ಚಿಕ್ಕಮಗಳೂರಲ್ಲಿ ಮತ್ತೊಬ್ಬ ಕೇರಳ ಬಾಲಕಿ ನಾಪತ್ತೆಯಾಗಿ 2ನೇ ದಿನ: ಸಚಿವ ಈಶ್ವರ ಖಂಡ್ರೆ ಖಡಕ್ ಆದೇಶ! ಏನಿದೆ ಇದರಲ್ಲಿ?

Published : Apr 08, 2026, 09:37 PM IST

ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಪ್ರವಾಸಕ್ಕೆ ಬಂದಿದ್ದ ಕೇರಳದ ಬಾಲಕಿ ಶ್ರೀನಂದಾ, ರೀಲ್ಸ್ ಮಾಡಿದ ಕೆಲವೇ ಕ್ಷಣಗಳಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಬಾಲಕಿಯ ಪತ್ತೆಗೆ ಅರಣ್ಯ ಸಚಿವರು ಆಧುನಿಕ ತಂತ್ರಜ್ಞಾನ ಬಳಸಿ ಪೊಲೀಸರು ಮತ್ತು ಅರಣ್ಯ ಇಲಾಖೆ ತೀವ್ರ ಶೋಧ ನಡೆಸಲು ಆದೇಶಿಸಿದ್ದಾರೆ.

PREV
16
ಕೇರಳದ ಮತ್ತೊಬ್ಬ ಹುಡುಗಿಯನ್ನ ಸೀರಿಯಸ್ ಆಗಿ ಹುಡುಕಿ

ಚಿಕ್ಕಮಗಳೂರು: ಕಾಫಿನಾಡಿನ ಪ್ರಸಿದ್ಧ ಪ್ರವಾಸಿ ತಾಣ ಚಂದ್ರದ್ರೋಣ ಪರ್ವತ ಶ್ರೇಣಿಯ ಮುಳ್ಳಯ್ಯನಗಿರಿ ಮತ್ತು ದತ್ತಪೀಠದ ನಡುವೆ ಕೇರಳ ಮೂಲದ ಬಾಲಕಿ ಶ್ರೀನಂದಾ (15) ನಾಪತ್ತೆಯಾಗಿರುವ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಬಾಲಕಿಯ ಪತ್ತೆಗಾಗಿ ಅರಣ್ಯ ಇಲಾಖೆ ಸಂಪೂರ್ಣ ಸಹಕಾರ ನೀಡಬೇಕು ಮತ್ತು ಆಧುನಿಕ ತಂತ್ರಜ್ಞಾನ ಬಳಸಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

26
ಸಚಿವ ಈಶ್ವರ ಖಂಡ್ರೆ ಮಹತ್ವದ ಆದೇಶ:

ಬಾಲಕಿ ನಾಪತ್ತೆಯಾದ ಪ್ರದೇಶವು ತಾಂತ್ರಿಕವಾಗಿ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರದಿದ್ದರೂ, ಮಾನವೀಯ ದೃಷ್ಟಿಯಿಂದ ಮತ್ತು ಆ ಪ್ರದೇಶದ ಭೌಗೋಳಿಕ ಪರಿಸ್ಥಿತಿಯನ್ನು ಅರಿತು ಅರಣ್ಯ ಇಲಾಖೆ ಶೋಧ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಸಚಿವರು ಸೂಚಿಸಿದ್ದಾರೆ.

36
ಆಧುನಿಕ ಉಪಕರಣಗಳನ್ನು ಬಳಸಿ

‘ಚಂದ್ರದ್ರೋಣ ಪರ್ವತ ಪ್ರದೇಶವು ಬೆಟ್ಟ-ಗುಡ್ಡಗಳು, ಕಡಿದಾದ ಇಳಿಜಾರು ಮತ್ತು ದಟ್ಟ ಗಿಡಗಂಟೆಗಳಿಂದ ಕೂಡಿದೆ. ಇಂತಹ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ನುರಿತ ಅರಣ್ಯ ಸಿಬ್ಬಂದಿಯ ಅಗತ್ಯವಿದೆ. ಹೀಗಾಗಿ, ಥರ್ಮಲ್ ಡ್ರೋನ್ ಸೇರಿದಂತೆ ಆಧುನಿಕ ಉಪಕರಣಗಳನ್ನು ಬಳಸಿ ಜಿಲ್ಲಾಡಳಿತ ಮತ್ತು ಪೊಲೀಸರೊಂದಿಗೆ ಶೋಧ ಕಾರ್ಯ ನಡೆಸಬೇಕು’ ಎಂದು ಸಚಿವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

46
ರೀಲ್ಸ್ ಮಾಡಿದ ಕೆಲವೇ ಕ್ಷಣದಲ್ಲಿ ನಿಗೂಢ ನಾಪತ್ತೆ:

ಬಾಲಕಿ ಶ್ರೀನಂದಾ ನಾಪತ್ತೆಯಾಗುವ ಮೊದಲು ತನ್ನ ತಂದೆ ರಮೇಶ್ ಅವರ ಮೊಬೈಲ್‌ನಲ್ಲಿ ಅತ್ಯಂತ ಖುಷಿಯಿಂದ ಇದ್ದಳು ಎಂಬುದು ತಿಳಿದುಬಂದಿದೆ. ಮಾಣಿಕ್ಯಾಧಾರದ ವಿವಿಧ ಭಾಗಗಳಲ್ಲಿ ತನ್ನ ಸಂಬಂಧಿಕರೊಂದಿಗೆ ಸೇರಿ ಫೋಟೋಗಳನ್ನು ತೆಗೆಸಿಕೊಂಡಿದ್ದಳು ಮತ್ತು ಸೋಶಿಯಲ್ ಮೀಡಿಯಾಗಾಗಿ ರೀಲ್ಸ್‌ಗಳನ್ನು ಮಾಡಿಕೊಂಡಿದ್ದಳು. ಸಂಜೆ 5:30 ರಿಂದ 6:30 ರವರೆಗೆ ಕುಟುಂಬಸ್ಥರ ಜೊತೆಯೇ ಇದ್ದ ಬಾಲಕಿ, ಮಾಣಿಕ್ಯಾಧಾರದ ಮೆಟ್ಟಿಲುಗಳನ್ನು ಇಳಿಯುವಾಗ ಕ್ಷಣಾರ್ಧದಲ್ಲಿ ಕಣ್ಣರೆಯಾಗಿದ್ದಾಳೆ.

56
24 ಗಂಟೆ ಕಳೆದರೂ ಸಿಗದ ಸುಳಿವು

ಬಾಲಕಿ ನಾಪತ್ತೆಯಾಗಿ ಈಗ 24 ಗಂಟೆಗಳಿಗೂ ಹೆಚ್ಚು ಸಮಯ ಕಳೆದಿದೆ. ಸ್ಥಳೀಯ ಪೊಲೀಸರು, ಅರಣ್ಯ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದವರು ನಿನ್ನೆಯಿಂದಲೂ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ, ಕಗ್ಗತ್ತಲು ಮತ್ತು ದಟ್ಟವಾದ ಮಂಜಿನ ಕಾರಣದಿಂದ ಶೋಧ ಕಾರ್ಯಕ್ಕೆ ಅಡಚಣೆಯಾಗಿತ್ತು. ಇಂದು ಮುಂಜಾನೆಯಿಂದ ಕಾರ್ಯಾಚರಣೆ ಚುರುಕುಗೊಂಡಿದ್ದು, ಅರಣ್ಯ ಇಲಾಖೆಯ ನುರಿತ ತಂಡಗಳು ಕಾಡಿನ ಪ್ರತಿ ಮೂಲೆಯಲ್ಲೂ ಹುಡುಕಾಟ ನಡೆಸುತ್ತಿವೆ.

66
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

ಕೇರಳದ ಪಾಲಕ್ಕಾಡ್ ಜಿಲ್ಲೆಯ ಈ ಕುಟುಂಬವು ರಜೆ ಕಳೆಯಲು ಚಿಕ್ಕಮಗಳೂರಿಗೆ ಬಂದಿತ್ತು. ಆದರೆ, ಈ ಪ್ರವಾಸ ಈಗ ದುರಂತವಾಗಿ ಪರಿಣಮಿಸಿದೆ. ಮಗಳು ನಾಪತ್ತೆಯಾದ ಹಿನ್ನೆಲೆಯಲ್ಲಿ ತಂದೆ ರಮೇಶ್ ಅವರು ಚಿಕ್ಕಮಗಳೂರು ನಗರದ ಗ್ರಾಮಾಂತರ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಕಣ್ಣೆದುರೇ ಇದ್ದ ಮಗಳು ಇದ್ದಕ್ಕಿದ್ದಂತೆ ಮಾಯವಾಗಿರುವುದು ಕುಟುಂಬಸ್ಥರನ್ನು ಕಂಗಾಲಾಗಿಸಿದೆ. ಸದ್ಯ ಸಚಿವರ ಆದೇಶದ ಬೆನ್ನಲ್ಲೇ ಥರ್ಮಲ್ ಡ್ರೋನ್‌ಗಳನ್ನು ಬಳಸಲಾಗುತ್ತಿದ್ದು, ಕಾಡಿನ ಉಷ್ಣಾಂಶದ ಆಧಾರದ ಮೇಲೆ ಬಾಲಕಿ ಎಲ್ಲಿದ್ದಾಳೆ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories