ತಮಿಳುನಾಡಲ್ಲಿ ಡಿಕೆಶಿ, ಸಿದ್ದರಾಮಯ್ಯ ಪ್ರಚಾರ

First Published Mar 28, 2021, 1:13 PM IST

ಬೆಂಗಳೂರು(ಮಾ.28): ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಶನಿವಾರ ತಮಿಳುನಾಡಿನ ವಿವಿಧ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ.

ತಮಿಳುನಾಡಿನ ಹೊಸೂರು ವಿಧಾನಸಭೆ ಕ್ಷೇತ್ರದ ಬಾಗಲೂರಿನಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಡಿಎಂಕೆ ಅಭ್ಯರ್ಥಿ ವೈ. ಪ್ರಕಾಶ್‌ ಪರ ಹಾಗೂ ಥಳಿ ವಿಧಾನಸಭೆ ಕ್ಷೇತ್ರದ ಡೆಂಕಣಕೋಟೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಸಿಪಿಐ ಅಭ್ಯರ್ಥಿ ರಾಮಚಂದ್ರನ್‌ ಪರ ಹಾಗೂ ವೇಪನಪಲ್ಲಿ ಕ್ಷೇತ್ರಗಳಲ್ಲಿ ಮತ ಯಾಚಿಸಿದ್ದಾರೆ.
undefined
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ‘ಅಚ್ಛೇ ದಿನ್‌ ಬರುತ್ತದೆ ಎಂದು ಕಾಯುತ್ತಾ ಕೂರಬೇಡಿ. ಬಿಜೆಪಿ ಅವಧಿಯಲ್ಲಿ ಅಚ್ಛೇ ದಿನ್‌ ಎಂದಿಗೂ ಬರುವುದಿಲ್ಲ. ತಮಿಳುನಾಡಿನ ಜನತೆ ಈವರೆಗೆ ಬಿಜೆಪಿ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಅವರಿಗೆ ನಮೋ ನಮಃ. ಇದೀಗ ಎಐಎಡಿಎಂಕೆ ಹೆಗಲ ಮೇಲೆ ಕುಳಿತು ಬಿಜೆಪಿ ತಮಿಳುನಾಡಿನಲ್ಲಿ ಬೇರೂರಲು ಪ್ರಯತ್ನಿಸುತ್ತಿದೆ. ದ್ರಾವಿಡ ಚಳವಳಿ ಕೋಮುವಾದಿಗಳ ವಿರುದ್ಧವಾಗಿತ್ತು. ಆದರೆ ಎಐಎಡಿಎಂಕೆ ಅದೇ ಕೋಮುವಾದಿಗಳ ಜೊತೆ ಕೈ ಜೋಡಿಸಿದೆ. ಎಐಎಡಿಎಂಕೆ ಹಾಗೂ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸಬೇಕು’ ಎಂದರು.
undefined
ಡಿ.ಕೆ. ಶಿವಕುಮಾರ್‌ ಮಾತನಾಡಿ, ‘ಬಿಜೆಪಿಗೆ ಯಾವುದೇ ಕಾರ್ಯಕ್ರಮ, ಸಿದ್ಧಾಂತ ಇಲ್ಲ. ಬಿಜೆಪಿಯ ದುರಾಡಳಿತದ ಫಲವಾಗಿ ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಧ್ಯಮ ವರ್ಗದವರು ಜೀವನ ನಡೆಸಲು ಆಗುತ್ತಿಲ್ಲ. ದರ ಏರಿಕೆಗಳಿಂದ ಜನ ಬೀದಿಗೆ ಬೀಳುವಂತಾಗಿದೆ. ಎಐಡಿಎಂಕೆ ಎಂದೂ ಬಿಜೆಪಿ ಜೊತೆ ಚುನಾವಣಾ ಸಂಬಂಧ ಇಟ್ಟುಕೊಂಡಿರಲಿಲ್ಲ. ಇದೀಗ ಸಿದ್ಧಾಂತಗಳನ್ನು ಗಾಳಿಗೆ ತೂರಿ ಕೋಮುವಾದಿ ಪಕ್ಷದ ಜೊತೆ ಕೈ ಜೋಡಿಸಿದ್ದಾರೆ. ಡಿಎಂಕೆ, ಕಾಂಗ್ರೆಸ್‌, ಸಿಪಿಐ, ಸಿಪಿಎಂ, ಮುಸ್ಲೀಂ ಲೀಗ್‌ ಎಲ್ಲರೂ ಸೇರಿ ಅವರಿಗೆ ತಕ್ಕ ಪಾಠ ಕಲಿಸಬೇಕು’ ಎಂದರು.
undefined
ಈ ವೇಳೆ ಸಂಸದ ಚೆಲ್ಲಕುಮಾರ್‌, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಜಮೀರ್‌ ಅಹಮದ್‌ಖಾನ್‌, ಎಚ್‌.ಎಂ. ರೇವಣ್ಣ ಸೇರಿದಂತೆ ಹಲವರು ಹಾಜರಿದ್ದರು.
undefined
click me!