
ಮಂಗಳೂರು: ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗ ರಚನೆ ಬಗ್ಗೆ ಸಮೀಕ್ಷೆ ಪೂರ್ಣಗೊಂಡಿದ್ದು, ಟೆಂಡರ್ ಬಾಕಿ ಇದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಹೇಳಿದ್ದಾರೆ. ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿದ ವೇಳೆ ಅವರು ಅಮೃತ ಭಾರತ್ ಯೋಜನೆಯಡಿ ಇಲ್ಲಿನ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿಯ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರಲ್ಲಿ ಮಾತನಾಡಿದರು. ಪ್ರಸ್ತಾವಿಕ ಶಿವಮೊಗ್ಗ-ಮಂಗಳೂರು ರೈಲು ಮಾರ್ಗ 332 ಕಿ.ಮೀ. ಇರಲಿದ್ದು, 3,300 ಕೋಟಿ ರು. ಯೋಜನಾ ವೆಚ್ಚ ಅಂದಾಜಿಸಲಾಗಿದೆ. ಈ ಮಾರ್ಗದ ಎಫ್ಎಲ್ಸಿ(ಫೈನಲ್ ಲೊಕೇಷನ್ ಸರ್ವೆ) ನಡೆದು ಅನುಮೋದನೆಗೊಂಡಿದ್ದು, ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದರು. ಹಾಸನ-ಮಂಗಳೂರು ನಡುವೆ 247 ಕಿ.ಮೀ. ರೈಲು ಹಳಿಯನ್ನು 8,300 ಕೋಟಿ ರು.ಗಳಲ್ಲಿ ದ್ವಿಗುಣಗೊಳಿಸುವ ಕಾರ್ಯದ ಎಫ್ಎಲ್ಸಿ ಪರಿಶೀಲನಾ ಹಂತದಲ್ಲಿದೆ ಎಂದರು.
ಮಂಗಳೂರು ಪ್ರತ್ಯೇಕ ರೈಲ್ವೆ ವಿಭಾಗ ಸೃಜಿಸುವ ಕಾರ್ಯ ಪ್ರಗತಿಯಲ್ಲಿದೆ. ಅದಕ್ಕೂ ಮುನ್ನ ಮಂಗಳೂರು ಒಳಗೊಂಡಿರುವ ಕೊಂಕಣ, ನೈರುತ್ಯ ಹಾಗೂ ದಕ್ಷಿಣ ರೈಲ್ವೆ ಈ ಮೂರು ವಿಭಾಗಗಳಲ್ಲಿ ಮಂಗಳೂರಿನ ಒಂದೇ ವಿಭಾಗದಡಿ ತರುವ ಬಗ್ಗೆ ಕೆಲಸ ಕಾರ್ಯಗಳು ನಡೆಯುತ್ತಿವೆ. ಆದಷ್ಟು ಶೀಘ್ರದಲ್ಲಿ ಈ ಬೇಡಿಕೆ ನೆರವೇರಲಿದೆ ಎಂದರು. ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಅನುಕೂಲವಾಗಲು ಸಮೀಪದಲ್ಲೇ ರೈಲು ನಿಲ್ದಾಣ ರಚನೆ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಸೋಮಣ್ಣ ಹೇಳಿದರು.
ಭೂಸ್ವಾಧೀನ ನಡೆಸಿ ಕೈಗೊಳ್ಳುವ ರೈಲ್ವೆ ಇಲಾಖೆಯ ಕಾಮಗಾರಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಮೊತ್ತ ನೀಡದೆ ವೃಥಾ ವಿಳಂಬಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಭೂಸ್ವಾಧೀನದ ಕಾಮಗಾರಿಗಳಿಗೆ ರೈಲ್ವೆಯೇ ಪರಿಹಾರ ಮೊತ್ತ ಪಾವತಿಸಿ ಕಾಮಗಾರಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಸೋಮಣ್ಣ ಹೇಳಿದರು.
ಮಂಗಳೂರಿನ ಗೂಡ್ಸ್ಶೆಡ್ ಬಳಿ ಖಾಲಿ ಕೋಚ್ ರೈಲುಗಳ ಸಂಚಾರದಿಂದಾಗಿ ಆಗಾಗ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಇದನ್ನು ನಿವಾರಿಸಲು ಸಂಸದರು, ಪಾಲಿಕೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಗತ್ಯವಿದ್ದರೆ ಭೂಸ್ವಾಧೀನ ನಡೆಸಿ ಕೆಳಸೇತುವೆ ರಚಿಸುವ ಬಗ್ಗೆ ಪರಿಶೀಲಿಸುವಂತೆ ಸಚಿವ ಸೋಮಣ್ಣ ರೈಲ್ವೆ ಅಧಿಕಾರಿಗಳಿಗೆ ತಿಳಿಸಿದರು. ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಹಣ ನೀಡದಿದ್ದರೆ ಕಾಮಗಾರಿ ವಿಳಂಬವಾಗುತ್ತದೆ ಎಂಬ ಸಂಸದ ಮಾತಿಗೆ ಉತ್ತರಿಸಿದ ಸಚಿವ ಸೋಮಣ್ಣ, ಇನ್ನು ಮುಂದೆ ತುರ್ತು ಕೆಲಸಗಳಿಗೆ ರೈಲ್ವೆಯಿಂದಲೇ ಭೂಸ್ವಾಧೀನಕ್ಕೆ ಪರಿಹಾರ ಮೊತ್ತ ನೀಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಮಂಗಳೂರು ಜಂಕ್ಷನ್ ಮತ್ತು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಗಳ ತ್ವರಿತ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಮಂಗಳೂರು ಜಂಕ್ಷನ್ನಲ್ಲಿ 38 ಕೋಟಿ ರು.ಗಳಲ್ಲಿ ಅಭಿವೃದ್ಧಿ ಕಾಮಗಾರಿ ಅಕ್ಟೋಬರ್ನಲ್ಲಿ ಮುಕ್ತಾಯಗೊಳ್ಳಬೇಕು. ಇಲ್ಲಿ ಜಂಕ್ಷನ್ ಯಾರ್ಡ್ ಅಭಿವೃದ್ಧಿಗೊಳ್ಳಲಿದ್ದು, ಹೆಚ್ಚುವರಿ ಗೂಡ್ಸ್ ರೈಲು ಹಳಿ ರಚನೆಯಾಗಲಿದೆ ಎಂದರು. ಮಂಗಳೂರು ಸೆಂಟ್ರಲ್ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ರೂಪಿಸಬೇಕು. ಅಲ್ಲದೆ ಇಡೀ ಮಂಗಳೂರು ಪ್ರದೇಶದಲ್ಲಿ ರೈಲ್ವೆ ಅಭಿವೃದ್ಧಿಗೆ ಪ್ರತ್ಯೇಕ ಮಾಸ್ಟರ್ ಪ್ಲ್ಯಾನ್ ರೂಪಿಸುವಂತೆ ಜಿಲ್ಲಾಧಿಕಾರಿಗೆ ಸಚಿವರು ಸೂಚಿಸಿದರು. ಆರು ತಿಂಗಳಲ್ಲಿ ಇನ್ನಷ್ಟು ಪಾರದರ್ಶಕ ಬದಲಾವಣೆ ನಿರೀಕ್ಷಿಸಬಹುದು ಎಂದರು.
ಮಂಗಳೂರು ಸೆಂಟ್ರಲ್ ಹಾಗೂ ಜಂಕ್ಷನ್ ರೈಲು ನಿಲ್ದಾಣದಲ್ಲಿ ಕನ್ನಡ ಬಲ್ಲ ಸಿಬ್ಬಂದಿ ನೇಮಿಸುವಂತೆ ಸಚಿವ ಸೋಮಣ್ಣ ಅಧಿಕಾರಿಗಳಿಗೆ ಹೇಳಿದರು. ಭಾಷಾ ಸಮಸ್ಯೆ ಉಂಟಾಗಬಾರದು. ಬೇರೆ ರಾಜ್ಯದವರಾಗಿದ್ದರೂ ಕರ್ನಾಟಕದಲ್ಲಿ ಕನಿಷ್ಠ ಸಂವಹನ ನಡೆಸಲು ಕನ್ನಡ ಭಾಷೆ ಕಲಿಯಬೇಕು ಎಂದು ತಾಕೀತು ಮಾಡಿದರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಫಾಲ್ಘಾಟ್ ರೈಲ್ವೆ ಅಧಿಕಾರಿ ಮಧುಕರ ರಾವತ್ ಮತ್ತಿತರರಿದ್ದರು.
ಮಂಗಳೂರು-ಬೆಂಗಳೂರು ನಡುವೆ ಬಹು ನಿರೀಕ್ಷಿತ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಜೂನ್ ತಿಂಗಳಲ್ಲಿ ಸಂಚಾರ ಆರಂಭಿಸಲಿದೆ. ಪ್ರಧಾನಿಯರು ಮಂಗಳೂರು ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಹೊಸ ರೈಲು ಸಂಚಾರಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಸಚಿವ ಸೋಮಣ್ಣ ಹೇಳಿದರು. ಬೆಂಗಳೂರು-ಕಾರವಾರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬೇಡಿಕೆ ಬಗ್ಗೆ ಮಾತನಾಡಿದ ಸಚಿವ ಸೋಮಣ್ಣ, ಕರಾವಳಿಯ ಮೂರು ಜಿಲ್ಲೆಗಳಲ್ಲಿ ಬಿಜೆಪಿ ಸಂಸದರು ಇದ್ದಾರೆ. ಅವರ ಬೇಡಿಕೆಯನ್ನು ಪರಿಶೀಲಿಸಬೇಕಾಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಸಕಲೇಶಪುರ-ಕುಕ್ಕೆ ಸುಬ್ರಹ್ಮಣ್ಯ ಮಾರ್ಗ ವರೆಗೆ 55 ಕಿ.ಮೀ. ದೂರ ವಿದ್ಯುದೀಕರಣ ಕಾಮಗಾರಿ ಮುಕ್ತಾಯಗೊಂಡಿದೆ. ಹೀಗಾಗಿ ಬೆಂಗಳೂರು-ಮಂಗಳೂರು ನಡುವೆ ಪೂರ್ತಿಯಾಗಿ ವಿದ್ಯುದೀಕರಣವಾಗಿದ್ದು, ಹೆಚ್ಚುವರಿ ರೈಲು ಸಂಚಾರಕ್ಕೆ ಅವಕಾಶಗಳು ತೆರೆದುಕೊಂಡಿವೆ ಎಂದರು.
ಮಂಗಳೂರು-ಕುಕ್ಕೆ ಸುಬ್ರಹ್ಮಣ್ಯ ಮಾರ್ಗ ನಡುವೆ ಮೆಮು ರೈಲು ಓಡಾಟಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಫಾಲ್ಘಾಟ್ ರೈಲ್ವೆ ಅಧಿಕಾರಿಗೆ ಸಚಿವ ಸೋಮಣ್ಣ ಸೂಚಿಸಿದರು. ಈ ಮಾರ್ಗದಲ್ಲಿ ಹಾಲಿ ಸಂಚರಿಸುವ ಪ್ಯಾಸೆಂಜರ್ ಓಡಾಟವನ್ನು ಇನ್ನಷ್ಟು ಹೆಚ್ಚಳಗೊಳಿಸುವ ಉದ್ದೇಶ ಇದೆ ಎಂದರು.
ಪಂಚಗಂಗಾ ಎಕ್ಸ್ಪ್ರೆಸ್ ಸೇರಿದಂತೆ ಬೆಂಗಳೂರು-ಮಂಗಳೂರು-ಕಾರವಾರ ನಡುವಿನ ಯಾವುದೇ ರೈಲುಗಳ ವೇಳಾಪಟ್ಟಿ ಪರಿಷ್ಕರಿಸಿ ವಿಳಂಬಿಸುವ ಯೋಚನೆ ಇಲ್ಲ. ಮುಂಬೈ ಸಿಎಸ್ಟಿ, ಗೋಮಟೇಶ್ವರ ಎಕ್ಸ್ಪ್ರೆಸ್ ಹಾಗೂ ಯಶವಂತಪುರ ಎಕ್ಸ್ಪ್ರೆಸ್ ರೈಲನ್ನು ಮಂಗಳೂರು ಸೆಂಟ್ರಲ್ಗೆ ವಿಸ್ತರಿಸಲು ಪರಿಶೀಲಿಸಲಾಗುವುದು. ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಮತ್ತೆ ಹೆಚ್ಚುವರಿ ಫ್ಲ್ಯಾಟ್ ಫಾರಂ ರಚನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.