ಟಿಆರ್‌ಎಸ್‌ ಈಗ ಅಧಿಕೃತವಾಗಿ ಬಿಆರ್‌ಎಸ್‌, ರಾಜ್ಯ ಚುನಾವಣೆಯಲ್ಲಿ ಜೆಡಿಎಸ್‌ಗೆ ಬೆಂಬಲ!

First Published Dec 9, 2022, 4:00 PM IST

ಕೆ.ಚಂದ್ರಶೇಖರ್‌ ರಾವ್‌ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಈಗ ಅಧಿಕೃತವಾಗಿ ಭಾರತ್‌ ರಾಷ್ಟ್ರ ಸಮಿತಿಯಾಗಿ ಬದಲಾಗುವ ಮೂಲಕ ರಾಷ್ಟ್ರೀಯ ಪಕ್ಷ ಎನಿಸಿಕೊಂಡಿದೆ. ಶುಕ್ರವಾರದ ಪಕ್ಷದ ಅಧಿಕೃತ ಧ್ವಜ ಹಾಗೂ ಲಾಂಛನ ಅನಾವರಣ ಕಾರ್ಯಕ್ರಮ ಪಕ್ಷದ ಕೇಂದ್ರ ಕಚೇರಿಯಾದ ತೆಲಂಗಾಣ ಭವನದಲ್ಲಿ ನಡೆಯಿತು. ಈ ವೇಳೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಹಾಜರಿದ್ದರು. ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಆರ್‌ಎಸ್‌, ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ಗೆ ಬೆಂಬಲ ನೀಡಲಿದೆ ಎಂದೂ ಈ ವೇಳೆ ಘೋಷಣೆ ಮಾಡಲಾಯಿತು.

ರಾಷ್ಟ್ರ ರಾಜಕಾರಣಕ್ಕೆ ಧುಮುಕುವ ದೃಷ್ಟಿಯಲ್ಲಿ ಕಳೆದ ಅಕ್ಟೋಬರ್‌ 5 ರಂದು ಟಿಆರ್‌ಎಸ್‌ ಪಕ್ಷವನ್ನು ಭಾರತ್‌ ರಾಷ್ಟ್ರ ಸಮಿತಿ ಪಕ್ಷವಾಗಿ ಬದಲಾವಣೆ ಮಾಡುವುದಾಗಿ ತೆಲಂಗಾಣ ಸಿಎಂ ಕೆಸಿಆರ್‌ ಘೋಷಣೆ ಮಾಡಿದ್ದರು.

ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷವನ್ನು ಭಾರತ್‌ ರಾಷ್ಟ್ರ ಸಮಿತಿಯಾಗಿ ಬದಲಿಸಿ, ರಾಷ್ಟ್ರೀಯ ಪಕ್ಷವನ್ನಾಗಿ ಮಾಡುವ ಅಧಿಕೃತ ಪತ್ರಗಳಿಗೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್‌ ರಾವ್‌ ಸಹಿ ಮಾಡಿದರು.

ಗುರುವಾರ ಬಿಆರ್‌ಎಸ್‌ ಪಕ್ಷಕ್ಕೆ ಕೇಂದ್ರ ಚುನಾವಣಾ ಆಯೋಗ ರಾಷ್ಟ್ರೀಯ ಪಕ್ಷದ ಮಾನ್ಯತೆ ನೀಡಿದೆ. ಶುಕ್ರವಾರ ಪಕ್ಷದ ಲಾಂಛನ ಹಾಗೂ ಧ್ವಜವನ್ನು ಅನಾವರಣ ಮಾಡುವ ಕಾರ್ಯಕ್ರಮದಲ್ಲಿ ಜೆಡಿಎಸ್‌ ಮುಖಂಡ ಎಚ್‌ಡಿ ಕುಮಾರಸ್ವಾಮಿ ಭಾಗವಹಿಸಿದ್ದರು.

ಪಕ್ಷದ ಚಿಹ್ನೆ ಹಾಗೂ ಬಣ್ಣ ಅದೇ ರೀತಿಯಲ್ಲಿ ಇರುತ್ತದೆ. ಆದರೆ, ಬಿಆರ್‌ಎಸ್‌ನ ಧ್ವಜದಲ್ಲಿ ತೆಲಂಗಾಣದ ಬದಲಿಗೆ ಭಾರತದ ಭೂಪಟ ಇರಲಿದೆ.

ಟಿಆರ್‌ಎಸ್‌ ಹಾಗೂ ಪಕ್ಷದ ನಾಯಕ ಕೆಸಿಆರ್‌ ಅವರ ಮನವಿಯನ್ನು ತಾವು ಪುರಸ್ಕಾರ ಮಾಡಿದ್ದಾಗಿ ಕೇಂದ್ರ ಚುನಾವಣಾ ಆಯೋಗ ಗುರುವಾರ ತಿಳಿಸಿತ್ತು. ಆ ಮೂಲಕ ಟಿಆರ್‌ಎಸ್‌ ರಾಷ್ಟ್ರೀಯ ಪಕ್ಷ ಎನಿಸಿಕೊಳ್ಳುವುದು ಖಚಿತವಾಗಿತ್ತು.

ಈ ವೇಳೆ ಮಾತನಾಡಿದ ಕೆಸಿ ಚಂದ್ರಶೇಖರ್‌ ರಾವ್‌, ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಟಿಆರ್‌ಎಸ್‌, ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ಗೆ ಬೆಂಬಲ ನೀಡಲಿದೆ ಎಂದು ಘೋಷಿಸಿದರು.

ಧ್ವಜ ಹಾಗೂ ಲಾಂಛನವನ್ನು ಅನಾವರಣ ಮಾಡಿದ ಬಳಿಕ ಕೆಸಿ ಚಂದ್ರಶೇಖರ್‌ ರಾವ್‌, ತೆಲಂಗಾಣ ಭವನದದಲ್ಲಿ ಪಕ್ಷದ ಹೊಸ ಧ್ವಜವನ್ನು ಕೂಡ ಹಾರಿಸಿದ್ದಾರೆ.

ಕಾರ್ಯಕ್ರಮದಲ್ಲಿ ಎಚ್‌ಡಿ ಕುಮಾರಸ್ವಾಮಿ ಅಲ್ಲ, ಹಿರಿಯ ನಟ ಹಾಗೂ ಕೆಸಿಆರ್‌ ಪಕ್ಷದ ಸದಸ್ಯ ಪ್ರಕಾಶ್‌ ರಾಜ್‌ ಕೂದ ಹಾಜರಿದ್ದರು.

click me!