ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ನಡುವೆ, ಕುಮಾರಸ್ವಾಮಿಯವರು ಹೊಸ ಅಭ್ಯರ್ಥಿಯ ಸುಳಿವು ನೀಡಿದ್ದು, ಜಿ.ಟಿ.ಡಿ ಪುತ್ರ ಹರೀಶ್ ಗೌಡ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಜೆಡಿಎಸ್ ಟಿಕೆಟ್ ತಂದೆಗೋ ಅಥವಾ ಮಗನಿಗೋ ಎಂಬ ಕುತೂಹಲ ಮೂಡಿದೆ.
ವಿಧಾನಸಭಾ ಚುನಾವಣೆಗೆ ಇನ್ನು ಎರಡು ವರ್ಷಗಳಿದ್ರೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ರಂಗೇರುತ್ತಿದೆ. ಸಾಂಪ್ರದಾಯಿಕ ಮತಗಳನ್ನು ಹೊಂದಿರುವ ಜೆಡಿಎಸ್ನ ಭದ್ರಕೋಟೆ ಅಂತಾನೇ ಬಿಂಬಿತವಾಗಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು, ದಳಪತಿಗಳಿಗೆ ಮಾತ್ರ ಬಿಸಿತುಪ್ಪ. ಜೆಡಿಎಸ್ ಶಾಸಕರಾಗಿದ್ರೂ ಜಿ.ಟಿ.ದೇವೇಗೌಡರು ಮಾತ್ರ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ.
25
ಘಟಾನುಘಟಿ ನಾಯಕ
ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೊಸ ಮುಖ ಪರಿಚಯಿಸುವ ಸುಳಿವನ್ನು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನೀಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಘಟಾನುಘಟಿ ನಾಯಕರಿದ್ದಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಮೈಸೂರು ಜೆಡಿಎಸ್ ರಾಜಕಾರಣದಲ್ಲಿ ಸಂಚಲವನ್ನೇ ಸೃಷ್ಟಿಸಿದೆ. ಹಾಗಾದ್ರೆ ಕುಮಾರಸ್ವಾಮಿ ಹೇಳಿದ ಆ ಘಟಾನುಘಟಿ ನಾಯಕ ಯಾರು ಎಂಬುದರ ಬಗ್ಗೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
35
ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್ ಗೌಡ
ಈ ಎಲ್ಲಾ ಬೆಳವಣಿಗೆಗಳ ನಡುವೆ ಹಾಲಿ ಶಾಸಕ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್ ಗೌಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಹುಟ್ಟುಹಬ್ಬದ ನೆಪದಲ್ಲಿ ಕ್ಷೇತ್ರದ ತುಂಬೆಲ್ಲಾ ಓಡಾಡುತ್ತಿರುವ ಹರೀಶ್ ಗೌಡ, ಚುನಾವಣೆ ಪ್ರಚಾರದ ಕೆಲಸಗಳಂತೆ ಕೆಲಸ ಮಾಡುತ್ತಿದ್ದಾರೆ.
ಜಿ.ಡಿ.ಹರೀಶ್ ಗೌಡ ಅವರ ಹುಟ್ಟುಹಬ್ಬದ ಬ್ಯಾನರ್ಗಳಲ್ಲಿ ತಂದೆ ಜಿ.ಟಿ.ದೇವೇಗೌಡರ ಫೋಟೋ ಸಹ ಮಿಸ್ ಆಗಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬರ್ತ್ ಡೇ ವಿಶ್ ಮಾಡಿದ ಓರ್ವ ಬೆಂಬಲಿಗ, ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಒಂದು ಕ್ಷಣ ನಕ್ಕ ಹರೀಶ್ ಗೌಡ, ಸರಿ ಎಂಬಂತೆ ತಲೆಯಾಡಿಸಿದರು.
ದಳಪತಿಗಳು ಚಾಮುಂಡೇಶ್ವರಿಯಿಂದ ಜಿ.ಟಿ.ದೇವೇಗೌಡರಿಗೆ ಕೊಕ್ ನೀಡಿ ಮಗ ಹರೀಶ್ ಗೌಡರನ್ನು ಬೆಳೆಸಲು ಮುಂದಾದ್ರಾ ಎಂಬ ಚರ್ಚೆಗಳು ಜೆಡಿಎಸ್ ಪಡಸಾಲೆಯಲ್ಲಿ ಶುರುವಾಗಿವೆ. ಚಾಮುಂಡೇಶ್ವರಿ ಆಶಿರ್ವಾದ ತಂದೆಗೋ, ಮಗನಿಗೋ ಎಂಬುವುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.