
ಕೃಷ್ಣರಾಜಸಾಗರ ಜಲಾಶಯ (ಕನ್ನಂಬಾಡಿ) ನಿರ್ಮಾಣಕ್ಕೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದು ಈಗ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಕೆಆರ್ಎಸ್ ಗೇಟ್ ಹೆಬ್ಬಾಗಿಲಿನಲ್ಲಿ ಈಗಲೂ ಟಿಪ್ಪು ಸುಲ್ತಾನ್ ಅವರು ಅಣೆಕಟ್ಟೆಗೆ ಅಡಿಗಲ್ಲು ಹಾಕಿರುವುದನ್ನು ಕಾಣಬಹುದು ಎಂದು ಹೇಳಿ ಮೈಸೂರು ರಾಜರ್ಷಿ ನಾಲ್ವಡಿ ಒಡೆಯರ್ ಪುಣ್ಯ ಸ್ಮರಣೆಯಂದು ಸಚಿವರು ನೀಡಿದ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಚರ್ಚೆ ಜೊತೆಗೆ ವಿವಿಧ ಅಭಿಪ್ರಾಯಗಳು ಕೂಡ ಕೇಳಿಬಂದಿದೆ.
ಈ ಹೇಳಿಕೆಯನ್ನು ಆಧರಿಸಿ ಸ್ಥಳೀಯ ನಾಗರಿಕರು ಮತ್ತು ಸಂಸ್ಕೃತಿಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.ಕೆಆರ್ಎಸ್ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಪರ್ಷಿಯನ್ ಭಾಷೆಯಲ್ಲಿರುವ ಅಡಿಗಲ್ಲಿನ ಬಗ್ಗೆ ಕೂಡ ವಿರೋಧ ವ್ಯಕ್ತವಾಗುತ್ತಿದೆ. ಆ ಅಡಿಗಲ್ಲಿನಲ್ಲಿ ಕನ್ನಂಬಾಡಿ ಅಣೆಕಟ್ಟೆ ಅಥವಾ ಟಿಪ್ಪು ಸುಲ್ತಾನ್ ಕುರಿತಾದ ಯಾವುದೇ ಉಲ್ಲೇಖವೇ ಇಲ್ಲ. ಬದಲಿಗೆ, ಅದರಲ್ಲಿರುವ ಲಿಪಿಯಲ್ಲಿ ಇರಾನ್ ದೇಶದ ಸಿಹಿ ಗೆಣಸು (ಶಕ್ಕರ್) ಮಾರಕಟ್ಟೆಯ ಕುರಿತು ಉಲ್ಲೇಖವಿದೆ. ಆ ಅಡಿಗಲ್ಲಿಗೂ ಕೆಆರ್ಎಸ್ ಡ್ಯಾಂಗೂ ಯಾವುದೇ ಸಂಬಂಧ ಇಲ್ಲ. ಮೈಸೂರು ಒಡೆಯರ್ ಅವರ ಹೆಸರು ಮರೆಮಾಚಲು ಪರ್ಷಿಯನ್ ಅಡಿಗಲ್ಲು ಹಾಕಲಾಗಿದೆ. ಕೂಡಲೇ ಆ ಅಡಿಗಲ್ಲು ತೆರವುಗೊಳಿಸಬೇಕೆಂದು ಒಂದು ವರ್ಷದ ಹಿಂದೆಯೇ ಜಿಲ್ಲಾಧಿಕಾರಿಗೆ ಬಿಜೆಪಿ ಕಾರ್ಯಕರ್ತ ಸಿ.ಟಿ.ಮಂಜು ಮನವಿ ನೀಡಿದ್ದರು. ಸ್ಥಳೀಯರು ಆ ಅಡಿಗಲ್ಲಿನ ಅಸ್ತಿತ್ವವನ್ನೇ ಪ್ರಶ್ನಿಸುತ್ತಿದ್ದು, ಅದು ಕೇವಲ ಮೈಸೂರು ಒಡೆಯರ್ಗಳ ಭೂಮಿಕೆಯನ್ನು ಮರೆಮಾಡುವ ಉದ್ದೇಶದಿಂದ ಹಾಕಲಾಗಿದೆ ಎಂದು ಆರೋಪಿಸುತ್ತಿದ್ದಾರೆ
ಪ್ರಸಿದ್ಧ ಕೆಆರ್ಎಸ್ (ಕೃಷ್ಣರಾಜ ಸಾಗರ) ಅಣೆಕಟ್ಟೆಗೆ ಸಂಬಂಧಿಸಿದಂತೆ ಟಿಪ್ಪು ಸುಲ್ತಾನ್ ಶಂಕುಸ್ಥಾಪನೆ ಮಾಡಿದ್ದರು ಎಂಬ ವಿವಾದದ ಕುರಿತು ಇದೀಗ ಚರ್ಚೆ ತೀವ್ರಗೊಂಡಿದೆ. ಈ ನಡುವೆ "ಕೆಆರ್ಎಸ್ ನಾಲ್ವಡಿ ಕೃಷ್ಣರಾಜ ಒಡೆಯರ್ರ ದೂರದೃಷ್ಟಿಯ ಫಲವೋ ಅಥವಾ ಟಿಪ್ಪು ಸುಲ್ತಾನ್ ಅವರ ಆರಂಭಿಕ ಯೋಜನೆಯೋ?" ಎಂಬ ಪ್ರಶ್ನೆ ಮೂಡಿದೆ. ಈ ವಿವಾದದ ಕೇಂದ್ರಬಿಂದುವಾಗಿರುವುದು ಒಂದು ಶಾಸನ. ಡ್ಯಾಂನ ಪಶ್ಚಿಮ ದ್ವಾರದಲ್ಲಿ ಅಳವಡಿಸಲಾದ ಈ ಶಾಸನಗಳಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರದ ಕೆಳಭಾಗದಲ್ಲಿ ಮೂರು ಶಿಲಾಲಿಖಿತ ಕಲ್ಲುಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಅವುಗಳಲ್ಲಿ ಕನ್ನಡ, ಇಂಗ್ಲಿಷ್ ಮತ್ತು ಪರ್ಷಿಯನ್ ಭಾಷೆಗಳಲ್ಲಿ ಬರೆಯಲಾಗಿದೆ.
ಈ ಶಾಸನಗಳಲ್ಲಿ, 1794ರಲ್ಲಿ ಟಿಪ್ಪು ಸುಲ್ತಾನ್ ಅವರು 'ಮೋಹಿ ಡ್ಯಾಂ' ಹೆಸರಿನಲ್ಲಿ ಒಂದು ಅಣೆಕಟ್ಟು ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿದ್ದರು ಎಂಬ ಉಲ್ಲೇಖವಿದೆ. ಇದು ಕೆಆರ್ಎಸ್ ಅಣೆಕಟ್ಟಿಗೆ ಅಡಿಗಲ್ಲು ಹಾಕಲಾದ 117 ವರ್ಷಗಳ ಹಿಂದಿನದ್ದಾಗಿದೆ ಎನ್ನಲಾಗಿದೆ. ಅಲ್ಲದೆ, "ರಾಜಧಾನಿಯ ಪಶ್ಚಿಮ ದಿಕ್ಕಿಗೆ ಮೋಹಿ ಡ್ಯಾಂ ನಿರ್ಮಿಸಲು ಶಂಕುಸ್ಥಾಪನೆ ಮಾಡಲಾಗಿದೆ" ಎಂಬ ಉಲ್ಲೇಖವೂ ಆ ಶಾಸನಗಳಲ್ಲಿ ಕಾಣುತ್ತದೆ. ಈ ಶಾಸನಗಳನ್ನು ಕೆಆರ್ಎಸ್ ಡ್ಯಾಂದ ಮುಖ್ಯದ್ವಾರದಲ್ಲಿ ಅಳವಡಿಸಿದ್ದು ಯಾವ ಸಮಯದಲ್ಲಿ ಎಂಬುದರ ಕುರಿತು ಸ್ಪಷ್ಟತೆ ಇಲ್ಲ.ಆ ಶಾಸನಗಳಿಗೂ ಕನ್ನಂಬಾಡಿ ಅಣೆಕಟ್ಟೆಗೂ ಸಂಬಂಧ ಇದಿಯಾ? ಎಂಬ ಬಗ್ಗೆ ಕೂಡ ಸ್ಪಷ್ಟತೆ ಇಲ್ಲ.
ಕೆಆರ್ಎಸ್ಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂಬ ಸಚಿವ ಮಹಾದೇವಪ್ಪ ಹೇಳಿಕೆ ವಿಚಾರ ಜಲಾಶಯದಲ್ಲಿರುವ ಶಿಲಾಫಲಕದ ಬಗ್ಗೆ ಈಗ ಚರ್ಚೆ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಕೆಆರ್ಎಸ್ ಜಲಾಶಯದ ಮುಖ್ಯದ್ವಾರ ಬಳಿ ಏಷ್ಯಾನೆಟ್ ಸುವರ್ಣನ್ಯೂಸ್ ಪ್ರತಿನಿಧಿ ರಿಯಾಲಿಟಿ ಚೆಕ್ ಮಾಡಿದ್ದು, ಡ್ಯಾಂ ಮುಖ್ಯದ್ವಾರದಲ್ಲಿ ಟಿಪ್ಪು ಹೆಸರಿನಲ್ಲಿರುವ ಅಳವಡಿಸಿರುವ ಮೂರು ಶಿಲಾ ಫಲಕ ಇದೆ. ಶಾಸನಗಳು ಕನ್ನಡ, ಇಂಗ್ಲಿಷ್ ಹಾಗೂ ಪರ್ಶಿಯನ್ ಭಾಷೆಗಳಲ್ಲಿ ರಚಿಸಲ್ಪಟ್ಟಿವೆ. ಪರ್ಶಿಯನ್ ಭಾಷೆಯ ಶಾಸನವನ್ನು ಕನ್ನಡ ಹಾಗೂ ಇಂಗ್ಲಿಷ್ಗೆ ಭಾಷಾಂತರಿಸಿ, ಅದೇ ರಚನೆಯಂತೆ ಮೂರು ಶಿಲಾಫಲಕಗಳನ್ನು ಅಳವಡಿಸಲಾಗಿದೆ.
ಕನ್ನಡ, ಇಂಗ್ಲೀಷ್ ಹಾಗೂ ಪರ್ಶಿಯನ್ ಭಾಷೆಯಲ್ಲಿರುವ ಶಿಲಾಫಲಕ. ಈ ಶಾಸನಗಳ ಪ್ರಕಾರ, 1794ರಲ್ಲಿ ಟಿಪ್ಪು ಸುಲ್ತಾನ್ ‘ಮೋಹಿ ಡ್ಯಾಂ’ ಹೆಸರಿನಲ್ಲಿ ಒಂದು ಅಣೆಕಟ್ಟಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು ಎಂಬ ಮಾಹಿತಿ ದೊರೆಯುತ್ತದೆ. ಇದರೊಂದಿಗೆ, ಅವರು ಅಣೆಕಟ್ಟು ನಿರ್ಮಿಸುವ ಕನಸು ಹೊಂದಿದ್ದರು ಎನ್ನುವ ವಿವರಣೆಗೂ ಬಲಬಂದಿದೆ.ಟಿಪ್ಪು ಸುಲ್ತಾನ್ ಅಣೆಕಟ್ಟು ನಿರ್ಮಿಸಲು ಯೋಜನೆ ರೂಪಿಸಿದ್ದರೂ, ಅದು ಕಾರ್ಯರೂಪಕ್ಕೆ ಬಂದಿಲ್ಲ. ಇತ್ತ, ನಿಜವಾದ ಕೆಆರ್ಎಸ್ ಡ್ಯಾಂದ ನಿರ್ಮಾಣವು 1910–11ರ ಅವಧಿಯಲ್ಲಿ ಮೈಸೂರಿನ ದಿವಾನ್ ಸರ್ ಎಂ. ವಿಶ್ವೇಶ್ವರಯ್ಯ ಅವರ ತಾಂತ್ರಿಕ ನಿರ್ದೇಶನದಲ್ಲಿ ಪ್ರಾರಂಭವಾಯಿತು. ಆದರೆ ಕೆಆರ್ಎಸ್ಗೂ ಟಿಪ್ಪುಗೂ ಯಾವುದೇ ಸಂಬಂಧ ಇಲ್ಲ. ಟಿಪ್ಪು ಕನಸಿನ ಬಗ್ಗೆ ತಿಳಿದು ನಾಲ್ವಡಿ ಕೃಷ್ಣರಾಜ ಒಡೆಯರ್ ಶಿಲಾಫಲಕ ಅಳವಡಿಸಿ ಉದಾರತೆ ಮೆರೆದದ್ರು ಅನ್ನೋ ಬಗ್ಗೆ ಇತಿಹಾಸ ತಜ್ಞರ ಮಾಹಿತಿ. ಹೀಗಾಗಿ, ಟಿಪ್ಪು ಸುಲ್ತಾನ್ ಹಾಗೂ ಕೆಆರ್ಎಸ್ ಡ್ಯಾಂ ನೇರವಾಗಿ ಸಂಬಂಧ ಇಲ್ಲದಿದ್ದರೂ ಅವರು ಆಶಯಕ್ಕೆ ಗೌರವ ನೀಡಲಾಗಿದೆ ಎಂಬುದು ಸದ್ಯದ ಮಾಹಿತಿ
ಆಗಸ್ಟ್ 3ರಂದು ಶ್ರೀರಂಗಪಟ್ಟಣ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕನ್ನಂಬಾಡಿ ಅಣೆಕಟ್ಟೆ ನಿರ್ಮಿಸಲು ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದರೂ ಈ ವಿಷಯವನ್ನು ಹೇಳಲು ಯಾರಿಗೂ ಧೈರ್ಯವಿಲ್ಲ ಎಂದರು. ಕೆಆರ್ಎಸ್ ಗೇಟ್ ಹೆಬ್ಬಾಗಿಲಿನಲ್ಲಿ ಈಗಲೂ ಟಿಪ್ಪು ಸುಲ್ತಾನ್ ಅವರು ಅಣೆಕಟ್ಟೆಗೆ ಅಡಿಗಲ್ಲು ಹಾಕಿರುವುದನ್ನು ಕಾಣಬಹುದು ಎಂದು ಹೇಳಿ ಮೈಸೂರು ರಾಜರ್ಷಿ ನಾಲ್ವಡಿ ಒಡೆಯರ್ ಪುಣ್ಯ ಸ್ಮರಣೆಯಂದು ಸಚಿವರು ನೀಡಿದ ಈ ಹೇಳಿಕೆ ವಿವಾದಕ್ಕೆ ಕಾರಣವಾಯಿತು. ಚರಿತ್ರೆ ಗೊತ್ತಿಲ್ಲದವರು ಚರಿತ್ರೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಪಟ್ಟಣದಲ್ಲಿ ಟಿಪ್ಪು ಮಸೀದಿ ಇದ್ದು, ಪಕ್ಕದಲ್ಲಿ ದೇವಸ್ಥಾನವೂ ಇದೆ. ಒಂದೆಡೆ ಅಲ್ಲ ವೋ ಅಕ್ಬರ್ ಅಂತಾರೆ, ಮತ್ತೊಂದೆಡೆ ಗಂಟೆ ಟನ್, ಟನ್ ಅಂತ ಹೊಡಿತಾರೆ. ಎರಡರಲ್ಲು ಟಿಪ್ಪು ಸುಲ್ತಾನ್ ಸಮಚಿತ್ತರಾಗಿದ್ದವರು ಎಂದರು. ಟಿಪ್ಪು ಸಮಾಜಕ್ಕೆ ಕಂಟಕವಾಗಿದ್ದ ದೇವದಾಸಿ ಪದ್ಧತಿ ರದ್ದು ಮಾಡಿದ್ದರು. ಜೊತೆಗೆ ಅವರ ಕಾಲದಲ್ಲಿ ಒಂದೇ ಒಂದು ಇಂಚು ಭೂಮಿಯನ್ನು ಉಳ್ಳವರಿಗೆ ಕೊಟ್ಟಿರಲಿಲ್ಲ. ದೇಶಕ್ಕೆ (ಸಿರಿಕಲ್ಚರ್) ರೇಷ್ಮೆ ತಂದರು. ರಣರಂಗದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ದೊಡ್ಡ ಸ್ವತಂತ್ರ ಸೇನಾನಿ. ಇದನ್ನು ಅರ್ಥ ಮಾಡಿಕೊಳ್ಳದೆ ಸ್ವತಂತ್ರ ಚಳವಳಿಗಾರ ವಿರುದ್ಧ ಮಾತನಾಡುತ್ತಾರೆ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.