ಅಡುಗೆ ಮನೆಯಲ್ಲಿ ಎಂದೂ ಈ ವಸ್ತುಗಳು ಖಾಲಿಯಾಗದಂತೆ ನೋಡಿಕೊಳ್ಳಿ!

First Published Sep 19, 2021, 2:10 PM IST

ಮನೆಯ ಏಳಿಗೆಗೆ, ಸಂಪತ್ತಿನ ಅಧಿದೇವತೆ ಲಕ್ಷ್ಮಿ ದೇವಿಯ ಕೃಪೆ ಬಹಳ ಮುಖ್ಯ. ಅಂದರೆ ಲಕ್ಷ್ಮೀ ದೇವಿಯನ್ನು ಸಂತುಷ್ಟಗೊಳಿಸಿದರೆ ಹಣಕಾಸಿನ ತೊಂದರೆ ಯಾವತ್ತು ಎದುರಾಗುವುದೇ ಇಲ್ಲ. ಲಕ್ಷ್ಮೀಯನ್ನು ಒಲಿಸಿಕೊಳ್ಳಬೇಕಾದರೆ, ಕೆಲವು ಅಭ್ಯಾಸಗಳಿಂದ ದೂರವಿರಬೇಕು. ಇಂದು ಅಡುಗೆ ಮನೆಗೆ ಸಂಬಂಧಿಸಿದ  ಕೆಲವು ವಿಷಯಗಳ ಬಗ್ಗೆ ತಿಳಿಸಲಿದ್ದೇವೆ. ಅಡುಗೆ ಮನೆಯಲಿ ನಡೆಯುವ  ಈ ವಿಷಯಗಳು ಲಕ್ಷ್ಮೀಗೆ ಇಷ್ಟವಾಗುವುದಿಲ್ಲವಂತೆ. 

ಅಡುಗೆಮನೆಯಲ್ಲಿ ಈ ವಸ್ತುಗಳು ಖಾಲಿಯಾಗದಂತೆ ನೋಡಿಕೊಳ್ಳಿ :  ಅಕ್ಕಿ: ಪ್ರತಿ ಪೂಜೆ ಮತ್ತು ಶುಭ ಕಾರ್ಯಗಳಲ್ಲಿ ಅಕ್ಕಿ ಅಥವಾ ಅಕ್ಷತೆ ಬಳಕೆ ಕಡ್ಡಾಯವಾಗಿದೆ. ಅಕ್ಕಿಯು ಮಂಗಳಕರ ಸಂಕೇತವಾಗಿದೆ. ಅಕ್ಕಿಯನ್ನು ಅಡುಗೆಮನೆಯಲ್ಲಿ ಇಡಬೇಕಾಗುತ್ತದೆ. ಅಕ್ಕಿಯು ಖಾಲಿಯಾಗುವ ಮುನ್ನವೇ ತಂದಿಟ್ಟುಕೊಳ್ಳಿ. ಇಲ್ಲವಾದರೆ ಕೆಟ್ಟದಾಗುತ್ತದೆ. 

ಹೌದು ಮನೆಯಲ್ಲಿ ಅಕ್ಕಿ ಸಂಪೂರ್ಣವಾಗಿ ಖಾಲಿಯಾದರೆ, ಶುಕ್ರ ಕೆಟ್ಟ ಪರಿಣಾಮಗಳನ್ನು ನೀಡಲು ಪ್ರಾರಂಭಿಸುತ್ತಾನೆಯಂತೆ. ಇದರಿಂದ ಹಣದ ಕೊರತೆ ಎದುರಾಗಬಹುದು. ಆರ್ಥಿಕ ಸಮಸ್ಯೆ ಉಂಟಾಗಬಾರದು ಎಂದಾದರೆ ಮನೆಯಲ್ಲಿ ಅಕ್ಕಿಯನ್ನು ಯಾವತ್ತೂ ಖಾಲಿ ಮಾಡಬೇಡಿ.

ಅರಿಶಿನ: ಅಕ್ಕಿಯಂತೆ ಅರಿಶಿನವನ್ನು ಕೂಡಾ ಪೂಜೆ ಮತ್ತು ಶುಭ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಅಡುಗೆಮನೆಯಲ್ಲಿ ಅರಿಶಿನ ಮುಗಿದರೆ ಗುರು ಗ್ರಹವು ಕೆಟ್ಟ ಪರಿಣಾಮವನ್ನು ನೀಡಲು ಪ್ರಾರಂಭಿಸುತ್ತದೆ. ಇದು ಮನೆಯ ಸಂತೋಷವನ್ನು ತಡೆಯುತ್ತದೆ. ಹಾಗಾಗಿ ಅಡುಗೆಮನೆಯಲ್ಲಿ ಎಂದಿಗೂ ಅರಿಶಿನ ಖಾಲಿಯಾಗಲು ಬಿಡಬೇಡಿ. 

ಉಪ್ಪು: ಉಪ್ಪಿಲ್ಲದೆ ಆಹಾರ ಹೇಗೆ ಅಪೂರ್ಣವಾಗಿದೆಯೋ, ಅಡಿಗೆ ಕೂಡ ಅಪೂರ್ಣವೇ. ಅಡುಗೆಮನೆಯಲ್ಲಿ ಉಪ್ಪು ಖಾಲಿಯಾದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿ  ತುಂಬುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ಬಡತನ ಬರುತ್ತದೆ. ಜಗಳಗಳು ನಡೆಯುತ್ತವೆ, ಹಾಗಾಗಿ ಅಡುಗೆಮನೆಯಲ್ಲಿ ಯಾವತ್ತು ಉಪ್ಪು ಖಾಲಿಯಾಗದಂತೆ ನೋಡಿಕೊಳ್ಳಿ.  
 

ನೀರು: ನೀರಿನಿಂದ ತುಂಬಿದ ಪಾತ್ರೆಗಳು ಬಹಳ ಮಂಗಳಕರ.  ನೀರು ಲಭ್ಯವಿಲ್ಲದಾಗ ಯಾವುದೇ ಸಮಸ್ಯೆ ಉಂಟಾಗದಂತೆ ಯಾವಾಗಲೂ ಅಗತ್ಯಕ್ಕಿಂತ ಸ್ವಲ್ಪ ಹೆಚ್ಚು ನೀರನ್ನೇ ಸಂಗ್ರಹಿಸಿ. ನೀರು ತುಂಬುವ ಪಾತ್ರೆಗಳನ್ನು ಖಾಲಿ ಇಡುವುದು ಒಳ್ಳೆಯದಲ್ಲ. ಇದು ಆರ್ಥಿಕ ಸಂಕಷ್ಟ ಮತ್ತು ಅಪಪ್ರಚಾರಕ್ಕೂ ಕಾರಣವಾಗುತ್ತದೆ.
 

click me!