ಭಾನುವಾರದ ಮಳೆಗೆ ನಲುಗಿದ ಕರುನಾಡು: ಸಿಡಿಲಿಗೆ ಇಬ್ಬರು ರೈತರು, ಮೂರು ಹಸು ಬಲಿ; ಜಿಲ್ಲಾವಾರು ಹಾನಿ ವಿವರ ನೋಡಿ!

Published : May 17, 2026, 09:03 PM IST

ಭಾನುವಾರ ರಾಜ್ಯದ ಹಲವೆಡೆ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಿಡಿಲು ಬಡಿದು ಇಬ್ಬರು ರೈತರು ಹಾಗೂ ಮೂರು ಜಾನುವಾರುಗಳು ಸಾವನ್ನಪ್ಪಿದ್ದು, ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಮತ್ತಷ್ಟು ಹಾನಿ ವಿವರ ಇಲ್ಲಿದೆ ನೋಡಿ.

PREV
18
ಆಪತ್ತು ತಂದ ಭಾನುವಾರದ ಮಳೆ

ಬೆಂಗಳೂರು/ಶಿವಮೊಗ್ಗ/ಗದಗ/ಧಾರವಾಡ/ರಾಯಚೂರು/ಉತ್ತರ ಕನ್ನಡ: ರಾಜ್ಯದ ಹಲವೆಡೆ ಭಾನುವಾರ ಸಂಜೆ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದ ಇಬ್ಬರು ರೈತರು ಹಾಗೂ ಮೂರು ಹಸುಗಳು ಸಿಡಿಲು ಬಡಿತಕ್ಕೆ ಪ್ರಾಣ ಕಳೆದುಕೊಂಡರೆ, ಬಿರುಗಾಳಿಗೆ ಸಿಲುಕಿ ನೂರಾರು ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಸಮವಾಗಿವೆ.

28
ಧಾರವಾಡ ಮತ್ತು ರಾಯಚೂರಿನಲ್ಲಿ ಸಾವು:

ಧಾರವಾಡ ತಾಲ್ಲೂಕಿನ ಕವಲಗೇರಿ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಜಯಶ್ರೀ ಶಿರಸಂಗಿ (40) ಎಂಬ ಮಹಿಳೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ಪತಿ ಹನುಮಂತಪ್ಪ ಅವರಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಕೋಮಲಾಪುರ್ ಗ್ರಾಮದಲ್ಲಿ ಟ್ರಾಕ್ಟರ್‌ಗೆ ಗೊಬ್ಬರ ತುಂಬುತ್ತಿದ್ದ ಕರಿಯಪ್ಪ ಗೆನ್ನಾಕಿಹಾಳ್ (45) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಅವರ ಜೊತೆಯಲ್ಲಿದ್ದ ಬಸವರಾಜ್ ಎಂಬುವವರ ಸ್ಥಿತಿ ಗಂಭೀರವಾಗಿದೆ.

38
ಮಹಿಳಾ ಹೋಮ್ ಗಾರ್ಡ್ ಕೂದಲೆಳೆ ಅಂತರದಲ್ಲಿ ಬಚಾವ್!

ಗದಗ ನಗರದಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗುರುಳಿವೆ. ಗದಗ ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಕರ್ತವ್ಯ ಮುಗಿಸಿ ಬಸ್ ಏರಲು ಹೋಗುತ್ತಿದ್ದ ಮಹಿಳಾ ಹೋಮ್ ಗಾರ್ಡ್ ಒಬ್ಬರ ಬಳಿಯೇ ಬಿರುಗಾಳಿಗೆ ಹಾರಿ ಬಂದ ತಗಡಿನ ಶೀಟ್ ಬಿದ್ದಿದೆ. ಕೂದಲೆಳೆ ಅಂತರದಲ್ಲಿ ಅವರು ಬಚಾವಾಗಿದ್ದು, ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

48
ವಿದ್ಯುತ್ ಕಂಬಗಳು ಧರೆಗೆ

ಗದಗ ನಗರದ ಕೆ.ಎಚ್. ಪಾಟೀಲ ಕ್ರೀಡಾಂಗಣ ಹಾಗೂ ಗಡಿಯಾರ ಕಂಬದ ಬಳಿ ವಿದ್ಯುತ್ ಕಂಬಗಳು ಬಿದ್ದಿದ್ದು, ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

58
ವಿಜಯನಗರ: ಮಣ್ಣು ಪಾಲಾದ ಪಪ್ಪಾಯಿ ಬೆಳೆ

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕೆಂಗಲಹಟ್ಟಿ ಗ್ರಾಮದಲ್ಲಿ ಬಿರುಗಾಳಿ ಮಳೆಗೆ ರೈತ ದಂಪತಿಗಳಾದ ಸೀತಮ್ಮ ಮತ್ತು ಜಿ.ಎಸ್. ದೊಡ್ಡಪ್ಪ ಅವರಿಗೆ ಸೇರಿದ 3 ಎಕರೆ ಪಪ್ಪಾಯಿ ಬೆಳೆ ನಾಶವಾಗಿದೆ. ಸುಮಾರು 200ಕ್ಕೂ ಹೆಚ್ಚು ಗಿಡಗಳು ನೆಲಸಮವಾಗಿದ್ದು, 3 ಲಕ್ಷ ರೂಪಾಯಿ ಬಂಡವಾಳ ಹಾಕಿದ್ದ ರೈತರು ಈಗ ಕಣ್ಣೀರು ಹಾಕುತ್ತಿದ್ದಾರೆ. ಇನ್ನೇನು ಮೂರು ತಿಂಗಳಲ್ಲಿ ಬೆಳೆ ಕೈಗೆ ಸಿಗಬೇಕಿತ್ತು, ಅಷ್ಟರಲ್ಲೇ ವರುಣನ ಆರ್ಭಟಕ್ಕೆ ಬೆಳೆ ಮಣ್ಣು ಪಾಲಾಗಿದೆ.

68
ಉತ್ತರ ಕನ್ನಡ: ಮೂರು ಜಾನುವಾರುಗಳ ಸಾವು

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಮಂಗಳವಾಡದಲ್ಲಿ ಸಿಡಿಲು ಬಡಿದು ರೋಮನ್ ಬಾವಟಿಸ್ ಅವರಿಗೆ ಸೇರಿದ ಎರಡು ಎತ್ತುಗಳು ಹಾಗೂ ಒಂದು ಆಕಳು ಮೃತಪಟ್ಟಿವೆ. ಪಶುಸಂಗೋಪನೆಯನ್ನೇ ನಂಬಿ ಬದುಕುತ್ತಿದ್ದ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕೂಡಲೇ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

78
ಶಿವಮೊಗ್ಗ: ತಂಪಾದ ಮಲೆನಾಡು

ಹಲವೆಡೆ ಮಳೆ ಅನಾಹುತ ತಂದಿದ್ದರೆ, ಶಿವಮೊಗ್ಗದಲ್ಲಿ ಮಾತ್ರ ವರುಣ ಜನರಿಗೆ ಬಿಸಿಯಿಂದ ಮುಕ್ತಿ ನೀಡಿದ್ದಾನೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ವಾತಾವರಣ ತಂಪಾಗಿದ್ದು, ಹಗಲಿಡೀ ಬಿಸಿಲಿನ ಬೇಗೆಯಿಂದ ಬೆಂದಿದ್ದ ಜನರಿಗೆ ನಿರಾಳತೆ ಸಿಕ್ಕಿದೆ. ಆದರೆ, ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗಿದೆ.

88
ಮುನ್ನೆಚ್ಚರಿಕೆ:

ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ಒಳನಾಡಿನಲ್ಲಿ ಚಂಡಮಾರುತದ ಸುಳಿ ಹಾಗೂ ವಾಯುಭಾರ ಕುಸಿತದ ಪ್ರಭಾವದಿಂದಾಗಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಸಾರ್ವಜನಿಕರು ಮಿಂಚು ಮತ್ತು ಗುಡುಗಿನ ಸಮಯದಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು ಎಂದು ಹವಾಮಾನ ಇಲಾಖೆ ಸೂಚಿಸಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories