ವರ್ಕ್ ಫ್ರಮ್ ಹೋಂ ಮಾಡಲು ಪಿಎಂ ಮೋದಿ ಸಲಹೆ, ದೇಶದ ಐಟಿ ಹಬ್ ಬೆಂಗಳೂರಿನ ಪ್ರತಿಕ್ರಿಯೆ ಏನು?

Published : May 12, 2026, 06:42 PM IST

ಏರುತ್ತಿರುವ ಇಂಧನ ಬೆಲೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು 'ವರ್ಕ್ ಫ್ರಮ್ ಹೋಂ'ಗೆ ಕರೆ ನೀಡಿದ್ದಾರೆ. ಈ ಸಲಹೆಯು ಬೆಂಗಳೂರಿನ ತೀವ್ರ ಸಂಚಾರ ದಟ್ಟಣೆಯ ಸಮಸ್ಯೆಗೆ ಪರಿಹಾರವಾಗಬಹುದೇ ಎಂಬ ಚರ್ಚೆ ಹುಟ್ಟುಹಾಕಿದ್ದು, ಕಂಪನಿಗಳ 'ವರ್ಕ್ ಫ್ರಮ್ ಆಫೀಸ್' ನೀತಿಗಳು ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದ ಆತಂಕ.

PREV
17
ವರ್ಕ್ ಫ್ರಮ್ ಹೋಂ ಸಲಹೆ ನೀಡಿದ ಪ್ರಧಾನಿ

ಮೇ 10ರಂದು Hyderabad ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಪಶ್ಚಿಮ ಏಷ್ಯಾದ ತೈಲ ಬಿಕ್ಕಟ್ಟು ಮತ್ತು ಏರಿಕೆಯಾಗುತ್ತಿರುವ ಇಂಧನ ಬೆಲೆಗಳ ಹಿನ್ನೆಲೆ ಭಾರತೀಯರು ಆರ್ಥಿಕ ಹಾಗೂ ರಾಷ್ಟ್ರೀಯ ಜವಾಬ್ದಾರಿಯನ್ನು ಮನಗಂಡು ಜೀವನಶೈಲಿಯಲ್ಲಿ ಬದಲಾವಣೆ ತರಬೇಕು ಎಂದು ಕರೆ ನೀಡಿದರು. ವಿಶೇಷವಾಗಿ, ಮನೆಯಿಂದ ಕೆಲಸ (Work From Home), ವರ್ಚುವಲ್ ಸಭೆಗಳು ಹಾಗೂ ಆನ್‌ಲೈನ್ ಸಮ್ಮೇಳನಗಳನ್ನು ಪುನಃ ಜಾರಿಗೆ ತರಬೇಕೆಂದು ಹೇಳಿದರು.

27
ಜಾಗತಿಕ ಅಶಾಂತಿ, ತೈಲ ಬೆಲೆ ಏರಿಕೆ

ಅಮೆರಿಕಾ-ಇರಾನ್ ನಡುವಿನ ಸಂಘರ್ಷದಿಂದ ಉಂಟಾದ ಜಾಗತಿಕ ಅಶಾಂತಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಗಣನೀಯವಾಗಿ ಏರಿಸಿದೆ. ಇದರಿಂದ ಮನೆಯ ಖರ್ಚು ಮಾತ್ರವಲ್ಲದೆ ದೇಶದ ಆರ್ಥಿಕ ವ್ಯವಸ್ಥೆಯ ಮೇಲೂ ಹೆಚ್ಚುವರಿ ಒತ್ತಡ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಅನಾವಶ್ಯಕ ಪ್ರಯಾಣವನ್ನು ಕಡಿಮೆ ಮಾಡಿ, ವಿದೇಶಿ ವಿನಿಮಯ ಉಳಿಸುವುದು ಅತ್ಯಂತ ಅಗತ್ಯವೆಂದು ಪ್ರಧಾನಿ ಹೇಳಿದರು. ಕೋವಿಡ್ ಅವಧಿಯಲ್ಲಿ ಭಾರತವು ಹೊಸ ಕೆಲಸದ ವಿಧಾನಗಳಿಗೆ ಯಶಸ್ವಿಯಾಗಿ ಹೊಂದಿಕೊಂಡಿದ್ದುದನ್ನು ನೆನಪಿಸಿಕೊಂಡ ಅವರು, ಅದೇ ಮಾದರಿಯನ್ನು ಮತ್ತೆ ಅಳವಡಿಸಿಕೊಂಡರೆ ಆರ್ಥಿಕ ಒತ್ತಡವನ್ನು ತಗ್ಗಿಸಲು ಸಾಧ್ಯವೆಂದು ತಿಳಿಸಿದರು.

37
ಬೆಂಗಳೂರಿಗೆ ವರ್ಕ್ ಫ್ರಮ್ ಕರೆ ಹೊಸದಲ್ಲ

ಭಾರತದ ಐಟಿ ರಾಜಧಾನಿಯಾದ ಬೆಂಗಳೂರಿಗೆ ಈ ಕರೆ ಹೊಸದಾಗಿ ಕಾಣಿಸಲಿಲ್ಲ. ನಗರದ ಉದ್ಯೋಗಿಗಳು ಸಂಚಾರ ಸಮಸ್ಯೆಯ ತೀವ್ರತೆಯನ್ನು ವರ್ಷಗಳಿಂದ ಅನುಭವಿಸುತ್ತಿದ್ದಾರೆ. ಹೀಗಾಗಿ ಮನೆಯಿಂದ ಕೆಲಸ ಬಯಸುತ್ತಲೇ ಇದ್ದಾರೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ ಸರಾಸರಿ ಏಕಮುಖ ಪ್ರಯಾಣ ಸಮಯವು ಕೇವಲ ಒಂದು ವರ್ಷದಲ್ಲಿ 54 ನಿಮಿಷಗಳಿಂದ 63 ನಿಮಿಷಗಳಿಗೆ ಏರಿಕೆಯಾಗಿದೆ. ಅಂದರೆ ಸುಮಾರು 19 ಕಿ.ಮೀ ದೂರ ಕ್ರಮಿಸಲು ದಿನಕ್ಕೆ ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ರಸ್ತೆಯಲ್ಲೇ ಕಳೆಯಬೇಕಾಗಿದೆ.

47
ಆಫೀಸಿನಿಂದಲೇ ಕೆಲಸ ನೀತಿ ಕಟ್ಟುನಿಟ್ಟು

ವಾರ್ಷಿಕವಾಗಿ ಒಬ್ಬ ಉದ್ಯೋಗಿ ಸುಮಾರು 754 ಗಂಟೆಗಳ ಕಾಲ ಸಂಚಾರದಲ್ಲೇ ಕಳೆಯುತ್ತಾನೆ. ಇದು ಸುಮಾರು 68 ಕೆಲಸದ ದಿನಗಳಿಗೆ ಸಮಾನವಾಗಿದೆ. 2025ರ ಟೋಮ್ ಟೋಮ್ ಸಂಚಾರ ಸೂಚ್ಯಂಕದ ಪ್ರಕಾರ, ಟ್ರಾಫಿಕ್ ದಟ್ಟಣೆಯಿಂದ ಪ್ರಯಾಣಿಕರು 168 ಗಂಟೆಗಳಷ್ಟು ಸಮಯ ಕಳೆದುಕೊಂಡಿದ್ದಾರೆ. ಪೀಕ್ ಅವರ್‌ನಲ್ಲಿ ಕೇವಲ 10 ಕಿ.ಮೀ ಪ್ರಯಾಣಕ್ಕೂ 45 ನಿಮಿಷ ಬೇಕಾಗುತ್ತದೆ, ಇದು ನಗರದ ಟ್ರಾಫಿಕ್ ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.

ಕಂಪನಿಗಳು “Work From Office” (WFO) ನೀತಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. 2025ರ ಜೂನ್ ತಿಂಗಳಲ್ಲಿ ಹೊರ ವರ್ತುಲ ರಸ್ತೆ (ORR) ಪ್ರದೇಶದ ಪ್ರಮುಖ ಟೆಕ್ ಪಾರ್ಕ್‌ಗಳಲ್ಲಿ ವಾಹನಗಳ ಸಂಖ್ಯೆ ಶೇ.45ರಷ್ಟು ಏರಿಕೆಯಾಗಿದೆ. ಒಂದೇ ದಿನದಲ್ಲಿ 1.2 ಲಕ್ಷಕ್ಕೂ ಹೆಚ್ಚು ವಾಹನಗಳು ಆ ಭಾಗದಲ್ಲಿ ಸಂಚರಿಸಿರುವುದು ದಾಖಲಾಗಿದೆ.

57
ಮನೆಯಿಂದ ಕೆಲಸ ಹೈಬ್ರಿಡ್ ಮಾದರಿ ಶಿಫಾರಸ್ಸು ಮಾಡಿದ್ದ ಸಂಚಾರ ಪೊಲೀಸರು

ಇದರಿಂದ ಬೆಂಗಳೂರು ಉದ್ಯೋಗಿಗಳ ಮನೋಭಾವ ಸ್ಪಷ್ಟವಾಗಿದೆ. ಅವರು ಕಚೇರಿಗೆ ವಿರೋಧಿಗಳಲ್ಲ, ಆದರೆ ಅನಾವಶ್ಯಕ ಸಂಚಾರಕ್ಕೆ ವಿರೋಧಿಗಳಾಗಿದ್ದಾರೆ. ಹೆಚ್ಚಿನವರು ಹೈಬ್ರಿಡ್ ಮಾದರಿಯನ್ನು ಬಯಸುತ್ತಾರೆ. ಸಂಪೂರ್ಣವಾಗಿ ಕಚೇರಿ ಅಥವಾ ಸಂಪೂರ್ಣವಾಗಿ ಮನೆಯಿಂದ ಕೆಲಸ ಎಂಬುದರಲ್ಲಿ ಯಾವುದನ್ನೂ ಅವರು ಕಡ್ಡಾಯವಾಗಿ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅವರಿಗೆ ಮುಖ್ಯವಾಗಿ ಬೇಕಾಗಿರುವುದು “ಆಯ್ಕೆ” ಮತ್ತು “ನಮ್ಯತೆ”.

ಈ ವಿಚಾರವನ್ನು ಬೆಂಗಳೂರು ಈಗಾಗಲೇ ಅಧಿಕೃತವಾಗಿ ಪ್ರಸ್ತಾಪಿಸಿದೆ. ಕಳೆದ ವರ್ಷ ನಗರ ಸಂಚಾರ ಪೊಲೀಸರು ವಾರದ ಮಧ್ಯದಲ್ಲಿ “Work From Home” ಜಾರಿಗೆ ತರಲು ಸಲಹೆ ನೀಡಿದ್ದರು. ಬಿಬಿಎಂಪಿ, ಬಿಎಂಟಿಸಿ ಮತ್ತು ಐಟಿ ಕ್ಷೇತ್ರದ ಪ್ರತಿನಿಧಿಗಳ ಸಹಕಾರದಲ್ಲಿ ಈ ಪ್ರಸ್ತಾವನೆ ರೂಪುಗೊಂಡಿದ್ದರೂ, ಅದು ಅನುಷ್ಠಾನಕ್ಕೆ ಬರಲಿಲ್ಲ.

67
ರಿಯಲ್ ಎಸ್ಟೇಟ್ ಬೇಡಿಕೆ ಕುಸಿಯುವ ಸಾಧ್ಯತೆ

ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಆರ್ಥಿಕ ವ್ಯವಸ್ಥೆಯ ಇನ್ನೊಂದು ಮುಖ ರಿಯಲ್ ಎಸ್ಟೇಟ್ ಕಾಣುತ್ತದೆ. ವೈಟ್‌ಫೀಲ್ಡ್, ಮಾರತ್ತಹಳ್ಳಿ, ಎಚ್‌ಎಸ್‌ಆರ್ ಲೇಔಟ್ ಮತ್ತು ಕೋರಮಂಗಲ ಪ್ರದೇಶಗಳಲ್ಲಿ ಬಾಡಿಗೆ ಮನೆಗಳ ಬೇಡಿಕೆ ಬಹುತೇಕ ಕಚೇರಿ ಹಾಜರಾತಿಗೆ ಅವಲಂಬಿತವಾಗಿದೆ. ಮನೆಯಿಂದ ಕೆಲಸ ಹೆಚ್ಚಾದರೆ ಈ ಬೇಡಿಕೆ ಕುಸಿಯುವ ಸಾಧ್ಯತೆ ಇದೆ, ಇದರಿಂದ ವಾಣಿಜ್ಯ ಮತ್ತು ನಿವಾಸಿ ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ಪರಿಣಾಮ ಬೀಳಬಹುದು.

ಆದರೆ ಮತ್ತೊಂದೆಡೆ, ಮನೆಯಿಂದ ಕೆಲಸ ಅಥವಾ ಹೈಬ್ರಿಡ್ ಮಾದರಿ ಜಾರಿಯಾದರೆ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆ ಇದೆ. ಕೇವಲ 20-30% ಪ್ರಯಾಣಿಕರು ಕಡಿಮೆಯಾದರೂ ನಗರದ ಮುಖ್ಯ ರಸ್ತೆಗಳಲ್ಲಿ ಒತ್ತಡ ಕಡಿಮೆಯಾಗಬಹುದು, ಇಂಧನ ಬಳಕೆ ಇಳಿಯಬಹುದು ಮತ್ತು ವಾಯು ಮಾಲಿನ್ಯವೂ ತಗ್ಗಬಹುದು. ಇದು ಪ್ರಧಾನಿಯವರ ರಾಷ್ಟ್ರೀಯ ಮಟ್ಟದ ಆರ್ಥಿಕ ಉದ್ದೇಶಗಳಿಗೂ ಸಹಕಾರಿಯಾಗುತ್ತದೆ.

77
ಕಂಪನಿಗಳು ಮೋದಿ ಹೇಳಿರುವ ಬದಲಾವಣೆಗೆ ಸಿದ್ಧವೆಯೇ?

ಇದೀಗ ಪ್ರಮುಖ ಪ್ರಶ್ನೆ ಏನೆಂದರೆ ಕಂಪನಿಗಳು ಈ ಬದಲಾವಣೆಗೆ ಸಿದ್ಧವೆಯೇ? 2022ರಿಂದ ಅನೇಕ ದೊಡ್ಡ ಐಟಿ ಕಂಪನಿಗಳು ಹಾಗೂ ಬಹುರಾಷ್ಟ್ರೀಯ ಸಂಸ್ಥೆಗಳು ಶಾಶ್ವತ ಮನೆಯಿಂದಲೇ ಕೆಲಸ ನೀತಿಗೆ ವಿರೋಧ ವ್ಯಕ್ತಪಡಿಸುತ್ತಿವೆ. ಉತ್ಪಾದಕತೆ, ತಂಡದ ಸಮನ್ವಯತೆ ಮತ್ತು ನಿರ್ವಹಣಾ ಸವಾಲುಗಳನ್ನು ಕಾರಣವಾಗಿ ಉಲ್ಲೇಖಿಸುತ್ತಿವೆ. ಆದರೆ ಉದ್ಯೋಗಿಗಳ ಅಭಿಪ್ರಾಯದಲ್ಲಿ, ಇದು ಉತ್ಪಾದಕತೆಯ ಪ್ರಶ್ನೆಯಿಗಿಂತ ನಿಯಂತ್ರಣದ ಪ್ರಶ್ನೆಯಾಗಿದೆ.

ಒಟ್ಟಿನಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಈ ಹೊಸ ಕರೆ ಕೇವಲ ಆರ್ಥಿಕ ಸಲಹೆಯಲ್ಲ ಅದು ದೇಶದ ಭವಿಷ್ಯವನ್ನು ರೂಪಿಸುವ ಮಾರ್ಗದರ್ಶಿಯಾಗಿದೆ. ಆದರೆ ಈ ಕರೆ ವಾಸ್ತವಿಕವಾಗಿ ಫಲ ನೀಡಬೇಕಾದರೆ, ಸರ್ಕಾರ, ಕಂಪನಿಗಳು ಮತ್ತು ಜನರು ಒಟ್ಟಾಗಿ ಹೆಜ್ಜೆ ಹಾಕಬೇಕಾಗಿದೆ. ಇಂದಿನ ಪರಿಸ್ಥಿತಿಯಲ್ಲಿ, ಬೆಂಗಳೂರು ಉದ್ಯೋಗಿಗಳು ಈ ಬದಲಾವಣೆಯನ್ನು ನಿರೀಕ್ಷಿಸುತ್ತಾ ಇನ್ನೂ ಟ್ರಾಫಿಕ್‌ನಲ್ಲೇ ಸಿಲುಕಿಕೊಂಡಿದ್ದಾರೆ.

Read more Photos on
click me!

Recommended Stories