ಜೈಲಿನ ಟಿವಿ ತುಂಬಾ ತನ್ನ ವಿರುದ್ಧ ಸುದ್ದಿ, ಮಧ್ಯದ ಬೆರಳು ತೋರಿಸಿ ಆಕ್ರೋಶ ಹೊರಹಾಕಿದ್ರಾ ದರ್ಶನ್?

First Published Sep 12, 2024, 10:01 PM IST

ಪರಪ್ಪನ ಅಗ್ರಹಾರದಲ್ಲಿ ನಿಯಮ ಉಲ್ಲಂಘಿಸಿದ ಕೊಲೆ ಆರೋಪಿ ನಟ ದರ್ಶನ್ ಇದೀಗ ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಆದರೆ ಬಳ್ಳಾರಿ ಜೈಲಿನಲ್ಲಿ ದರ್ಶನ್ ಆಕ್ರೋಶ ಹೆಚ್ಚಾಗಿದೆ ಅನ್ನೋದಕ್ಕೆ ಕೆಲ ಸಾಕ್ಷ್ಯಗಳು ಲಭ್ಯವಾಗಿದೆ. ಮಾಧ್ಯಮ ಕಂಡೊಡನೆ ಮಧ್ಯದ ಬೆರಳು ತೋರಿಸಿ ಆಕ್ರೋಶ ಹೊರಹಾಕಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳು ಒಂದೊಂದು ಜೈಲಿನಲ್ಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಮೇಲ್ನೋಟಕ್ಕೆ ಸೈಲೆಂಟ್ ಆಗಿದ್ದರೂ ಒಳಗೆ ಕೊತ ಕೊತ ಕುದಿಯುತ್ತಿದ್ದಾರೆ.

ಬಳ್ಳಾರಿ ಜೈಲಿಗೆ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ ತೂಗುದೀಪ್ ಹಾಗೂ ವಕೀಲರ ಭೇಟಿಯಾಗಲು ಆಗಮಿಸಿದ್ದಾರೆ. ಈ ವೇಳೆ ಆರೋಪಿ ದರ್ಶನ್‌ನನ್ನು ಪೊಲೀಸರು ಸಂದರ್ಶಕರ ಕೊಠಡಿಗೆ ಕರೆ ತಂದಿದ್ದಾರೆ. ಈ ವೇಳೆ ವರದಿ ಮಾಡುತ್ತಿದ್ದ ಮಾಧ್ಯಮವನ್ನು ನೋಡಿ ಮಧ್ಯದ ಬೆರಳು ತೋರಿಸಿದ್ದಾರೆ. ಈ ಮೂಲಕ ಮಾಧ್ಯಮದ ವಿರುದ್ದ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
 

Latest Videos


ಜೈಲಿನ ಹೊರಭಾಗದಲ್ಲಿ ವರದಿ ಮಾಡುತ್ತಿದ್ದ ಮಾಧ್ಯಮ ನೋಡುತ್ತಿದ್ದಂತೆ ದರ್ಶನ್ ಮತ್ತಷ್ಟು ಆಕ್ರೋಶಭರಿತರಾಗಿದ್ದಾರೆ. ಆದರೆ ಪೊಲೀಸರ ನಡುವಿನಲ್ಲಿದ್ದ ಕಾರಣ ಮಧ್ಯದ ಬೆಳರನ್ನು ತೋರಿಸುತ್ತಾ ಸಾಗಿದ್ದಾರೆ. ಇಷ್ಟೇ ಅಲ್ಲ ಒಳಗೊಳಗೆ ಮುಗುಳುನಗುತ್ತಾ ಸಾಗಿದ್ದಾರೆ. ದರ್ಶನ್ ನಡೆ ಇದೀಗ ಭಾರಿ ಚರ್ಚೆಯಾಗುತ್ತಿದೆ.

ಜೈಲಿನಲ್ಲಿರುವ ದರ್ಶನ್ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ ಅನ್ನೋ  ಮಾತುಗಳು ಕೇಳಿಬಂದಿತ್ತು. ಆದರೆ ಕೊಲೆ ಮಾಡಿ ಜೈಲು ಸೇರಿರುವ ಪಶ್ಚಾತ್ತಾಪ ದರ್ಶನ್ ಮುಖದಲ್ಲಿ ಮಾತ್ರವಲ್ಲ ನಡೆಯಲ್ಲೂ ಕಾಣುತ್ತಿಲ್ಲ. ಕೊಲೆ ಆರೋಪಿಯಾಗಿ ಜೈಲು ಸೇರಿದರೂ ದರ್ಶನ್ ದರ್ಪ ಕಡಿಮೆಯಾಗಿಲ್ಲ ಅನ್ನೋ ಕಮೆಂಟ್‌ಗಳು ಕೇಳಿಬರುತ್ತಿದೆ. ಇದೇ ವೇಳೆ ದರ್ಶನ್ ಅಭಿಮಾನಿಗಳು ಡಿ ಬಾಸ್‌ಗೆ ಜೈ ಎಂದಿದ್ದಾರೆ. ದರ್ಶನ್ ನಡೆ ಸರಿಯಾಗಿದೆ ಎಂದು ವಾದಿಸಿದ್ದಾರೆ.

ಚಾರ್ಜ್‌ಶೀಟ್ ಸಲ್ಲಿಕೆ ಬಳಿಕ ದರ್ಶನ್ ಜಾಮೀನು ನಿರೀಕ್ಷೆಯಲ್ಲಿದ್ದಾರೆ. ಇತ್ತ ದರ್ಶನ್ ಬಿಡುಗಡೆಯನ್ನೂ ಸಂಭ್ರಮಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಾಗಿ ಬಿಡುಗಡೆಯ ಕಾನೂನು ಪಕ್ರಿಯೆ ಕುರಿತು ತೀವ್ರ ಚರ್ಚೆ ನಡೆಸಲಾಗುತ್ತಿದೆ. ಜಾಮೀನು ಸಿಗುವ ನಿರೀಕ್ಷೆಯಲ್ಲಿರುವ ದರ್ಶನ್ ವರಸೆಗಳು ಬದಲಾಗುತ್ತಿದೆ. 

ಪರಪ್ಪನ ಅಗ್ರಹಾರದಲ್ಲಿ ಮನೆಯೂಟಕ್ಕೆ ಬೇಡಿಕೆ ಇಟ್ಟಿದ್ದರೆ, ಬಳ್ಳಾರಿಯಲ್ಲಿ ಟಿವಿಗೆ ಬೇಡಿಕೆ ಇಟ್ಟು ಪಡೆದುಕೊಂಡಿದ್ದಾರೆ. ಆದರೆ ಬಳ್ಳಾರಿ ಜೈಲು ಅಧಿಕಾರಿಗಳು ನೀಡಿದ 32 ಇಂಚಿನ ಟಿವಿಯ ಮೂಲೆ ಮೂಲೆಯಲ್ಲಿ ದರ್ಶನ್ ಕೊಲೆ ಪ್ರಕರಣದ ಸುದ್ದಿಗಳೇ ತುಂಬಿಕೊಂಡಿದೆ. ಇದು ನಟ ದರ್ಶನ್ ಆಕ್ರೋಶ ಮತ್ತಷ್ಟು ಹೆಚ್ಚಿಸಿರುವ ಸಾಧ್ಯತೆ ಇದೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ.

click me!