಣ 2020ರಲ್ಲೂ ಹಾಕಿ ಪಂದ್ಯಾವಳಿ ಸ್ಥಗಿತಗೊಂಡಿತ್ತು.

ಇನ್ನು ಕೊರೋನಾ ಸೋಂಕಿನ ಕಾರಣ ಕಳೆದ ವರ್ಷವೂ ಹಾಕಿ ಉತ್ಸವ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಈ ವರ್ಷವೂ ಕೊರೋನಾದಿಂದ ಪಂದ್ಯಾವಳಿ ನಡೆಸದಿರಲು ತೀರ್ಮಾನಿಸಲಾಗಿದೆ. ಆದರೆ, ಮುಂದಿನ ವರ್ಷ(2023) ಉತ್ಸವ ಮಾಡಲು ನಿರ್ಧರಿಸಲಾಗಿದ್ದು, ಅಪ್ಪಚ್ಚಟ್ಟೋಳಂಡ ಕುಟುಂಬ 23ನೇ ವರ್ಷದ ಹಾಕಿ ಉತ್ಸವವನ್ನು ನಡೆಸುವ ಜವಾಬ್ದಾರಿ ವಹಿಸಿಕೊಂಡಿದೆ. ಕೂಟದಲ್ಲಿ ಸುಮಾರು 300 ತಂಡಗಳು, 5 ಸಾವಿರ ಆಟಗಾರರು ಈ ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದರು. ದೇಶ, ವಿದೇಶದಲ್ಲಿ ನೆಲೆಸಿದ್ದವರು ಜಿಲ್ಲೆಗೆ ಬಂದು ಆಟವಾಡುತ್ತಿದ್ದರು. ಹೊಸ ಪ್ರತಿಭೆಗಳಿಗೆ ಅವಕಾಶ ಲಭಿಸುತ್ತಿತ್ತು.

ಕುಸ್ತಿ: ಕರ್ನಾಟಕದ ಅರ್ಜುನ್‌ಗೆ ಕಂಚು

ಉಲಾನ್‌ಬಾತರ್‌(ಮಂಗೋಲಿಯಾ): ಕರ್ನಾಟಕದ ಅರ್ಜುನ್‌ ಹಲಕುರ್ಕಿ ಸೇರಿದಂತೆ ಭಾರತದ ಮೂವರು ಕುಸ್ತಿಪಟುಗಳು ಮಂಗಳವಾರದಿಂದ ಇಲ್ಲಿ ಆರಂಭಗೊಂಡ ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನ ಗ್ರೀಕೊ ರೋಮನ್‌ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದರು. 55 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಅರ್ಜುನ್‌ ಕಂಚಿಗಾಗಿ ನಡೆದ ಪ್ಲೇ-ಆಫ್‌ನಲ್ಲಿ ಸ್ಥಳೀಯ ಪ್ರತಿಭೆ ದವಾಬಂಡಿ ಮುಂಕ್‌ ಎರ್ಡನ್‌ ವಿರುದ್ಧ 10-7ರಿಂದ ಜಯ ಸಾಧಿಸಿದರು. 

Cristiano Ronaldo son Death ದಿಗ್ಗಜ ಫುಟ್ಬಾಲಿಗ ರೊನಾಲ್ಡೋ ದಂಪತಿಗೆ ಪುತ್ರ ಶೋಕ..!

ಕ್ವಾರ್ಟರ್‌ ಫೈನಲ್‌ನಲ್ಲಿ ಅರ್ಜುನ್‌ ಕಜಕಸ್ತಾನದ ಅಮಂಗಾಲಿ ಬೆಕ್‌ಬೊಲಾತೊವ್‌ ವಿರುದ್ಧ ಸೋಲುಂಡಿದ್ದರು. ಅಮಂಗಾಲಿ ಫೈನಲ್‌ ತಲುಪಿದ ಕಾರಣ ಅರ್ಜುನ್‌ಗೆ ಪ್ಲೇ ಆಫ್‌ನಲ್ಲಿ ಆಡುವ ಅವಕಾಶ ಲಭಿಸಿತ್ತು. 2020ರ ಆವೃತ್ತಿಯಲ್ಲೂ ಅರ್ಜುನ್‌ ಕಂಚಿಗೆ ಕೊರಲೊಡ್ಡಿದ್ದರು. 87 ಕೆ.ಜಿ.ವಿಭಾಗದಲ್ಲಿ ಸುನಿಲ್‌ ಕುಮಾರ್‌, 63 ಕೆ.ಜಿ.ಬೌಟ್‌ನಲ್ಲಿ ನೀರಜ್‌ ಕಂಚು ಜಯಿಸಿದರು.

ಏಷ್ಯನ್‌ ಗೇಮ್ಸ್‌ಗೆ ಭಾರತ ಸಾಫ್ಟ್‌ಬಾಲ್‌ ತಂಡ ಎಂಟ್ರಿ

ನವದೆಹಲಿ: ಭಾರತ ಮಹಿಳಾ ಸಾಫ್ಟ್‌ಬಾಲ್‌ ತಂಡ ಇದೇ ಮೊದಲ ಬಾರಿ ಏಷ್ಯನ್‌ ಗೇಮ್ಸ್‌ನಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದುಕೊಂಡಿದೆ. ಈ ಬಗ್ಗೆ ಸೋಮವಾರ ಮಾಹಿತಿ ನೀಡಿದ ಭಾರತೀಯ ಸಾಫ್ಟ್‌ಬಾಲ್‌ ಸಂಸ್ಥೆ, ‘ಸೆ.10ರಿಂದ 25ರ ವರೆಗೆ ಚೀನಾದಲ್ಲಿ ನಡೆಯಲಿರುವ ಗೇಮ್ಸ್‌ಗೆ ಮಹಿಳಾ ಸಾಫ್ಟ್‌ಬಾಲ್‌ ತಂಡ ವೈಲ್ಡ್‌ ಕಾರ್ಡ್‌ ಮೂಲಕ ಅರ್ಹತೆ ಪಡೆದಿದೆ. ಇದು ಭಾರತದ ಸಾಫ್ಟ್‌ಬಾಲ್‌ ಕ್ರೀಡೆಯ ಹೊಸ ಮೈಲಿಗಲ್ಲು’ ಎಂದಿದೆ.

click me!