ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ನಿನ್ನೆ ನಡೆದ ಉತ್ಸವದ ಪೂರ್ವಭಾವಿ ಸಭೆಯು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಸಚಿವ ಶಿವರಾಜ ತಂಗಡಗಿ ಅವರ ಪುತ್ರ ಶಶಿಕಿರಣ್, ಜಿಲ್ಲಾಡಳಿತದ ಅಧಿಕೃತ ಸಭೆಯಲ್ಲಿ ವೇದಿಕೆ ಮೇಲೆ ಕುಳಿತು ದರ್ಬಾರ್ ನಡೆಸಿದ್ದಾರೆ
ತಹಶೀಲ್ದಾರ್ಗಿಂತ ದೊಡ್ಡವನಾದನಾ ಸಚಿವ ಶಿವರಾಜ ತಂಗಡಗಿ ಪುತ್ರ?
ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ನಿನ್ನೆ ನಡೆದ ಉತ್ಸವದ ಪೂರ್ವಭಾವಿ ಸಭೆಯು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಸಚಿವ ಶಿವರಾಜ ತಂಗಡಗಿ ಅವರ ಪುತ್ರ ಶಶಿಕಿರಣ್, ಜಿಲ್ಲಾಡಳಿತದ ಅಧಿಕೃತ ಸಭೆಯಲ್ಲಿ ವೇದಿಕೆ ಮೇಲೆ ಕುಳಿತು ದರ್ಬಾರ್ ನಡೆಸಿದ್ದಾರೆ. ಶಿಷ್ಟಾಚಾರದ ಪ್ರಕಾರ ಸಭೆ ನಡೆಸಬೇಕಿದ್ದ ಅಧಿಕಾರಿಗಳು ಮೂಲೆಗುಂಪಾಗಿದ್ದು, ಸಚಿವರ ಪುತ್ರನಿಗೆ ಸಿಕ್ಕ 'ವಿಶೇಷ ಮರ್ಯಾದೆ' ಈಗ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದೆ.
24
ತಹಶೀಲ್ದಾರ್ ನಿಂತಿದ್ದರೂ ಚೇರ್ ಕೊಡದ ಜಿಲ್ಲಾಡಳಿತ
ಆಘಾತಕಾರಿ ವಿಷಯವೆಂದರೆ, ಸಭೆಯಲ್ಲಿ ವೇದಿಕೆಯ ಮೇಲೆ ಕನಕಗಿರಿ ತಹಶೀಲ್ದಾರ್ ವಿಶ್ವನಾಥ್ ಮುರಡಿ ಮತ್ತು ತಾಲ್ಲೂಕು ಪಂಚಾಯತ್ ಇಓ ರಾಜಶೇಖರ್ ಅವರಿಗೆ ಕುಳಿತುಕೊಳ್ಳಲು ಕುರ್ಚಿಯೇ ಇರಲಿಲ್ಲ. ಕ್ಷೇತ್ರದ ಜವಾಬ್ದಾರಿಯುತ ಅಧಿಕಾರಿಗಳು ಸಭೆಯ ಉದ್ದಕ್ಕೂ ನಿಂತುಕೊಂಡೇ ಇದ್ದರೆ, ಯಾವುದೇ ಸಾಂವಿಧಾನಿಕ ಹುದ್ದೆಯಲ್ಲದ ಸಚಿವರ ಪುತ್ರ ಶಶಿಕಿರಣ್ ಮಾತ್ರ ಕುರ್ಚಿಯ ಮೇಲೆ ರಾಜಾರೋಷವಾಗಿ ಕುಳಿತಿದ್ದರು
34
ಸಚಿವ ಶಿವರಾಜ ತಂಗಡಗಿ ಪುತ್ರನ ದರ್ಬಾರ್
ಕನಿಷ್ಟ ಪಕ್ಷ ಪಕ್ಕದಲ್ಲಿ ನಿಂತ ಅಧಿಕಾರಿಗಳನ್ನ ನೋಡಿಯಾದ್ರೂ ಕುರ್ಚಿ ವ್ಯವಸ್ಥೆ ಮಾಡುವಂತೆ ಸಚಿವ ಶಿವರಾಜ ತಂಗಡಗಿಯೂ ಹೇಳಲಿಲ್ಲ. ಪುತ್ರನೂ ಹೇಳಲಿಲ್ಲ. ಜಿಲ್ಲಾಡಳಿತದ ಈ ನಡೆಯು ಅಧಿಕಾರಿಗಳ ಸ್ವಾಭಿಮಾನವನ್ನು ಸಚಿವರ ಪುತ್ರನ ಪಾದದ ಕೆಳಗೆ ಇಟ್ಟಂತಿದೆ ಟೀಕೆ ವ್ಯಕ್ತವಾಗಿದೆ..
ಸರಕಾರಿ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮಾತ್ರ ಸ್ಥಾನವಿರಬೇಕು ಎಂಬ ನಿಯಮವಿದೆ. ಆದರೆ ಇಲ್ಲಿ ಜಿಲ್ಲಾಡಳಿತವೇ ಸಚಿವರ ಪುತ್ರನಿಗೆ ಕುರ್ಚಿ ಹಾಕಿ, ರಾಜ ಮರ್ಯಾದೆ ನೀಡಿದೆ. ಅತ್ತ ಜವಾಬ್ದಾರಿಯುತ ಅಧಿಕಾರಿಗಳನ್ನು ಸಭೆಯುದ್ದಕ್ಕೂ ನಿಲ್ಲಿಸಿ ಸಚಿವರ ಮಗನಿಗೆ ಆದ್ಯತೆ ನೀಡಿದ ಜಿಲ್ಲಾಡಳಿತದ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ಪ್ರಜಾಪ್ರಭುತ್ವವೋ ಅಥವಾ ಸಚಿವರ ಕುಟುಂಬದ 'ಖಾಸಗಿ ದರ್ಬಾರ್'ವೋ ಎಂಬ ಪ್ರಶ್ನೆ ಎದ್ದಿದೆ.
ವಿಡಿಯೋ ವೈರಲ್
ಕನಕಗಿರಿ ಉತ್ಸವದ ಹೆಸರಿನಲ್ಲಿ ನಡೆಯುತ್ತಿರುವ ಈ 'ಪುತ್ರ ವ್ಯಾಮೋಹ'ದ ಸಭೆಯ ವಿಡಿಯೋಗಳು ಈಗ ವೈರಲ್ ಆಗುತ್ತಿದ್ದು, ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.