ಶಿವಂ ಅಸೋಸಿಯೇಟ್ಸ್ನ ₹4500 ಕೋಟಿ ಠೇವಣಿ ವಂಚನೆ ಪ್ರಕರಣವು ಹೊಸ ತಿರುವು ಪಡೆದಿದೆ. ಸಾರ್ವಜನಿಕರ ಹಣದಿಂದ ಪ್ರಭಾವಿ ವ್ಯಕ್ತಿಯೊಬ್ಬರಿಗೆ ₹1.5 ಕೋಟಿ ಮೌಲ್ಯದ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ ಶಂಕೆ ವ್ಯಕ್ತವಾಗಿದ್ದು, ಸಿಐಡಿ ಈ ಕುರಿತು ತನಿಖೆ ನಡೆಸುತ್ತಿದೆ.
ಬೆಳಗಾವಿ: ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ವಿರುದ್ಧದ ₹4500 ಕೋಟಿ ಬಹುಕೋಟಿ ಠೇವಣಿ ವಂಚನೆ ಪ್ರಕರಣದ ತನಿಖೆ ಹೊಸ ತಿರುವು ಪಡೆದಿದ್ದು, ಸಾರ್ವಜನಿಕರ ಠೇವಣಿ ಹಣದಿಂದ ಐಷಾರಾಮಿ ಕಾರು ಉಡುಗೊರೆಯಾಗಿ ನೀಡಲಾಗಿದೆಯೇ ಎಂಬ ಅನುಮಾನ ಮೂಡಿದೆ. ಇದನ್ನು ಸಿಐಡಿ ಗಂಭೀರವಾಗಿ ಪರಿಗಣಿಸಿದೆ.
26
₹1.5 ಕೋಟಿ ಮೌಲ್ಯದ ಐಷಾರಾಮಿ ಕಾರು ಉಡುಗೊರೆ
ಕಳೆದ ಡಿ.27ರಂದು ಬೆಳಗಾವಿಯ ಸರದಾರ್ಸ್ ಕಾಲೇಜು ಮೈದಾನದಲ್ಲಿ ನಡೆದ ಬೆಳಗಾವಿ ಉತ್ಸವ ಕಾರ್ಯಕ್ರಮವನ್ನು ಶಿವಂ ಅಸೋಸಿಯೇಟ್ಸ್ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ದ ಜಿಲ್ಲಾಧ್ಯಕ್ಷ ಆರ್.ಅಭಿಲಾಷ್ಗೆ ಸುಮಾರು ₹1.5 ಕೋಟಿ ಮೌಲ್ಯದ ಐಷಾರಾಮಿ ಕಾರು ಉಡುಗೊರೆಯಾಗಿ ನೀಡಲಾಗಿದೆ ಎನ್ನಲಾಗಿದೆ. ಈ ಕಾರು ಸಾರ್ವಜನಿಕರ ಠೇವಣಿ ಹಣದಿಂದ ಖರೀದಿಸಿ ನೀಡಲಾಗಿದೆಯೇ ಎಂಬ ಶಂಕೆ ಹಿನ್ನೆಲೆಯಲ್ಲಿ ಕಾರಿನ ಮೂಲ, ಹಣದ ಹರಿವು ಹಾಗೂ ಉಡುಗೊರೆ ವ್ಯವಹಾರದ ಕುರಿತು ತನಿಖೆ ನಡೆಸಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ.
36
ಕಾರ್ನ್ನು ಸಿಐಡಿಗೆ ಒಪ್ಪಿಸಲು ಸೂಚನೆ
ಸಿಐಡಿ ಅಧಿಕಾರಿಗಳು ಕಾರ್ನ ತನಿಖೆಗೆ ಅಗತ್ಯವಾಗಬಹುದು. ಆದ್ದರಿಂದ ಅದನ್ನು ತನಿಖಾ ಸಂಸ್ಥೆಗೆ ಹಸ್ತಾಂತರಿಸಬೇಕೆಂದು ಆರ್.ಅಭಿಲಾಷ್ಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಐಷಾರಾಮಿ ಕಾರ್ ಸ್ವೀಕರಿಸಿದ ಸಂದರ್ಭದ ಫೋಟೋ ಹಾಗೂ ವಿಡಿಯೋಗಳನ್ನು ಅಭಿಲಾಷ್ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಆದರೆ, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಆ ಪೋಸ್ಟ್ಗಳನ್ನು ಅಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತೀಚೆಗೆ ಆಯೋಜಿಸಿದ್ದ ಸ್ವಚ್ಛ ಬೆಳಗಾವಿ ಸಂಭ್ರಮ ಕಾರ್ಯಕ್ರಮದಲ್ಲಿಯೂ ಆಯೋಜಕರಿಗೆ ಕಾರು ಉಡುಗೊರೆ ನೀಡುವುದಾಗಿ ಶಿವಾನಂದ ನೀಲಣ್ಣವರ ಭರವಸೆ ನೀಡಿದ್ದರು. ಆ ಭರವಸೆ ಪ್ರಕಾರ ಕಾರು ನೀಡಲಾಗಿದೆಯೇ? ಅಥವಾ ಕೇವಲ ಘೋಷಣೆಯಷ್ಟೇ ಆಗಿತ್ತೇ? ಎಂಬುದರ ತನಿಖೆ ವೇಳೆ ಪರಿಶೀಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಸಿಐಡಿ ಅಧಿಕಾರಿಗಳು ಈಗ ಶಿವಂ ಅಸೋಸಿಯೇಟ್ಸ್ ಮೂಲಕ ಸಂಗ್ರಹಿಸಲಾದ ಹಣ ಎಲ್ಲೆಲ್ಲಿ ಬಳಸಲಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಣ ಬಳಸಲಾಗಿದೆಯೇ? ಉಡುಗೊರೆಗಳ ರೂಪದಲ್ಲಿ ಪ್ರಭಾವಿ ವ್ಯಕ್ತಿಗಳಿಗೆ ವಿತರಿಸಲಾಗಿದೆಯೇ? ಎಂಬ ಅಂಶಗಳನ್ನೂ ತನಿಖೆ ವ್ಯಾಪ್ತಿಗೆ ತೆಗೆದುಕೊಳ್ಳಲಾಗಿದೆ. ಪ್ರಕರಣದಲ್ಲಿ ಈಗಾಗಲೇ ಸಾವಿರಾರು ಕೋಟಿ ರೂಪಾಯಿ ವಹಿವಾಟಿನ ಶಂಕೆ ವ್ಯಕ್ತವಾಗಿದ್ದು, 35 ಸಾವಿರಕ್ಕೂ ಹೆಚ್ಚು ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡಿರುವ ಶಿವಾನಂದ ನೀಲಣ್ಣವರ ಸದ್ಯ ಸಿಐಡಿ ಕಸ್ಟಡಿಯಲ್ಲಿದ್ದು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.
56
ಚಿಕ್ಕಮಗಳೂರು ಕಡೂರು ಪೊಲೀಸರು ಠಾಣೆಗೆ ನೀಡಿದ್ದ ನಾಮಫಲಕದಲ್ಲಿದ್ದ ನೀಲಣ್ಣವರ್ ಹೆಸರು ಮಾಯ!
ಶಿವಾನಂದ ನೀಲಣ್ಣನವರ್ ವಿರುದ್ಧ ಬೆಳಗಾವಿ ಪೊಲೀಸರು ಅಲರ್ಟ್ ಆಗಿ ಈತನ ಅಕ್ರಮಗಳನ್ನು ಬಯಲಿಗೆಳೆಯುತ್ತಿದ್ದಂತೆ ಎಚ್ಚೆತ್ತ ಕಡೂರು ಪೊಲೀಸರು ಠಾಣೆಗೆ ನೀಡಿದ್ದ ನಾಮಫಲಕದಲ್ಲಿದ್ದ ಶಿವಾನಂದ ನೀಲಣ್ಣವರ್ ಹೆಸರನ್ನು ಅಳಿಸಿ ಪೊಲೀಸ್ ಇಲಾಖೆ ಸಹಾಯವಾಣಿ ತುರ್ತು ಸಂಖ್ಯೆಗಳನ್ನು ನಮೂದಿಸಿದೆ. 2 ತಿಂಗಳ ಹಿಂದಷ್ಟೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ಯುವ ಜಾಗೃತಿ ಹೆಸರಲ್ಲಿ ದೊಡ್ಡ ಕಾರ್ಯಕ್ರಮವನ್ನು ಶಿವಾನಂದ ನೀಲಣ್ಣವರ್ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಪಟ್ಟಣದ ಪ್ರಮುಖ ರಸ್ತೆಗಳ ವೃತ್ತಗಳಲ್ಲಿ ಶಿವಾನಂದ ನೀಲಣ್ಣವರ್ ಫ್ಲೆಕ್ಸ್ ಗಳು ರಾರಾಜಿಸುತ್ತಿತ್ತು.
66
ನಾನು ರಾಜ್ಯದ ಸಿ.ಎಂ. ಆಗಬಲ್ಲೆ ಎಂಬ ಶಿವಾನಂದ ಮಾತುಗಳು ಸಾಕಷ್ಟು ವೈರಲ್
ಅಂದಿನ ವೇದಿಕೆ ಕಾರ್ಯಕ್ರಮದಲ್ಲಿ ಮನಸ್ಸು ಮಾಡಿದರೆ 224 ಕ್ಷೇತ್ರಗಳಿಗೆ ಚುನಾವಣೆಗೆ ಅಭ್ಯರ್ಥಿಗಳನ್ನು ಹಾಕಿಸಿ ನಾನು ರಾಜ್ಯದ ಸಿ.ಎಂ. ಆಗಬಲ್ಲೆ ಎಂಬ ಶಿವಾನಂದ ನೀಲಣ್ಣವರ್ ಮಾತುಗಳು ಸಾಕಷ್ಟು ವೈರಲ್ ಆಗಿತ್ತು.ಕೆಲ ದಿನಗಳ ಹಿಂದೆ ಕಡೂರುಠಾಣೆಗೆ ಬೋರ್ಡ್ ನೀಡಿ ಕೊಡುಗೆ ಶಿವಾನಂದ ನೀಲಣ್ಣವರ್, ಸಮಾಜ ಸೇವಕ ಎಂದು ಬರೆಸಲಾಗಿತ್ತು. ವಂಚನೆ ಪ್ರಕರಣದ ಹಿನ್ನಲೆಯಲ್ಲಿ ಎಚ್ಚೆತ್ತ ಪೊಲೀಸರು ಆತನ ಹೆಸರಿನ ಜಾಗಕ್ಕೆ ರೇಡಿಯಂ ಸ್ಟಿಕರ್ ನಿಂದ ಮುಚ್ಚಿ, ತುರ್ತು ಕರೆ 112 ಮತ್ತು ಮಕ್ಕಳ ಸಹಾಯವಾಣಿ 1098 ನಂಬರ್ ಬರೆಸಿದ್ದಾರೆ.