ಲಂಚ ಪಡೆದು ಶಾಸಕ ಲಮಾಣಿ ಜೈಲಿಗೆ, ಇದರ ಬೆನ್ನಲ್ಲೇ ಗುತ್ತಿಗೆದಾರನಿಗೆ ಧಮ್ಕಿ ಹಾಕೋ ಆಡಿಯೋ ವೈರಲ್, ಎಲ್ಲಾ ಬೀಪ್ ಸೌಂಡ್!

Published : Feb 22, 2026, 05:21 PM IST

ಶಿರಹಟ್ಟಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರು ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದು ಬಂಧನಕ್ಕೊಳಗಾಗಿದ್ದಾರೆ. ಇದರ ಬೆನ್ನಲ್ಲೇ, ಅವರು ಗುತ್ತಿಗೆದಾರರಿಗೆ ಕಮಿಷನ್‌ಗಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾದ ಸಂಭಾಷಣೆಯ ಆಡಿಯೋ ಕ್ಲಿಪ್‌ಗಳು ವೈರಲ್ ಆಗಿದ್ದು, ತೀವ್ರ ಸಂಚಲನ ಸೃಷ್ಟಿಸಿವೆ.

PREV
16
ಕಾವೇರಿಸುವಂತಹ ಆಡಿಯೋ ದಾಖಲೆ

ಗದಗ: ಸರ್ಕಾರಿ ಕಾಮಗಾರಿಯೊಂದರ ಸಂಬಂಧ ತಮ್ಮದೇ ಮಾಲೀಕತ್ವದ ಆಸ್ಪತ್ರೆಯಲ್ಲಿ ಲಂಚ ಸ್ವೀಕರಿಸುವ ವೇಳೆ ಶಿರಹಟ್ಟಿ ಬಿಜೆಪಿ ಶಾಸಕ ಡಾ। ಚಂದ್ರು ಲಮಾಣಿ ಅವರು ಶನಿವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದು ಬಂಧನವಾಗಿ ಭಾನುವಾರ ನ್ಯಾಯಾಧೀಶರು ಮಾರ್ಚ್ 3ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದ ಕ್ವಾರಂಟೈನ್ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇದರ ಜೊತೆಗೆ ಗದಗ ಜಿಲ್ಲೆಯ ರಾಜಕೀಯ ವಲಯವನ್ನು ತೀವ್ರವಾಗಿ ಕಾವೇರಿಸುವಂತಹ ಆಡಿಯೋ ದಾಖಲೆಗಳು ಇದೀಗ ಭಾರೀ ಸಂಚಲನ ಸೃಷ್ಟಿಸಿವೆ. ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಗುತ್ತಿಗೆದಾರ ವಿಜಯ್ ಪೂಜಾರ್ ನಡುವಿನ ಸಂಭಾಷಣೆ ಎನ್ನಲಾದ ಆಡಿಯೋ ಕ್ಲಿಪ್‌ಗಳು ಮಾಧ್ಯಮಗಳಿಗೆ ಲಭ್ಯವಾಗಿದ್ದು, ಕಮಿಷನ್ ಬೇಡಿಕೆ, ಕಾಮಗಾರಿ ನಿಲ್ಲಿಸುವ ಬೆದರಿಕೆ ಮತ್ತು ವಸೂಲಾತಿ ಮಾತುಗಳು ಕೇಳಿಬರುತ್ತಿವೆ

26
48 ಸೆಕೆಂಡುಗಳ ಆಡಿಯೋ ವೈರಲ್

ಮೊದಲ ಹಂತದಲ್ಲಿ 48 ಸೆಕೆಂಡುಗಳ ಆಡಿಯೋ ವೈರಲ್ ಆಗಿದ್ದು, “ನಡ ಮುರಿಸ್ತೀನಿ”, “ಪ್ರೀತಿ ವಿಶ್ವಾಸದಿಂದ ಹೇಳಿದ್ರೆ ನಾಟಕ ಮಾಡ್ತಿಯಾ?” ಎಂಬ ತೀಕ್ಷ್ಣ ಪದಗಳು ಕೇಳಿಬರುತ್ತಿವೆ ಎನ್ನಲಾಗಿದೆ. ಈ ಆಡಿಯೋದಲ್ಲಿ ಶಾಸಕ ಚಂದ್ರು ಲಮಾಣಿ ಅವರು ಗುತ್ತಿಗೆದಾರ ವಿಜಯ್ ಪೂಜಾರ್‌ರ ಮೇಲೆ ಆಕ್ರೋಶ ವ್ಯಕ್ತಪಡಿಸಿರುವಂತೆ ಹಾಗೂ ಹಣಕಾಸಿನ ವಿಚಾರವಾಗಿ ಒತ್ತಡ ಹಾಕಿರುವಂತೆ ಆರೋಪಿಸಲಾಗಿದೆ. ಎಲ್ಲಮ್ಮಗೆ ಹೋಗಿದ್ದೆ, ಮಲ್ಲಮ್ಮಗೆ ಹೋಗಿದ್ದೆ ಎಂದು ನಾಟಕ ಮಾಡ್ತಿಯಾ? ನಿಮ್ಮ ತಾಲೂಕಿನಲ್ಲಿ ಮಾಡಿದಂತೆ ನಮ್ಮ ತಾಲೂಕಿನಲ್ಲಿ ಮಾಡಿದ್ರೆ ನಡ ಮುರೀತೀನಿ ಎಂಬ ಬೆದರಿಕೆ ಸ್ವರೂಪದ ಮಾತುಗಳು ಕೇಳಿಬರುತ್ತಿವೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರು ಇದೊಂದು ಸಾರಿ ತಪ್ಪಾಗಿದೆ ಸರ್ ಎಂದು ವಿನಂತಿಸಿದರೂ, “ಯಾರ್ ಹೆಸರಿಗೆ ಗುತ್ತಿಗೆ ಆಗಿದೆ? ಯಾರ್ ಮಾಡ್ಬೇಕು?” ಎಂದು ಶಾಸಕರು ಪ್ರಶ್ನಿಸಿರುವುದಾಗಿ ಆಡಿಯೋದಲ್ಲಿ ಉಲ್ಲೇಖವಿದೆ. “ಎರಡು ಅಂತ ಹೇಳಿದ್ರಿ” ಎಂದು ಗುತ್ತಿಗೆದಾರ ಹೇಳುತ್ತಿದ್ದಂತೆ, ಮಾತುಕತೆ ಮತ್ತಷ್ಟು ಗರಂ ಆಗಿರುವುದು ಕೇಳಿಬರುತ್ತದೆ.

36
ಧಮ್ಕಿ ಆಡಿಯೋ – ಪಾರ್ಟ್ 2 ಬಿಡುಗಡೆ

ಇದಕ್ಕೆ ಮುಂದುವರಿದಂತೆ, ಶಾಸಕರ ಧಮ್ಕಿಯ ಆಡಿಯೋ ಪಾರ್ಟ್–2 ಕೂಡ ಬಿಡುಗಡೆಯಾಗಿದ್ದು, ಇದು ವಿವಾದವನ್ನು ಇನ್ನಷ್ಟು ಗಂಭೀರಗೊಳಿಸಿದೆ. ಈ ಭಾಗದಲ್ಲಿ ಶಾಸಕ ಚಂದ್ರು ಲಮಾಣಿ, ಗುತ್ತಿಗೆದಾರ ವಿಜಯ್ ಪೂಜಾರ್ ಹಾಗೂ ಶಾಸಕರ ಪಿಎ ಮಂಜುನಾಥ್ ನಡುವಿನ ಸಂಭಾಷಣೆ ಎನ್ನಲಾಗಿದೆ. ಈ ಆಡಿಯೋದಲ್ಲಿ ಕಮಿಷನ್ ಹಣ ಸಂದಾಯವಾಗದ ಹಿನ್ನೆಲೆ ಕಾಮಗಾರಿ ಚೇಂಜ್ ಆಫ್ ವರ್ಕ್, ರೀ-ಟೆಂಡರ್ ಅಥವಾ ಡೆಂಟರ್ ನಿಲ್ಲಿಸುವ ಬಗ್ಗೆ ಸೂಚನೆ ನೀಡಿರುವಂತೆ ಆರೋಪಿಸಲಾಗಿದೆ. “ವರ್ಕ್ ಆರ್ಡರ್ ಕೊಟ್ಟಿಲ್ಲ, ಚೇಂಜ್ ಮಾಡಿ” ಎಂದು ಪಿಎಗೆ ಸೂಚನೆ ನೀಡಿರುವುದು, ಹಾಗೂ “ಎರಡು ದಿನದಲ್ಲಿ ತಂದು ಕೊಡ್ತೀನಿ” ಎಂಬ ಗುತ್ತಿಗೆದಾರರ ಮಾತಿಗೆ ಒಪ್ಪದೇ, ಕೆಲಸ ಬದಲಾಯಿಸುವಂತೆ ಒತ್ತಡ ಹಾಕಿರುವುದು ಕೇಳಿಬರುತ್ತದೆ ಎನ್ನಲಾಗಿದೆ.

46
ವಸೂಲಾತಿ ಬೆದರಿಕೆ ಆರೋಪ

ಆಡಿಯೋದಲ್ಲಿ, ಮುಚ್ಚಿಕೊಂಡು ಕೊಟ್ಟರೆ ಸರಿ, ಇಲ್ಲಾದ್ರೆ ಫೈನಾನ್ಸಿನ ಮುಸ್ಲಿಂ ವ್ಯಕ್ತಿಗೆ ವಸೂಲಿಗೆ ಬಿಡ್ತೀನಿ ಎಂಬ ಗಂಭೀರ ಬೆದರಿಕೆ ರೀತಿಲ್ಲಿದೆ. ನಿನ್ನಂಥವರು ನೂರು ಜನ ಬರ್ತಾರೆ. ಕಳಪೆ ಕಾಮಗಾರಿ ಮಾಡ್ತಾನೆ, ಬ್ಲ್ಯಾಕ್‌ಮೇಲ್ ಮಾಡ್ತಾನೆ ಅಂತಾ ಚೀಫ್ ಸೆಕ್ರೆಟರಿಗೆ ಬರೆಯಿರಿ ಎಂಬ ಮಾತುಗಳೂ ಆಡಿಯೋದಲ್ಲಿ ಉಲ್ಲೇಖವಿದೆ. ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಯಿಂದ ಆರಂಭವಾದ ಈ ಮಾತುಕತೆ, ಸಂಕದಾಳ ಗ್ರಾಮದ ತಡೆಗೋಡೆ ಕಾಮಗಾರಿ ನಿಲ್ಲಿಸುವ ಬೆದರಿಕೆ, ರೀ-ಟೆಂಡರ್ ಉಲ್ಲೇಖ ಮತ್ತು ಎಮರ್ಜೆನ್ಸಿ ಕಾಮಗಾರಿ ರೂಪಿಸುವ ಪ್ರಸ್ತಾಪದವರೆಗೆ ತಲುಪಿದೆ ಎಂದು ಆರೋಪಿಸಲಾಗಿದೆ. ಇದು ಗದಗ ಕ್ಷೇತ್ರವಲ್ಲ, ಇಲ್ಲಿ ನಿನ್ನ ಆಟ ನಡೆಯಲ್ಲ, ಸೊಂಟ ಮುರಿದು ಕಳಿಸುತ್ತೇನೆ ಎಂಬ ಗಂಭೀರ ಪದಗಳು ಕೂಡ ಆಡಿಯೋದಲ್ಲಿ ಕೇಳಿಬರುತ್ತಿವೆ.

56
ಟ್ರ್ಯಾಪ್ ಕೇಸ್ ಆರೋಪ ಮತ್ತು ಪ್ರತಿಕ್ರಿಯೆಗಳು

ಈ ಆಡಿಯೋ ಪ್ರಕರಣದ ಬೆನ್ನಲ್ಲೇ, ಶಾಸಕ ಚಂದ್ರು ಲಮಾಣಿ ಮತ್ತು ಕುಮಾರ್ ಮಹಾರಾಜ್ ಸ್ವಾಮೀಜಿ ಸಂಬಂಧಿತ ಆಡಿಯೋ ವಿಚಾರವೂ ಮುನ್ನೆಲೆಗೆ ಬಂದಿದೆ. ಆಡಿಯೋದಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸಿರುವ ಬಗ್ಗೆ ಸೋನು ಲಮಾಣಿ ಪ್ರತಿಕ್ರಿಯಿಸಿ, “ನನ್ನ ಹೆಸರನ್ನು ಬಳಸಿ ಸ್ವಾಮೀಜಿ ಮಾತನಾಡಿದ್ದಾರೆ. ಇದು ತಪ್ಪು. ನಾವು ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ. ಅವರು ಮಾತನಾಡುತ್ತಾ, “ಡಾ. ಚಂದ್ರು ಲಮಾಣಿ ಅವರು ಬಡ ಕುಟುಂಬದಿಂದ ಬಂದ ವೈದ್ಯರು. ಜನರಿಗೆ ಉಚಿತವಾಗಿ ಸೇವೆ ಸಲ್ಲಿಸಿ ಶಾಸಕರಾಗಿದ್ದಾರೆ. ಅವರು ಐದು ಲಕ್ಷ ರೂಪಾಯಿಗಾಗಿ ಇಂತಹ ಕೆಲಸ ಮಾಡುವ ವ್ಯಕ್ತಿಯಲ್ಲ. ಇದು ಅವರ ವಿರುದ್ಧ ರೂಪಿಸಿರುವ ಷಡ್ಯಂತ್ರ” ಎಂದು ಆರೋಪಿಸಿದ್ದಾರೆ. “ನಮ್ಮ ಸಮಾಜ ಇಂತಹ ತಪ್ಪು ಆರೋಪಗಳನ್ನು ತಿರಸ್ಕರಿಸುತ್ತದೆ. ಕ್ಷೇತ್ರದ ಶಾಸಕರ ಮೇಲೆ ದ್ವೇಷ ಸಾಧಿಸುವುದು ಸರಿಯಲ್ಲ” ಎಂದು ಹೇಳಿದರು.

66
ರಾಜಕೀಯ ವಲಯದಲ್ಲಿ ಭಾರೀ ಸಂಚಲನ

ಒಟ್ಟಾರೆ, ಗದಗ ಜಿಲ್ಲೆಯ ರಾಜಕೀಯ ವಾತಾವರಣವನ್ನು ತೀವ್ರವಾಗಿ ಕುದಿಯುವಂತೆ 만든 ಈ ಆಡಿಯೋ ಪ್ರಕರಣ ಇದೀಗ ರಾಜ್ಯಮಟ್ಟದ ಚರ್ಚೆಗೆ ಕಾರಣವಾಗಿದೆ. ವೈರಲ್ ಆಗಿರುವ ಆಡಿಯೋಗಳ ಸತ್ಯಾಸತ್ಯತೆ, ಕಾನೂನು ಕ್ರಮ ಮತ್ತು ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಎಲ್ಲರ ಗಮನ ನೆಟ್ಟಿದೆ. ಈ ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories