ಮುಂಡಗೋಡ ಅರಣ್ಯದಲ್ಲಿ ತಲೆ ಕತ್ತರಿಸಿದ ಮಹಿಳೆಯ ಬೆ*ತ್ತಲೆ ಶವ ಪತ್ತೆ; ಗುರುತು ಪತ್ತೆಗೆ ಪೊಲೀಸರ ಪರದಾಟ!

Published : Feb 21, 2026, 08:12 PM IST

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಅರಣ್ಯದಲ್ಲಿ ರುಂಡವಿಲ್ಲದ, ಬೆತ್ತಲೆ ಸ್ಥಿತಿಯಲ್ಲಿದ್ದ ಮಹಿಳೆಯ ಶವ ಪತ್ತೆಯಾಗಿದೆ. ಬೇರೆಡೆ ಕೊಲೆ ಮಾಡಿ ದೇಹವನ್ನು ಇಲ್ಲಿ ಎಸೆದಿರಬಹುದೆಂದು ಪೊಲೀಸರು ಶಂಕಿಸಿದ್ದು, ಮೃತ ಮಹಿಳೆಯ ಗುರುತು ಪತ್ತೆ ಹಚ್ಚಲು ಹಾಗೂ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

PREV
14

ಉತ್ತರ ಕನ್ನಡ (ಫೆ.21): ಜಿಲ್ಲೆಯ ಮುಂಡಗೋಡ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಅತ್ಯಂತ ಭೀಕರ ಹಾಗೂ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ. ಕಾಡಿನ ಮಧ್ಯೆ ರುಂಡವಿಲ್ಲದ ಹಾಗೂ ಸಂಪೂರ್ಣ ಬೆತ್ತಲೆ ಸ್ಥಿತಿಯಲ್ಲಿದ್ದ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಈ ಕ್ರೂರ ಹತ್ಯೆಯ ಹಿಂದೆ ವ್ಯವಸ್ಥಿತ ಸಂಚು ಇರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯ ವಿವರ:

ಮುಂಡಗೋಡ ತಾಲೂಕಿನ ಕೊಳಗಿ ಅರಣ್ಯ ಪ್ರದೇಶದಲ್ಲಿ ನಿನ್ನೆ ಸಂಜೆ ಈ ಭಯಾನಕ ದೃಶ್ಯ ಪತ್ತೆಯಾಗಿದೆ. ಕಾಡಿನ ದಾರಿಯಲ್ಲಿ ಹೋಗುತ್ತಿದ್ದವರಿಗೆ ಮಹಿಳೆಯ ಮೃತದೇಹ ಕಂಡುಬಂದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಮಹಿಳೆಯ ದೇಹವಷ್ಟೇ ಸಿಕ್ಕಿದ್ದು, ಆಕೆಯ ರುಂಡ (ತಲೆ) ನಾಪತ್ತೆಯಾಗಿತ್ತು. ಅಷ್ಟೇ ಅಲ್ಲದೆ, ಮೃತದೇಹದ ಮೇಲೆ ಯಾವುದೇ ಬಟ್ಟೆಗಳಿಲ್ಲದೆ ಬೆತ್ತಲೆ ಸ್ಥಿತಿಯಲ್ಲಿ ಎಸೆದು ಹೋಗಲಾಗಿತ್ತು.

24

ಬೇರೆಡೆ ಹತ್ಯೆ ಮಾಡಿ ಇಲ್ಲಿ ಎಸೆದಿರುವ ಶಂಕೆ:

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಎಂ.ಎನ್ ಇಂದು ಸ್ಥಳಕ್ಕೆ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ತನಿಖೆಯ ಪ್ರಕಾರ, ಮಹಿಳೆಯನ್ನು ಸುಮಾರು ಎರಡು ದಿನಗಳ ಹಿಂದೆಯೇ ಹತ್ಯೆ ಮಾಡಿರುವ ಸಾಧ್ಯತೆಯಿದೆ. ಕೊಲೆಗಾರರು ಮಹಿಳೆಯನ್ನು ಯಾವುದೋ ಬೇರೆ ಸ್ಥಳದಲ್ಲಿ ಕೊಂದು, ಗುರುತು ಪತ್ತೆಯಾಗಬಾರದು ಎಂಬ ಉದ್ದೇಶದಿಂದ ರುಂಡವನ್ನು ಬೇರ್ಪಡಿಸಿ, ದೇಹವನ್ನು ಮಾತ್ರ ಈ ನಿರ್ಜನ ಅರಣ್ಯ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ ಎಂದು ಶಂಕಿಸಲಾಗಿದೆ.

34

ಪೊಲೀಸರಿಗೆ ಸವಾಲಾದ ಗುರುತು ಪತ್ತೆ:

ಈ ಪ್ರಕರಣದಲ್ಲಿ ಪೊಲೀಸರಿಗೆ ಎದುರಾಗಿರುವ ಅತಿದೊಡ್ಡ ಸವಾಲೆಂದರೆ ಮೃತ ಮಹಿಳೆಯ ಗುರುತು ಪತ್ತೆ ಹಚ್ಚುವುದು. ತಲೆ ಇಲ್ಲದಿರುವುದರಿಂದ ಮುಖ ನೋಡಿ ಗುರುತಿಸುವುದು ಅಸಾಧ್ಯವಾಗಿದೆ. ಅಚ್ಚರಿಯ ವಿಷಯವೆಂದರೆ, ಜಿಲ್ಲೆಯ ಅಥವಾ ನೆರೆಯ ಜಿಲ್ಲೆಗಳ ಯಾವುದೇ ಪೊಲೀಸ್ ಠಾಣೆಯಲ್ಲೂ ಇತ್ತೀಚಿನ ದಿನಗಳಲ್ಲಿ ಮಹಿಳೆಯೊಬ್ಬರು ನಾಪತ್ತೆಯಾದ ಬಗ್ಗೆ (Missing Complaint) ದೂರು ದಾಖಲಾಗಿಲ್ಲ. ಇದು ತನಿಖಾ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

44

ಆರೋಪಿಗಳಿಗಾಗಿ ಬಲೆ:

ಈ ಭೀಕರ ಕೃತ್ಯದಲ್ಲಿ ಎರಡಕ್ಕಿಂತ ಹೆಚ್ಚು ಜನರು ಶಾಮೀಲಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ (ಗುನ್ನಾ ನಂ: 42/2026) ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 103(1) ಹಾಗೂ 238(ಎ) ಅಡಿಯಲ್ಲಿ ತನಿಖೆ ಕೈಗೊಳ್ಳಲಾಗಿದೆ. ಸ್ಥಳೀಯವಾಗಿ ಯಾರಾದರೂ ಕಾಣೆಯಾಗಿದ್ದಾರೆಯೇ ಅಥವಾ ಹೊರಗಿನಿಂದ ಯಾರಾದರೂ ಬಂದಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಇಂತಹ ಪೈಶಾಚಿಕ ಕೊಲೆ ನಡೆದಿರುವುದು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದೆ. ಹಂತಕರನ್ನು ಶೀಘ್ರವಾಗಿ ಬಂಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Read more Photos on
click me!

Recommended Stories