Published : Dec 19, 2025, 12:41 PM ISTUpdated : Dec 19, 2025, 12:46 PM IST
ಬೆಂಗಳೂರಿನ ತ್ಯಾಗರಾಜ ನಗರದಲ್ಲಿ, ಜಿಮ್ ಟ್ರೈನರ್ ರಂಜನ್ ಆಟವಾಡುತ್ತಿದ್ದ ಬಾಲಕನಿಗೆ ಅಮಾನವೀಯವಾಗಿ ಒದ್ದು ವಿಕೃತಿ ಮೆರೆದಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಘಟನೆಯ ಆರೋಪಿ ಈ ಹಿಂದೆಯೂ ಹಲವು ಮಕ್ಕಳ ಮೇಲೆ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರು (ಡಿ.19): ಸಿಲಿಕಾನ್ ಸಿಟಿಯ ಬನಶಂಕರಿ ವ್ಯಾಪ್ತಿಯ ತ್ಯಾಗರಾಜ ನಗರದಲ್ಲಿ ಅತ್ಯಂತ ಅಮಾನವೀಯ ಘಟನೆಯೊಂದು ನಡೆದಿದೆ. ಮನೆಯ ಮುಂದೆ ತನ್ನ ಪಾಡಿಗೆ ತಾನು ಆಟವಾಡುತ್ತಿದ್ದ ಪುಟ್ಟ ಬಾಲಕನೊಬ್ಬನನ್ನು ಜಿಮ್ ಟ್ರೈನರ್ ಒಬ್ಬ ಫುಟ್ಬಾಲ್ನಂತೆ ಕಾಲಿನಿಂದ ಒದ್ದು ವಿಕೃತಿ ಮೆರೆದಿದ್ದಾನೆ. ಈ ಘಟನೆಯನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ತೀವ್ರವಾಗಿ ಖಂಡಿಸಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.
27
ಸುಮ್ಮನೆ ಆಡುವಾಡುತ್ತಿದ್ದವನ ಮೇಲೆ ಹಲ್ಲೆ
ತ್ಯಾಗರಾಜ ನಗರದ ತನ್ನ ಅಜ್ಜಿ ಮನೆಗೆ ಬಂದಿದ್ದ ನೀವ್ ಜೈನ್ ಎಂಬ ಬಾಲಕ, ಕಳೆದ ಡಿಸೆಂಬರ್ 14ರಂದು ರಸ್ತೆಯಲ್ಲಿ ಆಟವಾಡುತ್ತಿದ್ದನು. ಈ ವೇಳೆ ಅಲ್ಲಿಗೆ ಬಂದ ರಂಜನ್ ಎಂಬ ಜಿಮ್ ಟ್ರೈನರ್, ಯಾವುದೇ ಪ್ರಚೋದನೆ ಇಲ್ಲದಿದ್ದರೂ ಬಾಲಕನಿಗೆ ಬಲವಾಗಿ ಒದ್ದಿದ್ದಾನೆ.
37
ಹಾರಿ ಬಿದ್ದ ಮಗು
ರಂಜನ್ ಒದ್ದ ರಭಸಕ್ಕೆ ಮಗು ಹಾರಿ ಹೋಗಿ ದೂರಕ್ಕೆ ಬಿದ್ದಿದೆ. ಪರಿಣಾಮ ಬಾಲಕನ ಮೈಕೈಗೆ ತೀವ್ರ ಗಾಯಗಳಾಗಿವೆ. ಆರಂಭದಲ್ಲಿ ಮಗು ಬಿದ್ದಿದ್ದಕ್ಕೆ ಕಾರಣ ತಿಳಿದಿರಲಿಲ್ಲ, ಆದರೆ ಪೋಷಕರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿ ರಂಜನ್ನ ಅಸಲಿ ಮುಖವಾಡ ಬಯಲಾಗಿದೆ.
ಆರೋಪಿ ರಂಜನ್ ಇದೇ ಮೊದಲ ಬಾರಿಗೆ ಇಂತಹ ಕೃತ್ಯ ಎಸಗಿಲ್ಲ, ಈ ಮೊದಲು ಇಂತಹ ಅನೇಕ ಕೃತ್ಯಗಳನ್ನು ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈತ ತ್ಯಾಗರಾಜ ನಗರದ ಸುಮಾರು ಮೂರ್ನಾಲ್ಕು ಮಕ್ಕಳಿಗೆ ಇದೇ ರೀತಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
57
ಪೊಲೀಸರಿಂದ ಬಂಧನ, ಬಿಡುಗಡೆ
ಜಿಮ್ ಟರೈನರ್ ಆಗಿದ್ದರೂ ದಾರಿಹೋಕರಿಗೆ ಅನಗತ್ಯವಾಗಿ ಬೈಯುವುದು ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸುವುದು ಈತನ ಚಾಳಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಬಾಲಕನ ತಾಯಿ ನೀಡಿದ ದೂರಿನ ಮೇರೆಗೆ ಬನಶಂಕರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರೂ, ಸದ್ಯ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.
67
ರಾಜ್ಯ ಮಕ್ಕಳ ಆಯೋಗದ ಆಕ್ರೋಶ
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶಶಿಧರ್ ಕೋಸಂಬೆ, 'ಈ ಘಟನೆಯು ಅತ್ಯಂತ ಖಂಡನೀಯ. ಮಕ್ಕಳಿಗೆ 18 ವರ್ಷ ತುಂಬುವವರೆಗೆ ಅವರು ಗೌರವಯುತವಾಗಿ ಬದುಕಲು ಸಮಾಜದಲ್ಲಿ ಅವಕಾಶ ನೀಡಬೇಕು. ಪದೇ ಪದೇ ಇಂತಹ ಘಟನೆಗಳು ನಡೆಯುವುದು ಆರೋಗ್ಯಕರ ಬೆಳವಣಿಗೆಯಲ್ಲ ಎಂದು ಹೇಳಿದರು.
77
ಇವನೇ ನೋಡಿ ಮಕ್ಕಳಿಗೆ ಹೊಡೆಯೋ ಸೈಕ್
ಈ ಬಗ್ಗೆ ಮಕ್ಕಳ ಆಯೋಗದ ವತಿಯಿಂದಲೂ ಈ ಸಂಬಂಧ ದೂರು ದಾಖಲಿಸಲಾಗುವುದು ಮತ್ತು ಹಲ್ಲೆಕೋರನ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದು ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ತಿಳಿಸಿದರು.