ನೆಲಮಂಗಲದ ಹಿಪ್ಪೆ ಆಂಜನೇಯ ಬಡಾವಣೆಯಲ್ಲಿ, ಅತ್ಯಂತ ವಿಷಕಾರಿ ಕೊಳಕು ಮಂಡಲ ಜಾತಿಗೆ ಸೇರಿದ 16 ಹಾವಿನ ಮರಿಗಳನ್ನು ರಕ್ಷಿಸಲಾಗಿದೆ. ಇನ್ನೂ 20ಕ್ಕೂ ಹೆಚ್ಚು ಮರಿಗಳು ತಪ್ಪಿಸಿಕೊಂಡಿದ್ದು, ಈ ಹಾವು ಕಚ್ಚಿದರೆ 30 ನಿಮಿಷದಲ್ಲಿ ಚಿಕಿತ್ಸೆ ಸಿಗದಿದ್ದರೆ ಸಾವು ನಿಶ್ಚಿತ ಎಂದು ತಜ್ಞರು ಎಚ್ಚರಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ನಿವಾಸಿಗಳು ತೀವ್ರ ಆತಂಕಕ್ಕೊಳಗಾಗುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಹಿಪ್ಪೆ ಆಂಜನೇಯ ಬಡಾವಣೆಯಲ್ಲಿ ತೀರಾ ವಿಷಪೂರಿತ ಜಾತಿಗೆ ಸೇರಿದ ಬರೋಬ್ಬರಿ 16 ಹಾವಿನ ಮರಿಗಳನ್ನು ರಕ್ಷಿಸಲಾಗಿದೆ. ಇವೆಲ್ಲವೂ ಜಗತ್ತಿನ ಅತ್ಯಂತ ಅಪಾಯಕಾರಿ ಹಾವಿನ ತಳಿಗಳಲ್ಲಿ ಒಂದಾದ ‘ರೆಸಲ್ ವೈಪರ್’ (Russell's Viper) ಅಂದರೆ ಕನ್ನಡದಲ್ಲಿ ‘ಕೊಳಕು ಮಂಡಲ’ ಜಾತಿಗೆ ಸೇರಿದ ಹಾವಿನ ಮರಿಗಳಾಗಿವೆ.
25
ಫಾರ್ಮ್ ಹೌಸ್ ಬಳಿ ಕಂಡ ಉರಗಗಳ ರಾಶಿ
ಬಡಾವಣೆಯ ನಿವಾಸಿ ಸುಬ್ರಮಣಿ ಎಂಬುವವರಿಗೆ ಸೇರಿದ ಫಾರ್ಮ್ ಹೌಸ್ ಬಳಿ ಈ ಹಾವಿನ ಮರಿಗಳು ಮೊದಲು ಕಾಣಿಸಿಕೊಂಡಿವೆ. ಕೇವಲ ಮೂರು ನಾಲ್ಕು ದಿನಗಳ ಹಿಂದಷ್ಟೇ ಜನಿಸಿರುವ ಈ ಮರಿಗಳನ್ನು ಕಂಡು ಸ್ಥಳೀಯರು ತಕ್ಷಣವೇ ಭಯಭೀತರಾಗಿದ್ದಾರೆ. ಕೂಡಲೇ ಅವರು ನೆಲಮಂಗಲದ ಪ್ರಸಿದ್ಧ ಉರಗ ರಕ್ಷಕ ಸ್ನೇಕ್ ಶಿವರುದ್ರಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಶಿವರುದ್ರಪ್ಪ ಅವರು ಹಾವಿನ ಮರಿಗಳನ್ನು ಹಿಡಿಯುವ ಕಾರ್ಯಾಚರಣೆ ಆರಂಭಿಸಿದರು.
35
ನೆಲದ ಅಡಿಯಲ್ಲಿ ಅಡಗಿದ್ದವು 40ಕ್ಕೂ ಹೆಚ್ಚು ಹಾವುಗಳು!
ಕಾರ್ಯಾಚರಣೆಯ ಆಘಾತಕಾರಿ ಸತ್ಯವನ್ನು ಬಿಚ್ಚಿಟ್ಟ ಉರಗ ತಜ್ಞ ಶಿವರುದ್ರಪ್ಪ, 'ನಾವು ಆರಂಭದಲ್ಲಿ ಸ್ಥಳಕ್ಕೆ ಬಂದು ಕೇವಲ 2-3 ಹಾವುಗಳನ್ನು ಹಿಡಿದು ರಕ್ಷಣೆ ಮಾಡಲು ಮುಂದಾದೆವು. ಆದರೆ ಅಲ್ಲಿನ ನೆಲದ ಅಡಿಯಲ್ಲಿ ಪರಿಶೀಲಿಸಿದಾಗ ನಮಗೆ ತಲೆತಿರುಗಿದಂತಾಯಿತು. ಅಲ್ಲಿ ಬರೋಬ್ಬರಿ 30 ರಿಂದ 40 ಕೊಳಕು ಮಂಡಲ ಹಾವಿನ ಮರಿಗಳು ಅಡಗಿಕೊಂಡಿದ್ದವು! ಎಲ್ಲ ಹಾವುಗಳನ್ನು ಒಟ್ಟಿಗೆ ಹಿಡಿಯುವಷ್ಟರಲ್ಲಿ ಬಹುತೇಕ ಮರಿಗಳು ಬೇರೆ ಬೇರೆ ದಿಕ್ಕಿನಲ್ಲಿ ತಪ್ಪಿಸಿಕೊಂಡು ಓಡಿಹೋದವು. ಸದ್ಯಕ್ಕೆ ನಾವು 16 ಹಾವಿನ ಮರಿಗಳನ್ನು ಮಾತ್ರ ಸುರಕ್ಷಿತವಾಗಿ ಹಿಡಿದು ಸಂರಕ್ಷಿಸಿದ್ದೇವೆ' ಎಂದು ತಿಳಿಸಿದರು. ರಕ್ಷಿಸಲಾದ ಈ ಎಲ್ಲಾ ಮರಿಗಳನ್ನು ಜನವಸತಿ ಇಲ್ಲದ ದಟ್ಟ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಡಲಾಗುವುದು ಎಂದು ಹೇಳಿದ್ದಾರೆ.
ಕೊಳಕು ಮಂಡಲ ಹಾವುಗಳ ಭೀಕರತೆಯ ಬಗ್ಗೆ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ಉರಗ ತಜ್ಞ ಶಿವರುದ್ರಪ್ಪ, ಈ ಹಾವು ಕಚ್ಚಿದರೆ ಎಷ್ಟು ಅಪಾಯಕಾರಿ ಎಂಬುದನ್ನು ವಿವರಿಸಿದ್ದಾರೆ.
'ಈ ಕೊಳಕು ಮಂಡಲ (Russell's Viper) ಹಾವು ಅತ್ಯಂತ ತೀಕ್ಷ್ಣವಾದ ವಿಷವನ್ನು ಹೊಂದಿರುತ್ತದೆ. ಒಂದು ವೇಳೆ ಈ ಹಾವು ಕಚ್ಚಿದರೆ ತಕ್ಷಣವೇ ಅಂದರೆ ಕೇವಲ 20 ರಿಂದ 30 ನಿಮಿಷಗಳ ಒಳಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಾಗಿ ಆ್ಯಂಟಿ-ವೆನಮ್ ಚಿಕಿತ್ಸೆ ಪಡೆಯಬೇಕು. ನಿರ್ಲಕ್ಷ್ಯ ಮಾಡಿದರೆ ಕಿಡ್ನಿ ವೈಫಲ್ಯ (Kidney Failure), ಬಹು ಅಂಗಾಂಗ ವೈಫಲ್ಯ, ಉಸಿರಾಟದ ತೊಂದರೆ ಉಂಟಾಗುತ್ತದೆ ಹಾಗೂ ಬಾಯಲ್ಲಿ ರಕ್ತ ಬಂದು ಮನುಷ್ಯರು ಸಾವನ್ನಪ್ಪುತ್ತಾರೆ' ಎಂದು ಶಿವರುದ್ರಪ್ಪ ಆತಂಕ ಹಂಚಿಕೊಂಡಿದ್ದಾರೆ
55
20 ಪರಾರಿ, ಜನರಲ್ಲಿ ಗಾಬರಿ
ಸದ್ಯ 16 ಹಾವುಗಳನ್ನು ಹಿಡಿದಿರುವುದರಿಂದ ಬಡಾವಣೆಯ ಜನರು ನಿಟ್ಟುಸಿರು ಬಿಟ್ಟಿದ್ದಾರಾದರೂ, ಇನ್ನೂ 20ಕ್ಕೂ ಹೆಚ್ಚು ಮರಿಗಳು ಸುತ್ತಮುತ್ತಲೇ ತಪ್ಪಿಸಿಕೊಂಡಿರುವುದರಿಂದ ಆತಂಕದ ನೆರಳು ಸಂಪೂರ್ಣವಾಗಿ ಸರಿದಿಲ್ಲ. ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತಲಿನ ಪೊದೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಅರಣ್ಯ ಇಲಾಖೆ ಸೂಚಿಸಿದೆ.