Nagamale Darshan: ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ದರ್ಶನಕ್ಕೆ ಚಿರತೆ ದಾಳಿಯ ಬಳಿಕ ವಿಧಿಸಲಾದ ನಿರ್ಬಂಧ ಇನ್ನೂ ತೆರವಾಗಿಲ್ಲ. ಎರಡು ಚಿರತೆಗಳು ಸೆರೆ ಸಿಕ್ಕಿದ್ದರೂ ಪ್ರವೇಶಕ್ಕೆ ಅವಕಾಶ ನೀಡದ ಹಿನ್ನೆಲೆ ಭಕ್ತರು ಪ್ರಶ್ನೆ ಎತ್ತಿದ್ದಾರೆ.
ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಜೂ.23): ಅದು ಕಾಡೊಳಗಿನ ಪ್ರದೇಶ, ನಿತ್ಯ ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದವರು ನಾಗಮಲೆಗೂ ಹೋಗೋದು ಕೂಡ ಪ್ರತೀತಿ. ಬೆಂಗಳೂರು ಮೂಲದ ಬಾಲಕನನ್ನು ಪೋಷಕರ ಕಣ್ಣೇದುರೆ ಚಿರತೆ ಎಳೆದೊಯ್ದು ಕೊಂದು ಹಾಕಿತು. ಈ ಪ್ರಕರಣದ ಬೆನ್ನಲ್ಲೇ ಅರಣ್ಯ ಇಲಾಖೆ ನಾಗಮಲೆ ಚಾರಣಕ್ಕೆ ಬ್ರೇಕ್ ಹಾಕಿದೆ. ಇನ್ನೂ ಅವಕಾಶ ಕೊಡದ ಹಿನ್ನಲೆ ನಾಗಮಲೆ ದರ್ಶನ ಭಾಗ್ಯ ಯಾವಾಗ ಎಂದು ಭಕ್ತರು ಪ್ರಶ್ನೆ ಮಾಡ್ತಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..
24
ಭಕ್ತರ ರೂಢಿ
ಅದು ಕೋಟ್ಯಾಂತರ ಭಕ್ತರ ಆರಾಧ್ಯ ದೈವನ ಸನ್ನಿಧಿ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರು ನಾಗಮಲೆಗೆ ಹೋಗಿ ಪೂಜೆ ಮಾಡಿ ಬರೋದು ಪ್ರತೀತಿ. ಬಹಳ ಕಾಲದಿಂದಲೂ ಈ ಪದ್ದತಿಯನ್ನು ಭಕ್ತರು ರೂಢಿಸಿಕೊಂಡು ಬಂದಿದ್ದಾರೆ. ಆದ್ರೆ ಕಳೆದ ತಿಂಗಳು ಮಾದಪ್ಪನ ಬೆಟ್ಟದಿಂದ ನಾಗಮಲೆಗೆ ದರ್ಶನಕ್ಕೆ ಹೋಗ್ತಿದ್ದ ಬೆಂಗಳೂರು ಮೂಲದ ಪೋಷಕರ ಕಣ್ಣೇದುರೆ ಚಿರತೆ ಬಾಲಕನನ್ನು ಎಳೆದೊಯ್ದು ಕೊಂದು ಹಾಕಿತ್ತು. ತದಾನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ನಾಗಮಲೆ ಹೋಗಲೂ ತಾತ್ಕಾಲಿಕ ಬ್ರೇಕ್ ಹಾಕಿದರು. ಈ ಘಟನೆ ನಡೆದು ಒಂದು ತಿಂಗಳು ಕಳೆದು ಹೋಗಿದೆ.
34
ಸ್ಥಳೀಯರಿಂದ ಆತಂಕ
ಅಲ್ಲದೇ ಮಹದೇಶ್ವರ ಬೆಟ್ಟದ ನಾಗಮಲೆ ಹಾಗೂ ಬಾಲಕನನ್ನು ಕೊಂದ ಸ್ಥಳದಲ್ಲೇ ಎರಡು ಚಿರತೆ ಕೂಡ ಸೆರೆಸಿಕ್ಕಿವೆ. ಆದರೂ ಕೂಡ ಮಾದಪ್ಪನ ಭಕ್ತರಿಗೆ ನಾಗಮಲೆಗೆ ದರ್ಶನಕ್ಕೆ ಹೋಗಲು ಅವಕಾಶ ಕೊಡ್ತಿಲ್ಲ. ಬಂದವರು ಬರಿಗೈಯಲ್ಲಿ ವಾಪಾಸ್ ಆಗುವ ಪರಿಸ್ಥಿತಿಯಿದೆ. ಇನ್ನೂ ನಾಗಮಲೆಗೆ ಪ್ರವೇಶಾವಕಾಶ ಕಲ್ಪಿಸುವ ಬಗ್ಗೆ ಅರಣ್ಯ ಇಲಾಖೆ ಚಂತನೆ ನಡೆಸ್ತಿದೆ. ಈ ಮಧ್ಯೆ ಎರಡು ಚಿರತೆ ಸಿಕ್ಕ ಬಳಿಕವೂ ಇದು ಅರಣ್ಯ ಪ್ರದೇಶವಾದ ಹಿನ್ನಲೆ ಹುಲಿ, ಚಿರತೆ ಸಂಚಾರವಿದೆ. ಮತ್ತೇ ಪ್ರವೇಶಾವಕಾಶ ಕೊಟ್ಟರೆ ಭಕ್ತರಿಗೆ ತೊಂದರೆಯಾಗುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಆದ್ರೆ ಅರಣ್ಯಾಧಿಕಾರಿಗಳು ಕಾವೇರಿ ವನ್ಯಧಾಮ ಹಾಗೂ ಮಲೆ ಮಹದೇಶ್ವರ ವನ್ಯಧಾಮ ಇಬ್ಬರು ಸೇರಿ ನಾಗಮಲೆಗೆ ಪ್ರವೇಶ ಕೊಡುವ ಬಗ್ಗೆ ಹಾಗೂ ಯಾವೆಲ್ಲಾ ಮಾರ್ಗದರ್ಶಿ ಗಳನ್ನು ರೂಪಿಸಬೇಕು ಅನ್ನೋ ಬಗ್ಗೆ ಶೀಘ್ರವೇ ಸಭೆ ನಡೆಸಿ ಅವಕಾಶ ಕೊಡಲಾಗುತ್ತದೆ ಅನ್ನೋ ಉತ್ತರ ಕೊಡ್ತಿದ್ದಾರೆ. ಒಟ್ನಲ್ಲಿ ದೇವರ ದರ್ಶನಕ್ಕೆ ಹೋಗ್ತಿದ್ದ ಬಾಲಕನನ್ನು ಚಿರತೆ ಪೋಷಕರ ಕಣ್ಣೆದುರೇ ಕೊಂದು ಹಾಕಿದ ಬಳಿಕ ಈ ಅರಣ್ಯ ಪ್ರದೇಶದಲ್ಲಿ ಭಯದಿಂದಲೇ ಓಡಾಡಬೇಕಾದ ಪರಿಸ್ಥಿತಿ ಸ್ಥಳೀಯರಿಗೆ ಎದುರಾಗಿದೆ. ನಾಗಮಲೆಗೆ ಹೋಗುವ ಭಕ್ತರು ಬಂದು ವಾಪಾಸ್ ಆಗ್ತಿದ್ದು, ಯಾವ ಗೈಡ್ ಲೈನ್ಸ್ ರೂಪಿಸಿ ನಾಗಮಲೆಗೆ ಅವಕಾಶ ಕೊಡ್ತಾರೆ ಅನ್ನೋದ್ನ ಕಾದುನೋಡಬೇಕಾಗಿದೆ.